ಸಾರಾಂಶ
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಹಿಂದ ಜಾತಿಗಳ ಮತಗಳನ್ನು ಸರಕುಗಳನ್ನಾಗಿ ಮಾರ್ಪಡಿಸಿಕೊಂಡಿರುವ ಪ್ರಬಲರು ರಾಜಕೀಯವಾಗಿ ಅಧಿಕಾರ ಹಿಡಿದಿದ್ದಾರೆ. ಈಗಲಾದರೂ ಅಹಿಂದ ವರ್ಗದವರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಎರಡೂ ವರದಿ ಜಾರಿ ಮಾಡುವಲ್ಲಿ ರಾಜ್ಯ ಸರ್ಕಾರ ಉದಾಸೀನ ಮನೋಭಾವ ತಳೆದಿರುವುದರಿಂದ ಎಚ್ಚರಿಸುವ ಸಂಬಂಧ ಡಿಸೆಂಬರ್ 14 ರ ಗುರುವಾರ ಬೆಳಿಗ್ಗೆ 11 ಕ್ಕೆ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ನಡೆಸಲಾಗುವುದೆಂದು ಸಿ.ಕೆ.ಮಹೇಶ್ ತಿಳಿಸಿದರು.ಇಲ್ಲಿನ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಹಿಂದ ಜಾತಿಗಳ ಜನಸಂಖ್ಯೆ ಶೇ80ರಷ್ಟಿದ್ದರೂ ಕೇವಲ 20ರಷ್ಟಿರುವ ಬಲಾಢ್ಯ ಜಾತಿಗಳು ಅಹಿಂದ ವರ್ಗಕ್ಕೆ ಸಿಗಬೇಕಾದ ಸೌಲಭ್ಯಗಳ ಬಳಸಿಕೊಳ್ಳುತ್ತಿವೆ. ಆಯಾ ಜಾತಿಗೆ ಅನಗುಣವಾಗಿ ಸಂಪತ್ತು ಹಂಚಿಕೆಯಾಗಬೇಕಾಗಿರುವುದರಿಂದ ಕಾಂತರಾಜ್ ವರದಿ ಹಾಗೂ ಸದಾಶಿವ ಆಯೋಗದ ಒಳ ಮೀಸಲಾತಿ ವರದಿಗಳನ್ನು ಸರ್ಕಾರ ಜಾರಿಗೆ ತರಬೇಕು. ಬಲಾಢ್ಯ ಜಾತಿಗಳು ಅಹಿಂದ ವರ್ಗದ ಸಂಪತ್ತು ಕಬಳಿಕೆ ಮಾಡುತ್ತಿವೆ ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಸಿ.ಕೆ.ಮಹೇಶ್ ಆರೋಪಿಸಿದರು.ಅಹಿಂದ ಜಾಗೃತಿ ವೇದಿಕೆ ಜಿಲ್ಲಾ ಪ್ರಧಾನ ಸಂಚಾಲಕ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಹಿಂದುಳಿದ ಜಾತಿಗಳ ಅಭಿವೃದ್ಧಿಗಾಗಿ ಮೊಟ್ಟ ಮೊದಲು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಧ್ವನಿ ಎತ್ತಿದ್ದರು. ಆ ವೇಳೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವುದಕ್ಕಾಗಿ ಕಾಕಾ ಕಾಲೇಲ್ಕರ್ ಆಯೋಗ ರಚನೆಯಾಗಿ, ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಕೇಂದ್ರ ಸರ್ಕಾರ ಜಾರಿ ಮಾಡಿದ ಮಂಡಲ್ ವರದಿ ಮೂಲೆಗುಂಪಾಗಿದೆ ಎಂದರು. ಪ್ರೊ.ಬಿ.ಕೃಷ್ಣಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ವರದಿಗಳ ಜಾರಿಗಾಗಿ ದಲಿತರು, ಅಹಿಂದ ವರ್ಗದವರು ತೀವ್ರ ಪ್ರತಿಭಟನೆ ನಡೆಸಿದ್ದರು. ಫಲವಾಗಿ ಡಿ.ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದಾಗ ಎಲ್.ಜಿ.ಹಾವನೂರು ಆಯೋಗ ರಚಿಸಿ, ವರದಿ ಸಿದ್ಧಪಡಿಸಿದ್ದನ್ನು ಬಲಾಢ್ಯರು ಉಗ್ರವಾಗಿ ಪ್ರತಿಭಟಿಸಿದರು. ಹಾಗಾಗಿ ಕಾಂತರಾಜ್ ಮತ್ತು ಸದಾಶಿವ ಆಯೋಗದ ಒಳ ಮೀಸಲಾತಿ ವರದಿ ಜಾರಿಗಾಗಿ ಗುರುವಾರ ಹಮ್ಮಿಕೊಂಡಿರುವ ಧರಣಿಯಲ್ಲಿ ಅಹಿಂದ ಜಾತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಅಹಿಂದ ಜಾಗೃತಿ ವೇದಿಕೆ ಜಿಲ್ಲಾ ಸಂಚಾಲಕರುಗಳಾದ ಎಚ್.ಮಂಜಪ್ಪ, ಡಿ.ದುರುಗೇಶಪ್ಪ, ನಗರಸಭೆ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್, ಎಚ್.ಸಿ.ನಿರಂಜನಮೂರ್ತಿ, ಮಾಜಿ ಉಪಾಧ್ಯಕ್ಷ ರಾಮಜ್ಜ, ಮಾಜಿ ಸದಸ್ಯ ಶ್ರೀರಾಮ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.