ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬೇಸಿಗೆ ರಂಗೇರಿದೆ. ಬರೋಬ್ಬರಿ 37 ಡಿಗ್ರಿ ಸೇಲ್ಸಿಯಸ್ಗಿಂತ ಅಧಿಕ ಬಿಸಿಲು ಇದ್ದು. ಬಿಸಿಲ ಝಳಕ್ಕೆ ಜನ ಜಾನುವಾರು ತತ್ತರಿಸಿವೆ. ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲ ತಾಪ ಏರುತ್ತಲಿದೆ. ಬಿರು ಬೀಸಿಲಿಗೆ ಜನರು ಬೆಳಗ್ಗೆಯಿಂದಲೇ ಸುಸ್ತಾಗುತ್ತಿದ್ದಾರೆ. ಗಿಡ,ಮರಗಳ ನೆರಳಿನಲ್ಲಿ ಜನರು ಕಾಲ ಕಳೆಯುತ್ತಿದ್ದಾರೆ. ಇನ್ನೂ ಕೆಲಸಕ್ಕೆಂದು ಪಟ್ಟಣಕ್ಕೆ ಆಗಮಿಸುವ ಜನರು ಬಿಸಿಲಿನಿಂದ ಬಾಯಾರಿ ಬಿಡುತ್ತಾರೆ. ಬಾಯಾರಿಕೆ ತಪ್ಪಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಷ್ಟು ತಂಪು ಪಾನೀಯ ಕುಡಿದರೂ ಬಾಯಾರಿಕೆ ತಪ್ಪದ್ದಾಗಿದೆ.ತಂಪು ಪಾನೀಯ ಮೊರೆ: ಪಟ್ಟಣದ ತುಂಬೆಲ್ಲ ಸದ್ಯ ತಂಪು ಪಾನೀಯಗಳ ಮಾರಾಟ ಕಂಡು ಬರುತ್ತಿದ್ದು. ಕಬ್ಬಿನ ಹಾಲು, ಹಣ್ಣಿನ ಜ್ಯೂಸ್, ಮಜ್ಜಿಗೆ, ಎಳನೀರು, ಕೂಲ್ ಡ್ರಿಂಕ್ಸ್, ಹಣ್ಣುಗಳ ಮಾರಾಟ ಜೋರಾಗಿದೆ. ಜನರು ಬಾಯಾರಿಕೆಯಿಂದ ತಪ್ಪಿಸಿಕೊಳ್ಳಲು ಜ್ಯೂಸ್, ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ.
ದುಬಾರಿಯಾದ ಎಳನೀರು: ಬೇಸಿಗೆ ಹಿನ್ನೆಲೆ ಜನರು ಎಳನೀರಿಗೆ ₹50 ಕೊಟ್ಟು ಕುಡಿಯುತ್ತಿದ್ದಾರೆ. ದಾವಣಗೆರೆ ಹಾಗೂ ಕರಾವಳಿ ಭಾಗದಿಂದ ಬಯಲುಸೀಮೆ ಭಾಗಕ್ಕೆ ಎಳನೀರು ಬರುತ್ತಿದೆ. ಆದರೆ ಎಳನೀರು ಸಮರ್ಪಕವಾಗಿ ಬೇಡಿಕೆಗೆ ತಕ್ಕಷ್ಟು ಬಾರದ ಹಿನ್ನೆಲೆ ಬೆಲೆ ಸಹ ಹೆಚ್ಚಳವಾಗಿದೆ. ಅಂಗಡಿಕಾರರು ಹೇಳಿದ ಬೆಲೆಗೆ ಗ್ರಾಹಕ ಹಣ ನೀಡುತ್ತಿದ್ದಾನೆ.ಸಂಜೆಯಾದರೂ ತಪ್ಪದ ಝಳ: ಸಂಜೆಯಾದರೂ ಸಹ ಬಿಸಿಲ ಝಳ ತಪ್ಪದ್ದಾಗಿದೆ. ಚಿಕ್ಕ ಮಕ್ಕಳು, ವಯೋವೃದ್ಧರು ಬಿಸಲಿ ಝಳಕ್ಕೆ ನರಳಾಡುವಂತಾಗಿದೆ. ಕಲ್ಲಂಗಡಿ, ಕರ್ಬೂಜ್, ಬಾಳೆ ಹಣ್ಣುಗಳನ್ನು ಜನರು ಹೆಚ್ಚು ಖರೀದಿಸಿ ಸೇವಿಸುತ್ತಿದ್ದಾರೆ.
ಬಿಸಿಲ ಧಗೆ ಹೆಚ್ಚು ಇರುವುದರಿಂದ ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರ ಬಗ್ಗೆ ಕಾಳಜಿ ವಹಿಸಬೇಕು. ಹೆಚ್ಚು ಹೆಚ್ಚು ನೀರು ಕುಡಿಯಬೇಕು. ನೀರಿನಂತಹ ಆಹಾರ ಪದಾರ್ಥ ಸೇವಿಸಬೇಕು. ಆದಷ್ಟು ಮಸಾಲೆ ಪದಾರ್ಥ ಸೇವಿಸಬಾರದು. ತರಕಾರಿ, ಹಣ್ಣು ಸೇವನೆ ಮಾಡಬೇಕು. ಕಾಟನ್ ಬಟ್ಟೆ ಧರಿಸಬೇಕು. ಹೊರಗಡೆ ಹೋಗುವಾಗ ಛತ್ರಿ ಬಳಕೆ ಮಾಡಬೇಕು. ಚಿಕ್ಕ ಮಕ್ಕಳಿಗೆ ತಣ್ಣೀರ ಬಟ್ಟೆಯಿಂದ ಆಗಾಗ ಮೈ ವರೆಸಬೇಕು. ಆದಷ್ಟು ಬಿಸಿಲಿನ ಪ್ರಖರತೆಯಿಂದ ದೂರ ಇರಬೇಕು ಎಂದು ಮಂಗಳೂರ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸಿ.ಎಂ.ಹಿರೇಮಠ ತಿಳಿಸಿದ್ದಾರೆ.
ಕುಕನೂರಿನಲ್ಲಿ ಅಪಾರ ಬಿಸಲಿನ ಧಗೆ ಇದ್ದು. ಜನರು ಬಾಯಾರಿಕೆಗಾಗಿ ಹೆಚ್ಚು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಮಕ್ಕಳು ಹಾಗೂ ವಯೋವೃದ್ಧರು ಬಿಸಿಲ ಪ್ರಖರತೆಗೆ ಬೇಸತ್ತಿದ್ದಾರೆ. ಚಿಕ್ಕ ಮಕ್ಕಳು ಬಿಸಿಲ ಝಳದಿಂದ ಬಳಲುವಂತ್ತಾಗಿದೆ. ಬಿಸಿಲನಲ್ಲಿ ಹೆಚ್ಚು ಓಡಾಡದಂತ್ತಾಗಿದೆ ಎಂದು ಕುಕನೂರು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ ತಿಳಿಸಿದ್ದಾರೆ.