ಕನ್ನಡಪ್ರಭ ವಾರ್ತೆ ಮದ್ದೂರು

ಸರ್ಕಾರದ ಒತ್ತುವರಿ ಜಮೀನುಗಳ ಬಗ್ಗೆ ತ್ವರಿತವಾಗಿ ಸರ್ವೇ ನಡೆಸಿ ತೆರವು ಕಾರ್ಯ ಕೈಗೊಳ್ಳದ ಕಂದಾಯ ಇಲಾಖೆ ಅಧಿಕಾರಿಗೆ ವಿರುದ್ಧ ಲೋಕಾಯುಕ್ತ ಕಾಯ್ದೆ ಅನ್ವಯ ಶಿಸ್ತು ಕ್ರಮ ಜರುಗಿಸುವುದಾಗಿ ಲೋಕಾಯುಕ್ತ ವರಿಷ್ಠಾಧಿಕಾರಿ ಸುರೇಶ್ ಬಾಬು ಮಂಗಳವಾರ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಇಲಾಖೆಗಳ ಕೆಲಸ ಕಾರ್ಯಗಳ ಬಗ್ಗೆ ಸಾರ್ವಜನಿಕರ ದೂರು ಮತ್ತು ಆಹವಾಲು ಸ್ವೀಕರಿಸಿದ ಬಳಿಕ ಅಧಿಕಾರಿಗಳ ಸಭೆಯಲ್ಲಿ ಅವರು ಮೌಖಿಕ ಎಚ್ಚರಿಕೆ ನೀಡಿದರು.

ಒತ್ತುವರಿ ಜಮೀನುಗಳನ್ನು ಗುರುತಿಸಿ ಅವುಗಳನ್ನು ತೆರೆವು ಮಾಡುವಲ್ಲಿ ಕಂದಾಯ ಇಲಾಖೆ ಮತ್ತು ಭೂ ದಾಖಲೆಗಳ ವಿಭಾಗದ ಅಧಿಕಾರಿಗಳು ನಿರ್ಲಕ್ಷ ಧೋರಣೆಗೆ ತಳೆದಿದ್ದಾರೆ. ಒತ್ತುವರಿಗೆದಾರರ ಹಣದ ಆಮಿಷಕ್ಕೆ ಬಲಿಯಾಗಿ ತೆರವು ಕಾರ್ಯ ಕೈಗೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎನ್ನುವುದು ಸಾಮಾನ್ಯ ಆರೋಪವಾಗಿದೆ. ಇಂಥ ಅಧಿಕಾರಿಗಳ ವಿರುದ್ಧ ಇನ್ನು ಮುಂದೆ ಲೋಕಾಯುಕ್ತ ಕಾಯಿದೆ ಅನ್ವಯ ದೂರು ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಸರ್ಕಾರದ ಸಾವಿರಾರು ಎಕರೆ ಗೋಮಾಳ, ದೇವಾಲಯದ ಕೊಡುಗೆ ಜಮೀನು, ರಸ್ತೆ ಒತ್ತುವರಿ ಆಗಿದೆ. ಇದರಿಂದ ದೂರುದಾರರು ಮತ್ತು ಒತ್ತುವರಿದಾರ ನಡುವೆ ಘರ್ಷಣೆಗಳು ನಡೆದು ಶಾಂತಿ ಭಂಗಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಪರಿಸ್ಥಿತಿ ಕೈ ಮೀರುವುದರ ಒಳಗೆ ಒತ್ತುವರಿ ಜಮೀನುಗಳ ತೆರುವುಕಾರ್ಯ ಕೈಗೊಳ್ಳುವಂತೆ ತಾಕೀತು ಮಾಡಿದರು.


ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸ್ವೀಕಾರ ಸ್ವೀಕಾರದ ವೇಳೆ ಒಟ್ಟು 56 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇವುಗಳಲ್ಲಿ ಭೂ ದಾಖಲೆ ವಿಭಾಗ, ಕಂದಾಯ ಇಲಾಖೆಗಳ 36 ಅರ್ಜಿಗಳನ್ನು ಹೊರತುಪಡಿಸಿ ಉಳಿದಂತೆ ತಾಪಂ, ಗ್ರಾಪಂ ಪಿಡಿಓ, ಸಣ್ಣ ನೀರಾವರಿ, ನಗರಸಭೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಕುರಿತಂತೆ ಲೋಕಾಯುಕ್ತ ಅಧಿಕಾರಿಗಳು ದೂರು ಸ್ವೀಕಾರ ಮಾಡಿದರು.

ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿಸುನೀಲ್ ಕುಮಾರ್, ಇನ್ಸ್ ಪೆಕ್ಟರ್ ಗಳಾದ ರವಿಕುಮಾರ್, ಲೇಪಾಕ್ಷಿಮೂರ್ತಿ ಹಾಗೂ ಸಿಬ್ಬಂದಿಗಳು, ಗ್ರೇಟ್-2 ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ರಾಮಲಿಂಗಯ್ಯ, ನಗರಸಭೆ ಆಯುಕ್ತೆ ರಾಧಿಕಾ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.