ಸಾರಾಂಶ
ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ನ.೨೩ರಂದು ಉಡುಪಿ ಸಮೀಪದ ಕೆಳಾರ್ಕಳಬೆಟ್ಟಿನಲ್ಲಿ ೧೭ನೇ ವಾರ್ಷಿಕೋತ್ಸವದ ಸಮಾರಂಭ ಏರ್ಪಡಿಸಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪ್ರಗತಿಯೆಂದರೆ ಕನ್ನಡ ನಾಡಿನ ಪ್ರಗತಿಯೇ ಆಗಿದೆ ಎಂದು ದೆಹಲಿ ಕನ್ನಡಿಗ ಪ್ರತಿಕೆ ಸಂಪಾದಕ ಬಾ. ಸಾಮಗ ಹೇಳಿದರು.ಸಾಮಗ ಅವರು ಶ್ರೀ ವಿಷ್ಣುಮೂರ್ತಿ ಯಕ್ಷಗಾನ ಕಲಾಸಂಘ ನ.೨೩ರಂದು ಉಡುಪಿ ಸಮೀಪದ ಕೆಳಾರ್ಕಳಬೆಟ್ಟಿನಲ್ಲಿ ಏರ್ಪಡಿಸಿದ್ದ ೧೭ನೇ ವಾರ್ಷಿಕೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕರಾವಳಿಯಲ್ಲಿ ಮೆಚ್ಚುಗೆ ಪಡೆದ ಯಕ್ಷಗಾನವು ಕಾಲಕಾಲಕ್ಕೆ ಇತಿಮಿತಿಯಲ್ಲಿ ಬದಲಾವಣೆಗೊಂಡು ಉತ್ತಮ ಅಭಿರುಚಿಯನ್ನು ಬೆಳೆಸಿ ಕನ್ನಡ ವಾತಾವರಣವನ್ನು ಸೃಷ್ಟಿಸಿ ಯುವ ಜನಾಂಗದವರು ಸರಿಯಾದ ಮಾರ್ಗದಲ್ಲಿ ಮುನ್ನಡೆಯಲು ಕಾರಣವಾಗಿದೆ. ಕರ್ನಾಟಕದ ಜಾನಪದ ಕಲೆಗಳ ಕುರಿತು ಮರುಚಿಂತನೆ ಇಂದಿನ ಅಗತ್ಯವಾಗಿದೆ ಎಂದರು.ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಸದಾನಂದ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸಾಧಕ ಯಕ್ಷಗುರು ಬಡಾನಿಡಿಯೂರು ಕೇಶವ ರಾವ್ ಅವರನ್ನು ಸನ್ಮಾನಿಸಲಾಯಿತು.ಪ್ರಾಧ್ಯಾಪಕ ಸುಬ್ರಹ್ಮಣ್ಯ ಜೋಷಿ, ಕವಿ ದಿನೇಶ್ ಉಪ್ಪೂರು, ಕಲಾವಿದೆ ಮಮತಾ ಶೆಟ್ಟಿ, ಉದ್ಯಮಿಗಳಾದ ದಯಾನಂದ ಆಚಾರ್ಯ, ಶೇಷರಾಜ್, ಎಂ.ಕೆ. ಸುಕುಮಾರ್ ಶೆಟ್ಟಿ, ಸಕ್ಕಟ್ಟು ಜಯರಾಮಯ್ಯ ಮುಂತಾದವರು ಉಪಸ್ಥಿತರಿದ್ದರು. ರವಿನಂದನ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವೀರ ಬರ್ಬರೀಕ, ವಿದ್ಯುನ್ಮಾಲಿ ಕಾಳಗ, ಮಯಾಪುರಿ ವಿಜಯ, ದಕ್ಷಯಜ್ಞ, ಗಿರಿಜಾ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನಡೆಯಿತು.