ಸಾರಾಂಶ
ಸಕಲೇಶಪುರ: ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾದಂತೆ ಆತ್ಮನಿರ್ಭರ ಭಾರತದ ಕನಸು ಸಾಕಾರಗೊಳ್ಳಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ತಾಲೂಕು ಆಡಳಿತ ಶುಕ್ರವಾರ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಕ್ಷಾಂತರ ಮಹನೀಯರ ಬಲಿದಾನದಿಂದ ದೂರೆತಿರುವ ಸ್ವಾತಂತ್ರ್ಯ ಭಾರತ ಅಭಿವೃದ್ಧಿಯತ್ತ ಸಾಗುತ್ತಿದ್ದು ಇಂದು ನಮ್ಮ ದೇಶದ ಅಭಿವೃಯನ್ನು ತಡೆಯುವ ನಿಟ್ಟಿನಲ್ಲಿ ಹಲವು ದೇಶಗಳು ಹಲವು ಕುತಂತ್ರಗಳನ್ನು ಹೆಣೆಯುತ್ತಿವೆ. ಇವುಗಳನ್ನೆಲ್ಲ ಮೆಟ್ಟಿ ನಿಂತು ದೇಶ ಅಭಿವೃದ್ಧಿಯಾಗಬೇಕಾದರೆ ದೇಶದ ಉತ್ಪಾದನಾ ವಲಯ ಬೆಳೆಯಬೇಕು ಹಾಗೂ ನಮ್ಮ ದೇಶದಲ್ಲಿ ಸಿದ್ದಗೊಂಡ ಉತ್ಪನ್ನ ಬಳಸುವ ಮೂಲಕ ಸ್ವಾವಲಂಬಿ ಭಾರತ ನಿರ್ಮಾಣ ಕ್ಕೆ ಎಲ್ಲರೂ ಸಹಕರಿಸಬೇಕು. ವಿದ್ಯಾರ್ಥಿಗಳು ಹೆಚ್ಚೆಚ್ಚು ವೃತ್ತಿಪರತೆ ಬೆಳಸಿಕೊಂಡಾಗ ದೇಶದ ಅಭಿವೃದ್ಧಿಗೆ ನೆರವಾಗಲಿದೆ ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ರಾಜೇಶ್, ಸಕಲ ಸುಖಸಂಪತ್ತನ್ನು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹನೀಯರ ಗುಣವನ್ನು ಇಂದಿನ ಯುವ ಜನತೆ ಅಲ್ಪವಾದರೂ ಅಳವಡಿಸಿಕೊಂಡಾಗ ಮಹನೀಯರ ತ್ಯಾಗಕ್ಕೂ ಬೆಲೆ ಬರಲಿದೆ ಎಂದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಸಲಾಯಿತು. ಮಳೆಯ ನಡುವೆ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಹಲವು ಶಾಲೆಯ ಮಕ್ಕಳು ನೃತ್ಯರೂಪಕ ನಡೆಸಿಕೊಟ್ಟರು. ತಹಸೀಲ್ದಾರ್ ಸುಪ್ರೀತಾ, ಪುರಸಬಾ ಅಧ್ಯಕ್ಷೆ ಜ್ಯೋತಿ ರಾಜ್ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.