ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಹೊರನಾಡ ಕನ್ನಡಿಗರು ಸೇರಿದಂತೆ ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳುವ ದೃಷ್ಠಿಯಿಂದ ಮುಂದಿನ ಎರಡೂವರೆ ತಿಂಗಳೊಳಗೆ ಡಿಜಿಟಲ್ ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ, ಜಿಲ್ಲಾ ಉಸ್ತುವರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ಸೋಮವಾರ ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಜಿಲ್ಲಾ ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಮತ್ತು ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಮೊಬೈಲ್ ಗೀಳಿನಿಂದ ಯುವಜನತೆಯಲ್ಲಿ ಓದುವ ಪ್ರವೃತ್ತಿ ಕಡಿಮೆ ಆಗುತ್ತಿದೆ. ಈಗಿನ ಸಂದರ್ಭದಲ್ಲಿ ಉಚಿತ ಸದಸ್ಯತ್ವವನ್ನು ಪಡೆದು ಡಿಜಿಟಲ್ ಗ್ರಂಥಾಲಯದ ಮೂಲಕ ಓದುವ ಹವ್ಯಾಸ ಹೆಚ್ಚಿಸಿಕೊಳ್ಳುವ ದೃಷ್ಠಿಯಿಂದ ಗ್ರಂಥಾಲಯ ಡಿಜಿಟಲೀಕರಣ ಮಾಡಲಾಗುತ್ತಿದೆ. ಈ ಮೂಲಕ ಮೊಬೈಲ್ ಅನ್ನು ಕಲಿಕೆಗಾಗಿ ಸದ್ಬಳಕೆ ಮಾಡಿಕೊಳ್ಳಬಹುದು. 4 ಕೋಟಿ ಜನರು ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದು, ಶೀಘ್ರದಲ್ಲಿಯೇ ಸಕ್ರಿಯಗೊಳಿಸಲಾಗುವುದು. ಡಿಜಿಟಲ್ ಗ್ರಂಥಾಲಯದ ಮೂಲಕ ಕನ್ನಡ ಪುಸ್ತಕವನ್ನು ಓದಬಹುದು ಎಂದರು.
ಅತಿ ಹೆಚ್ಚು ಗ್ರಂಥಾಲಯಗಳ ಕರ್ನಾಟಕ:ದೇಶದಲ್ಲೇ ಅತಿ ಹೆಚ್ಚು ಗ್ರಂಥಾಲಯಗಳನ್ನು ಹೊಂದಿರುವ ರಾಜ್ಯ ನಮ್ಮದು. ಅದರಲ್ಲೂ ಶಿಕ್ಷಣ ಇಲಾಖೆ ಹೆಚ್ಚು ಸಂಖ್ಯೆಯ ಗ್ರಂಥಾಲಯಗಳನ್ನು ಹೊಂದಿದೆ. ಇಲಾಖಾ ವ್ಯಾಪ್ತಿಯಲ್ಲಿ 7000ಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು, ಅವುಗಳಲ್ಲಿ 1300 ಗ್ರಂಥಾಲಯ ಶಿಕ್ಷಣ ಇಲಾಖೆ ಹಾಗೂ ಉಳಿದವು ಗ್ರಾಮ ಪಂಚಾಯಿತಿಗಳಿಗೆ ಸೇರಿವೆ. ಇವುಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ವಹಿಸಲಾಗುವುದು. ಬೆಂಗಳೂರಿನ ವೆಸ್ಟ್ ಝೋನ್ ಎಂಬ ಸರ್ಕಾರಿ ಗ್ರಂಥಾಲಯ ಎಲ್ಲ ಸೌಕರ್ಯಗಳನ್ನು ಹೊಂದಿದ್ದು, ಅತ್ಯಂತ ಸುಸಜ್ಜಿತವಾಗಿದೆ ಎಂದು ತಿಳಿಸಿದರು.
