ಸಾರಾಂಶ
ಹುಬ್ಬಳ್ಳಿ:
ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವವರೆಗೂ ಕತ್ತೆ ಕಾಯುತ್ತಿದ್ದೀರಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಮೈತ್ರಿಕೂಟ ಆದ ಮೇಲೆ ಪ್ರಜ್ವಲ್ ರೇವಣ್ಣ ಘಟನೆ ನಡೆದಿಲ್ಲ. ಪ್ರಕರಣ ಬೆಳಕಿಗೆ ಬಂದ ಕೂಡಲೇ ಎಫ್ಐಆರ್ ದಾಖಲಿಸಿ ವಿದೇಶಕ್ಕೆ ಹೋಗದಂತೆ ತಡೆಯಬಹುದಿತ್ತು. ಆ ಕೆಲಸವನ್ನೇಕೆ ರಾಜ್ಯ ಸರ್ಕಾರ ಮಾಡಲಿಲ್ಲ. ಇದರಿಂದಲೇ ದಾಲ್ ಮೇ ಕುಚ್ ಕಾಲಾ ಹೈ ಎನ್ನುವುದು ಗೊತ್ತಾಗುತ್ತದೆ. ಆವಾಗ ಇವರು ಕತ್ತೆ ಕಾಯುತ್ತಿದ್ದರಾ? ಎಂದರು.
ಪ್ರಜ್ವಲ್ ರೇವಣ್ಣ ಘಟನೆ ಒಂದು ವರ್ಷದಲ್ಲಿ ಆಗಿದೆ ಅಂತ ಅನಿಸುತ್ತಿಲ್ಲ. ಹಿಂದಿನ ಘಟನೆ ಇರಬಹುದು. ಘಟನೆಯನ್ನು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತೇನೆ. ಅತ್ಯಂತ ಘೋರ ಅಪರಾಧ ಇದಾಗಿದೆ ಎಂದರು.ಟಿಕೆಟ್ ಕೊಡುವ ಮುಂಚೆಯೇ ಅಮಿತ್ ಶಾಗೆ ಪ್ರಕರಣದ ಮಾಹಿತಿ ಇತ್ತು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಕೊಡಬೇಕಾದರೆ ಎಲ್ಲ ರೀತಿಯ ಚರ್ಚೆಗಳು ನಡೆದಿರುತ್ತವೆ. ಬಹಳಷ್ಟು ಆರೋಪಗಳು ಬಂದಿರುತ್ತದೆ. ಆರೋಪ ಮಾಡಿದವರು ಏನು ಮಾಹಿತಿ ಕೊಟ್ಟಿದ್ದರೂ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ನವರೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದರು. ರೇವಣ್ಣ ಅವರನ್ನು ಸಚಿವರನ್ನಾಗಿ ಮಾಡಿದರು. ನಿಮ್ಮ ಅವರ ನಡುವೆ ಹೊಂದಾಣಿಕೆ ಇರಬಹುದು. ಸರ್ಕಾರ ನಿಮ್ಮ ಕೈಯಲ್ಲೇ ಇದೆ. ಎಫ್ಐಆರ್ ಮಾಡಲು ವಿಳಂಬ ಮಾಡಿದ್ದೇಕೆ? ಎಫ್ಐಆರ್ ಮಾಡುವುದು ಬಿಟ್ಟು ಪ್ರತಿಭಟನೆ ಮಾಡಿದ್ದಾರೆ ಎಂದು ಕಿಡಿಕಾರಿದರು.ಮಾಜಿ ಮುಖ್ಯಮಂತ್ರಿಯೊಬ್ಬರ ಕಾರ್ಯಕ್ರಮಕ್ಕೆ ನುಗ್ಗಿ ಗದ್ದಲ ಮಾಡುವುದು, ಚಪ್ಪಲಿ ಎಸೆಯುವುದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತೆ. ಆರೋಪ ಸಾಬೀತಾದಲ್ಲಿ ಕಠೋರ ಶಿಕ್ಷೆಯಾಗಲಿ. ಅತ್ಯಂತ ನಿಂದನೀಯ ಪ್ರಕರಣವಿದು. ಹಾಗಂತ ತನಿಖೆ ವೇಳೆ ಹಿಂಸಾತ್ಮಕ ಹೋರಾಟ ಸರಿಯಲ್ಲ. ಇದಕ್ಕೆ ಅನುಮತಿ ಕೊಟ್ಟವರು ಯಾರು..? ಎಂದು ಪ್ರಶ್ನಿಸಿದರು.