ಭಕ್ತರು ಜೀವನದಲ್ಲಿ ಕೆಟ್ಟ ವಿಚಾರಗಳನ್ನು ದೂರವಿಟ್ಟು ಸದ್ವಿಚಾರಗಳನ್ನು ಅಳವಡಿಸಿಕೊಂಡು ಬದುಕು ಬಂಗಾರವಾಗಲಿದೆ ಎಂದು ಬಲಶೆಟ್ಟಿಹಾಳ ವಿರಕ್ತಮಠದ ಶ್ರೀ ಮನಿಪ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.
- ಶ್ರೀ ಮನಿಪ್ರ ಸಿದ್ದಲಿಂಗ ಮಹಾಸ್ವಾಮಿ ಆಶೀರ್ವಚನ । ಶ್ರಾವಣ ಮಾಸ ಹಿನ್ನೆಲೆ ಶಿವಯೋಗಿಗಳ ಮಹಾಪುರಾಣ ಕನ್ನಡಪ್ರಭ ವಾರ್ತೆ ಹುಣಸಗಿ
ಭಕ್ತರು ಜೀವನದಲ್ಲಿ ಕೆಟ್ಟ ವಿಚಾರಗಳನ್ನು ದೂರವಿಟ್ಟು ಸದ್ವಿಚಾರಗಳನ್ನು ಅಳವಡಿಸಿಕೊಂಡು ಬದುಕು ಬಂಗಾರವಾಗಲಿದೆ ಎಂದು ಬಲಶೆಟ್ಟಿಹಾಳ ವಿರಕ್ತಮಠದ ಶ್ರೀ ಮನಿಪ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.ಪಟ್ಟಣದ ಆರಾಧ್ಯ ದೈವ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಡೆಯಲಿರುವ ಶ್ರೀ ಸಿದ್ಧಾರೂಢ ಶಿವಯೋಗಿಗಳ ಮಹಾಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಭಕ್ತರು ಜೀವನದಲ್ಲಿ ಕೆಟ್ಟ ವಿಚಾರಗಳನ್ನು ದೂರವಿಟ್ಟು ಸದ್ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಸಿದ್ಧಾರೂಢ ಶಿವಯೋಗಿಗಳ ಜೀವನ ಮತ್ತು ತತ್ವಗಳನ್ನು ಅರಿತು, ಅವರ ವಿಚಾರಧಾರೆಗಳನ್ನು ಬದುಕಿನಲ್ಲಿ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ. ಯುವ ಪೀಳಿಗೆಗೆ ಸಿದ್ಧಾರೂಢರ ಮಹಾಪುರಾಣವು ದಾರಿದೀಪವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಗಾನಯೋಗಿ ಡಾ.ಪುಟ್ಟರಾಜ ಗವಾಯಿಗಳ ಶಿಷ್ಯ ಪೂಜ್ಯ ಶ್ರೀ ಶಶಿಧರ ಸ್ವಾಮೀಜಿ ಹಿರೇಮಠ ಮಾತನಾಡಿ, ಗಂಡು ಸರಸ್ವತಿ ಪುತ್ರನಾಗಿ ಹುಟ್ಟಿ ಬಂದವರೇ ಸಿದ್ಧಾರೂಢ ಶಿವಯೋಗಿಗಳು. ಅವರ ತತ್ವ, ವಿಚಾರಧಾರೆ ಹಾಗೂ ಆಶೀರ್ವಾದವನ್ನು ಪಡೆದ ಪ್ರತಿಯೊಬ್ಬರೂ ಪುಣ್ಯವಂತರು ಎಂದರು. ಶ್ರೀ ಪ್ರಭು ಕವಿಗಳ ವಿರಚಿತ ಹುಬ್ಬಳ್ಳಿಯ ಸಿದ್ಧಾರೂಢ ಶಿವಯೋಗಿಗಳ ಮಹಾಪುರಾಣವು ಅಖಂಡ ಕರ್ನಾಟಕದಾದ್ಯಂತ ಭಕ್ತಿಭಾವವನ್ನು ಮೂಡಿಸಿದೆ. ಶತಮಾನಗಳು ಕಳೆದರೂ ಸಿದ್ಧಾರೂಢರ ಮಹಿಮೆ ಮತ್ತು ಶಿವಯೋಗಿಗಳ ವಿಚಾರಧಾರೆಗಳು ಜನಮನದಲ್ಲಿ ಶಾಶ್ವತವಾಗಿ ಉಳಿದಿವೆ. ಒಂದು ತಿಂಗಳ ಕಾಲ ನಡೆಯಲಿರುವ ಮಹಾಪುರಾಣ ದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಊರಿನ ಗಣ್ಯರು, ಮುಖಂಡರು ಹಾಗೂ ಮಹಿಳೆಯರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.ನಾಗರಾಜ ಹೂಗಾರ ಸಂಗೀತ ಸೇವೆ ಸಲ್ಲಿಸಿದರೆ, ಪ್ರವೀಣ ಪತ್ತಾರ ತಬಲಾ ಸಾಥ್ ನೀಡಿದರು. ನಾಗನಗೌಡ ಪಾಟೀಲ ನಿರೂಪಿಸಿದರು.
----ಚಿತ್ರ: ಹುಣಸಗಿಯಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಡೆಯಲಿರುವ ಶ್ರೀ ಸಿದ್ಧಾರೂಢ ಶಿವಯೋಗಿಗಳ ಮಹಾಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಮನಿಪ ಸಿದ್ದಲಿಂಗ ಮಹಾಸ್ವಾಮಿ ಆಶೀರ್ವಚನ ನೀಡಿದರು.