ಸಾರಾಂಶ
ಬೆಳಗ್ಗೆಯಿಂದಲೇ ಶ್ರೀ ಮಹದೇಶ್ವರ ಸ್ವಾಮಿಗೆ ಹೋಮ, ಹವನ, ಗಂಗೆ ಪೂಜೆ, ಗಣಪತಿ ಹೋಮ, ಪುಣ್ಯಹ ಮುಂತಾದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು
ಕನ್ನಡಪ್ರಭ ವಾರ್ತೆ ಹುಲ್ಲಹಳ್ಳಿ
ಛತ್ರ ಹೋಬಳಿಯ ಅಹಲ್ಯ ಗ್ರಾಮದಲ್ಲಿ ಶ್ರೀ ಮಹದೇಶ್ವರ ಸ್ವಾಮಿ ಜಾತ್ರಾ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಸಾವಿರಾರು ಭಕ್ತರು ರಥವನ್ನು ಎಳೆದರು. ಹರಕೆ ಹೊತ್ತ ಭಕ್ತರು ಕೆಂಡದ ಮೇಲೆ ನಡೆದು ಹರಕೆ ತೀರಿಸಿದರು.
ಬೆಳಗ್ಗೆಯಿಂದಲೇ ಶ್ರೀ ಮಹದೇಶ್ವರ ಸ್ವಾಮಿಗೆ ಹೋಮ, ಹವನ, ಗಂಗೆ ಪೂಜೆ, ಗಣಪತಿ ಹೋಮ, ಪುಣ್ಯಹ ಮುಂತಾದ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.ರಾತ್ರಿ ಊರಿನ ಪ್ರಮುಖ ಬೀದಿಗಳಲ್ಲಿ ಮದ್ದು ಗುಂಡು, ಬಿರುಸು ಬಾಣಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಹಾಲರವಿ ತರುವ ಉತ್ಸವದೊಂದಿಗೆ ಡೇರಿ ಮಹೇಶ ಅವರು ಶ್ರೀ ವೀರಭದ್ರೇಶ್ವರ ಸ್ವಾಮಿ ಹಲಗೆಯನ್ನು ಹೊತ್ತು ಮೆರವಣಿಗೆ ಮಾಡಲಾಯಿತು.
ಮಹದೇಶ್ವರ ಸ್ವಾಮಿ ದೇವಸ್ಥಾನ ಮತ್ತು ಗ್ರಾಮವನ್ನು ವಿದ್ಯುತ್ ದೀಪಗಳಿಂದ ಮತ್ತು ವಿವಿಧ ರಂಗೋಲಿಗಳಿಂದ ಸಿಂಗರಿಸಲಾಗಿತ್ತು.ನಂತರ ವಿವಿಧ ಹೂಗಳಿಂದ ಅಲಂಕರಿಸಿದ ನೂತನ ರಥದಲ್ಲಿ ಶ್ರೀ ಮಹದೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಂದಿ ಕಂಬ. ವೀರಗಾಸೆ ಕುಣಿತ ಸತ್ತಿಗೆ ಚಾಮರ, ತಮಾಟೆ ನಗಾರಿ ಹಾಗೂ ಮಂಗಳವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನೂರಾರು ಭಕ್ತರು ರಥವನ್ನು ಎಳೆದು ಪುನೀತರಾದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ನೆರೆದಿದ್ದರು.