ಪಟ್ಟಣ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಂದ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಪಡೆದು, ಮುಂದಿನ ಸಭೆಯಲ್ಲಿ ಮಂಡಿಸಿ ನಂತರ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಕನ್ನಡ ಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಪಟ್ಟಣ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಂದ ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಪಡೆದು, ಮುಂದಿನ ಸಭೆಯಲ್ಲಿ ಮಂಡಿಸಿ ನಂತರ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸುಮಾರು 20 ವರ್ಷಗಳಿಂದ ಪಟ್ಟಣದ ಜನತೆಗೆ ನಿವೇಶನ ಹಾಗೂ ಮನೆಗಳನ್ನು ನೀಡಿಲ್ಲ. ಆದ್ದರಿಂದ ಪಟ್ಟಣದ ಸರ್ವೆ ನಂಬರ್ 119 ಹಾಗೂ 121/2ರಲ್ಲಿ ಒಟ್ಟು 5 ಎಕರೆ 35 ಗುಂಟೆ ಜಮೀನಿನಲ್ಲಿ ಒಟ್ಟು 410 (ಜಿ+1) ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಇದರಲ್ಲಿ ಪರಿಶಿಷ್ಟ ಜಾತಿಗೆ ಒಟ್ಟು 85 ಮನೆಗಳನ್ನು ಮೀಸಲಿಡಲಾಗಿದೆ. ಇವುಗಳೊಂದಿಗೆ ಪಟ್ಟಣದಲ್ಲಿ ಇನ್ನು ಹೆಚ್ಚಿನ ಪ್ರಚಾರ ಮಾಡಿ, ಸಾರ್ವಜನಿಕರಿಂದ ಅರ್ಜಿಗಳನ್ನು ಪಡೆದುಕೊಳ್ಳಬೇಕು ಮತ್ತು ಅಗತ್ಯ ದಾಖಲೆಗಳನ್ನು ಪಡೆದು ಅವರಿಗೆ ಈ ಮನೆಗಳನ್ನು ಪಡೆಯಲು ಇರುವ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿ, ಮುಂದಿನ ಒಂದು ವಾರದೊಳಗೆ ಸಭೆಗೆ ಮಂಡಿಸುವಂತೆ ತಿಳಿಸಿದರು. ಪಟ್ಟಣದ ಹೊರವಲಯದಲ್ಲಿ 10 ರಿಂದ 15 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ ಕಂದಾಯ ಇಲಾಖೆ ನೀಡಿದರೆ, ಅದರಲ್ಲಿ ನಿವೇಶನ ರಹಿತರಿಗೆ ಹಾಗೂ ಪೌರಕಾರ್ಮಿಕರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ ಮಾತನಾಡಿ ಅರ್ಹರನ್ನು ಗುರುತಿಸಿ, ನಂತರ ಅವರಿಗೆ ಮನೆ ನೀಡಲು ಇರುವ ನಿಬಂಧನೆಗಳನ್ನು ಸರಿಯಾಗಿ ತಿಳಿಸಿ. ಈ ಕೆಲಸ ಮಾಡಲು ಇಷ್ಟು ವರ್ಷ ಬೇಕೇ? ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಎ.ಇ. ರಕ್ಷಿತ್ ಮಾತನಾಡಿದರು.
ಆಶ್ರಯ ಸಮಿತಿ ಸದಸ್ಯ ರಮೇಶ್ ಮಾತನಾಡಿ, ನಾವು ಅನೇಕ ಬಾರಿ ಈ ಮನೆಗಳನ್ನು ನೀಡುವ ಬಗ್ಗೆ ಪಟ್ಟಣದಲ್ಲಿ ಪ್ರಚಾರ ಮಾಡುವಂತೆ ತಿಳಿಸಿದ್ದರೂ ಮಾಡಿಲ್ಲ. ಇದರೊಂದಿಗೆ ಅರ್ಜಿದಾರರು ಹಣ ಕಟ್ಟಲು ಬಂದರೆ ಹಣ ತೆಗೆದುಕೊಳ್ಳುತ್ತಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಗೆ ಕಾರಣ ಎಂದು ಆರೋಪಿಸಿದರು.ಸಭೆಯಲ್ಲಿ ಮುಖ್ಯಾಧಿಕಾರಿ ಮಂಜಮ್ಮ, ಕೊಳಚೆ ನಿರ್ಮೂಲನಾ ಮಂಡಳಿಯ ಎ.ಇ.ಇ. ಭಾನುಪ್ರತಾಪ್, ಆಶ್ರಯ ಸಮಿತಿ ಸದಸ್ಯರಾದ ನಾಗಣ್ಣ, ಸಿ.ಕೆ. ಮಹಮದ್ಪೀರ್ಪಾಷಾ, ಶಿಲಾ, ಗುತ್ತಿಗೆದಾರ ಯೂಸೂಬ್ , ಮಧುಸೂದನ ಹಾಗೂ ಇತರರು ಉಪಸ್ಥಿತರಿದ್ದರು.