ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಯಲ್ಲಾಪುರತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಪಟ್ಟಣದ ಸ.ಪ್ರ.ದ. ಕಾಲೇಜಿನಲ್ಲಿ ವಿಶ್ವ ಭೂಮಿ ದಿನಾಚರಣೆ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ತಾಲೂಕಿನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕುಮಾರ್ ಎಸ್. ಮಾತನಾಡಿ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ವಿವಿಧ ಪದ್ಯಗಳ ಮೂಲಕ ಮನಮುಟ್ಟುವಂತೆ ವಿವರಿಸಿದರು. ಕೈಗಾರಿಕೀಕರಣ ಮತ್ತು ಪರಿಸರ ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಅಭಿವೃದ್ಧಿ ಎಂಬುದು ಎಂದಿಗೂ ವಿನಾಶಕ್ಕೆ ದಾರಿಯಾಗಬಾರದು ಎಂದು ಎಚ್ಚರಿಸಿದರು.ನ್ಯಾಯವಾದಿ ಆರ್.ಕೆ. ಭಟ್ಟ ಉಪನ್ಯಾಸ ನೀಡಿ, ಭೂಮಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಸುಭದ್ರ ಪರಿಸರವನ್ನು ಹಸ್ತಾಂತರಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಇರುವ ಪೋಕ್ಸೋ ಮೊದಲಾದ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಹಿಳಾ ಸಂರಕ್ಷಣೆಯ ಅನಿವಾರ್ಯತೆಯನ್ನು ಸಭೆಗೆ ಮನವರಿಕೆ ಮಾಡಿಕೊಟ್ಟರು.ಅಪರ ಸರಕಾರಿ ನ್ಯಾಯವಾದಿ ಎನ್.ಟಿ. ಗಾಂವ್ಕರ್ ಮಾತನಾಡಿ, ಮಾನವನ ಸ್ವಾರ್ಥದಿಂದ ಇಂದು ಪರಿಸರ ನಾಶವಾಗುತ್ತಿದೆ. ಇಂದಿನ ಯುವಕರು ಈ ಪರಿಸರವನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ಪ್ರಮುಖವಾಗಿ ತೆಗೆದುಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಆರ್.ಡಿ. ಜನಾರ್ದನ್ ಮಾತನಾಡಿದರು.ಯಲ್ಲಾಪುರದ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅನಿತಾ ಕುಮಾರಿ ಎಸ್., ಅರೆಕಾಲಿಕ ಸ್ವಯಂಸೇವಕ ಸುಧಾಕರ ನಾಯಕ, ಸಂಜೀವ್ ಕುಮಾರ್ ಹೊಸ್ಕೇರಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಓಂಪ್ರಕಾಶ್ ನಾಯ್ಕ ಮತ್ತು ಮಹಿಳಾ ಸಬಲೀಕರಣ ವೇದಿಕೆಯ ಸಂಚಾಲಕಿ ಶಾಂತೇರಿ ದಾಮೋದರ ಪೈ ಉಪಸ್ಥಿತರಿದ್ದರು.ಆಯೇಶಾ ಅಂಜುಮ್ ಪ್ರಾರ್ಥಿಸಿದರು. ವೈಶಾಲಿ ದೇವಳಿ ಸ್ವಾಗತಿಸಿದರು. ಸಕಿನಾ ಶೇಖ್ ನಿರ್ವಹಿಸಿದರು. ದಿವ್ಯಾ ಗೌಡ ವಂದಿಸಿದರು.