ಉತ್ತಮ ಸೇವೆ ಸಲ್ಲಿಸಿದ ಗ್ರಂಥಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗ್ರಂಥಾಲಯದ ಕೈಪಿಡಿ ಬಿಡುಗಡೆಗೊಳಿಸಲಾಯಿತು.ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ಕುಮಾರ ಎಸ್. ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ಓದುವ ಸಂಸ್ಕೃತಿ ಹೆಚ್ಚಿಸಲು ನ.14ರಿಂದ 20ರವರೆಗೆ ಗ್ರಂಥಾಲಯ ಸಪ್ತಾಹ ನಡೆಸಲಾಯಿತು. ಸಪ್ತಾಹದಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಕಥೆ ಹೇಳುವ, ಪುಸ್ತಕ ಓದುವ ಹೀಗೆ ಓದನ್ನು ಉತ್ತೇಜಿಸುವಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗ್ರಂಥಾಲಯ ಚಳವಳಿ ನೇತಾರ ಡಾ. ಎಸ್. ರಂಗನಾಥನ್ ಅವರನ್ನು ಸ್ಮರಿಸುತ್ತಾ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
ಗ್ರಂಥಾಲಯ ಇಲಾಖೆ ವಿಶ್ರಾಂತ ನಿರ್ದೇಶಕ ಡಾ. ಪಿ.ವೈ. ರಾಜೇಂದ್ರಕುಮಾರ್ ಹಾಗೂ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ. ಕೆ.ವಿ. ಕೊಣ್ಣೂರು ಉಪಸ್ಥಿತರಿದ್ದು ಮಾತನಾಡಿದರು.ಗ್ರಂಥಾಲಯ ಇಲಾಖೆ ವಿಶ್ರಾಂತ ನಿರ್ದೇಶಕರಾದ ಟಿ.ಮಲ್ಲೇಶಪ್ಪ, ತಹಸೀಲ್ದಾರ್ ಹುಸೇನ್ ಸರಕಾವಸ್, ತಾಪಂ ಇಒ ಪ್ರದೀಪ್ಕುಮಾರ್, ಪುರಸಭಾ ಸದಸ್ಯರಾದ ಮಧುರಾಯ ಜಿ. ಶೇಟ್, ಎಂ.ಡಿ. ಉಮೇಶ್, ಉಪ್ಪಿನ ನಟರಾಜ್, ಪ್ರೇಮಾ, ಅನ್ಸರ್ ಅಹ್ಮದ್, ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಮಂಜುನಾಥ್ ಮೊದಲಾದವರು ಹಾಜರಿದ್ದರು.
- - - ಟಾಪ್ ಕೋಟ್ಗ್ರಂಥಾಲಯ ಪಿತಾಮಹ ಎನಿಸಿದ ಎಸ್.ರಂಗನಾಥನ್ ಅವರ ಹಠ ಛಲದಿಂದ ಗ್ರಂಥಾಲಯವನ್ನು ಆರಂಭಿಸಿದ್ದು ಅವರನ್ನು ನಾವು ಸ್ಮರಿಸಬೇಕಾಗಿದೆ. ಜ್ಞಾನದ ಸಂಪತ್ತನ್ನು ಗ್ರಂಥಾಲಯಗಳಿಂದ ಗಳಿಸಬಹುದು. ಅತಿ ಹೆಚ್ಚು ಸಾಧಕರು, ಸಾಹಿತಿಗಳು ಗ್ರಂಥಾಲಯಗಳಿಂದ ಹೊರಹೊಮ್ಮಿದ್ದಾರೆ. ಎಲ್ಲರೂ ಗ್ರಂಥಾಲಯಗಳ ಸದ್ಬಳಕೆ ಮಾಡಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು- ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
- - - ಬಾಕ್ಸ್ ಗ್ರಂಥಾಲಯ ವೇಳೆ ಬದಲಿಗೆ ಚಿಂತನೆಶಿವಮೊಗ್ಗದ ನಗರ ಕೇಂದ್ರ ಗ್ರಂಥಾಲಯದಲ್ಲೇ ಅನೇಕರು ಊಟ ಕಟ್ಟಿಕೊಂಡು ಬಂದು ಬೆಳಗ್ಗೆಯಿಂದ ಸಂಜೆವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವುದನ್ನು ನೋಡಿದ್ದೇನೆ. ಅನೇಕರು ಹೊರಗಡೆ ಕೆಲಸ ಮಾಡಿ ಸಂಜೆ ಹೊತ್ತು ಗ್ರಂಥಾಲಯಕ್ಕೆ ಬಂದು ಓದುತ್ತಾರೆ. ಗ್ರಂಥಾಲಯದ ಬಳಿ ರೂಮ್ ಮಾಡಿಕೊಂಡು ಓದುವವರು ಇದ್ದಾರೆ. ಹೀಗೆ ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಓದುಗರಿಗೆ ಅನುಕೂಲವಾಗುವ ಪುಸ್ತಕಗಳು, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರಸ್ತುತ ಗ್ರಂಥಾಲಯದ ವೇಳೆ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಇದ್ದು, ಸಂಜೆ ಹೊತ್ತಿನ ಓದುಗರಿಗೆ ಅನುಕೂಲವಾಗುವ ರೀತಿ ಸಮಯ ಹೆಚ್ಚಳ ಮತ್ತು ಪೂರಕ ವ್ಯವಸ್ಥೆಗಳ ವಿವರಣೆ ಪಡೆದುಕೊಂಡು ಬದಲಾವಣೆಗೆ ಚಿಂತನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.- - --20ಕೆಪಿಸೊರಬ02:
ಸೊರಬ ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಸಚಿವ ಮಧು ಬಂಗಾರಪ್ಪ ಗ್ರಂಥಾಲಯ ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಮಾಡಿದರು.