ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 7,644 ಕಾಯಂ ಉಪನ್ಯಾಸಕರ ಪೈಕಿ 4,818 ಉಪನ್ಯಾಸಕರು ಬರುವ ಶೈಕ್ಷಣಿಕ ಸಾಲಿನಲ್ಲಿ (2026-27) ವಾರದಲ್ಲಿ ಎರಡೆರಡು ಕಾಲೇಜಿನಲ್ಲಿ ಕಾರ್ಯನಿರ್ವಹಿಸಬೇಕು.
ಲಿಂಗರಾಜು ಕೋರಾ
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ 7,644 ಕಾಯಂ ಉಪನ್ಯಾಸಕರ ಪೈಕಿ 4,818 ಉಪನ್ಯಾಸಕರು ಬರುವ ಶೈಕ್ಷಣಿಕ ಸಾಲಿನಲ್ಲಿ (2026-27) ವಾರದಲ್ಲಿ ಎರಡೆರಡು ಕಾಲೇಜಿನಲ್ಲಿ ಕಾರ್ಯನಿರ್ವಹಿಸಬೇಕು.
ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲೇ ಕಡಿಮೆ ಕಾರ್ಯಾಭಾರ ಇರುವ ಉಪನ್ಯಾಸಕರ ಪಟ್ಟಿ ಸಿದ್ಧಪಡಿಸಿರುವ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಈ ಎಲ್ಲ ಉಪನ್ಯಾಸಕರನ್ನು ಬೋಧಕರ ಕೊರತೆ ಇರುವ ಮತ್ತೊಂದು ಕಾಲೇಜಿಗೆ ನಿಯೋಜಿಸಲು ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ. ಹೀಗಾಗಿ ವಾರದಲ್ಲಿ ಎರಡು ವಾರದಲ್ಲಿ ಕಾರ್ಯನಿರ್ವಹಿಸಿ ಕಾರ್ಯಭಾರ ಪೂರೈಸಬೇಕಿದೆ.ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ ನಿರ್ದೇಶಕ ಭರತ್ ಅವರು, ಕಡಿಮೆ ಕಾರ್ಯಭಾರದ ಉಪನ್ಯಾಸಕರನ್ನು ಕೊರತೆ ಇರುವ ಆಯಾ ಜಿಲ್ಲಾ ವ್ಯಾಪ್ತಿಯ ಮತ್ತೊಂದು ಕಾಲೇಜಿಗೆ ನಿಯೋಜಿಸಲು ಡಿಡಿಪಿಯುಗಳು ಕ್ರಮ ವಹಿಸಬೇಕು. ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಗೆ ಅನುಗುಣವಾಗಿ ಈ ನಿಯೋಜನೆ ಮಾಡುವಂತೆ ಹೇಳಿದೆ. ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಿ ಮೇ 16ರೊಳಗೆ ಅನುಪಾಲನಾ ವರದಿ ಸಲ್ಲಿಸಬೇಕು. ಇದರಿಂದ ಅಗತ್ಯ ಅತಿಥಿ ಉಪನ್ಯಾಸಕರ ಸಂಖ್ಯೆಯು ನಿರ್ದಿಷ್ಟವಾಗಿ ದೊರೆಯುತ್ತದೆ ಎಂದಿದ್ದಾರೆ.
ಉಪನ್ಯಾಸಕರ ಪಟ್ಟಿ ಮಾಡಲು ಸೂಚನೆ:ಪ್ರಾಯೋಗಿಕ ಚಟುವಟಿಕೆ ಇಲ್ಲದ ಭಾಷಾ ವಿಷಯಗಳು ಹಾಗೂ ಕಲಾ, ವಾಣಿಜ್ಯ ವಿಭಾಗದ ವಿಷಯಗಳಲ್ಲಿ 10 ಗಂಟೆ ಮತ್ತು ಪ್ರಾಯೋಗಿಕ ಚಟುವಟಿಕೆ ಇರುವ ವಿಜ್ಞಾನ ವಿಷಯಗಳಿಗೆ 12 ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾರ್ಯಭಾರ(ಬೋಧನಾ ಅವಧಿ) ಹೊಂದಿರುವ ಉಪನ್ಯಾಸಕರನ್ನು ಜಿಲ್ಲಾವಾರು ಗುರುತಿಸಿ ಪಟ್ಟಿ ಮಾಡಿ ಡಿಡಿಪಿಯುಗಳಿಗೆ ರವಾನಿಸಲಾಗಿದೆ.
ಪ್ರತಿ ಕಾಲೇಜಿಗೂ ವಿಷಯವಾರು ಶಿಕ್ಷಕರ ಹುದ್ದೆಗೆ ವಿದ್ಯಾರ್ಥಿಗಳ ಸಂಖ್ಯೆಯನ್ನೇ ಮಾನದಂಡವಾಗಿ ಬಳಸಲಾಗುತ್ತಿದೆ. ಪ್ರಾಯೋಗಿಕ ಪರೀಕ್ಷೆ ಇರುವ ವಿಜ್ಞಾನ ವಿಷಯಗಳಿಗೆ ಗರಿಷ್ಠ 160 ವಿದ್ಯಾರ್ಥಿಗಳು ಹಾಗೂ ಪ್ರಾಯೋಗಿಕ ಪರೀಕ್ಷೆ ಇಲ್ಲದ ಕಲೆ, ವಾಣಿಜ್ಯ ಮತ್ತಿತರ ವಿಷಯಗಳಲ್ಲಿ ಗರಿಷ್ಠ 320 ವಿದ್ಯಾರ್ಥಿಗಳವರೆಗೆ ತಲಾ ಒಬ್ಬರು ವಿಷಯವಾರು ಉಪನ್ಯಾಸಕರನ್ನು ನೇಮಿಸಲಾಗಿದೆ. ಕೆಲ ವರ್ಷಗಳಿಂದ ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ಏರಿಕೆಯಾಗುತ್ತಿದೆ. ಹೀಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ವಿಷಯಗಳ ಉಪನ್ಯಾಸಕರನ್ನು ಜಿಲ್ಲಾ ವ್ಯಾಪ್ತಿಯ ಒಳಗಿನ ಮತ್ತೊಂದು ಕಾಲೇಜಿಗೆ ನಿಯೋಜಿಸಲಾಗುತ್ತಿದೆ.-ಬಾಕ್ಸ್-
ಉಪನ್ಯಾಸಕರಿಂದ ತೀವ್ರ ವಿರೋಧಖಾಲಿ ಇರುವ ಬೋಧಕ ಹುದ್ದೆ ಭರ್ತಿ ಮಾಡದೆ, ಅವೈಜ್ಞಾನಿಕ ಕ್ರಮ ಅನುಸರಿಸಿ ಉಪನ್ಯಾಸಕರ ಕಾರ್ಯಭಾರ ಲೆಕ್ಕಾಚಾರ ಮಾಡಿ ನಿಯೋಜನೆಗೆ ಮುಂದಾಗಿರುವ ಇಲಾಖೆಯ ಕ್ರಮ ಸರ್ಕಾರಿ ಶಾಲಾ ಮಕ್ಕಳಿಗೆ ಮಾಡುತ್ತಿರುವ ಅನ್ಯಾಯ ಎಂದು ಉಪನ್ಯಾಸಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
320 ವಿದ್ಯಾರ್ಥಿಗಳಿಗೆ ಒಬ್ಬ ಉಪನ್ಯಾಸಕ ಎಂಬ ಅನುಪಾತ ಅನುಸರಿಸಿ ಅವರ ಕಾರ್ಯಭಾರ ಲೆಕ್ಕಾಚಾರ ಮಾಡುವುದು ತೀರಾ ಅವೈಜ್ಞಾನಿಕ. ಎಷ್ಟೇ ವಿದ್ಯಾರ್ಥಿಗಳಿದ್ದರೂ ಕಡ್ಡಾಯವಾಗಿ ಒಬ್ಬ ಉಪನ್ಯಾಸಕ ಒಂದು ವಿಷಯಕ್ಕೆ ಇರಲೇಬೇಕು(ಕಾಯಂ ಅಥವಾ ಅತಿಥಿ). ಹಾಗಾಗಿ ಒಂದು ವಿಷಯಕ್ಕೆ ಮಂಜೂರಾದ ಮೊದಲನೇ ಹುದ್ದೆಗೆ ಈ ನಿಯಮ ಅನ್ವಯ ಆಗುವುದಿಲ್ಲ. ಒಂದು ವೇಳೆ ಒಂದು ವಿಷಯಕ್ಕೆ ಎರಡು ಹುದ್ದೆಗಳು ಮಂಜೂರಾಗಿದ್ದರೆ ಮಾತ್ರ ಆ ಹುದ್ದೆಗೆ ಕಾರ್ಯಭಾರ ಕೊರತೆಯ ಲೆಕ್ಕಾಚಾರ ಮಾಡಬಹುದು ಎನ್ನುವುದು ಉಪನ್ಯಾಸಕರ ವಾದ.ಸರ್ಕಾರ ಪ್ರತಿ ವರ್ಷ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡಿ ಅವುಗಳ ಸಂಖ್ಯೆ 3620 ದಾಟಿದೆ. ಸರ್ಕಾರಿ ಕಾಲೇಜುಗಳ ಸಂಖ್ಯೆ 1323. ಅವುಗಳಲ್ಲಿನ 12,922 ಮಂಜೂರಾತಿ ಬೋಧಕ ಹುದ್ದೆಗಳಲ್ಲಿ 5269 ಹುದ್ದೆಗಳು ಖಾಲಿ ಇವೆ. 555 ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರಿಲ್ಲ. ಮೂಲಸೌಕರ್ಯಗಳ ಕೊರತೆ ಇದೆ. ಇರುವ ಉಪನ್ಯಾಸಕರನ್ನೂ ಒಂದು ಕಡೆ ಬಿಡದೆ ಎರಡು ಕಾಲೇಜಿನಲ್ಲಿ ಪಾಠ ಮಾಡಲು ನಿಯೋಜಿಸುತ್ತಿರುವುದು ತಿಳಿದರೆ ಸರ್ಕಾರಿ ಕಾಲೇಜುಗಳಿಗೆ ಯಾವ ಪೊಷಕರು ತಾನೆ ಮಕ್ಕಳನ್ನು ದಾಖಲಿಸುತ್ತಾರೆ ಎನ್ನುವುದು ಉಪನ್ಯಾಸಕರ ವಲಯದ ಆಕ್ರೋಶ.
--------ಕೋಟ್
ಸರ್ಕಾರಿ ಶಾಲಾ ಕಾಲೇಜುಗಳಿಗೆ ಬಹುತೇಕ ಬಡ ಮತ್ತು ದುರ್ಬಲ ವರ್ಗದ ಕುಟುಂಬದ ಮಕ್ಕಳು ಬರುತ್ತಾರೆ. ಅವರ ಪ್ರಗತಿಗೆ ಇಲಾಖೆಯ ಈ ನಿರ್ಧಾರ ಬಲವಾದ ಪೆಟ್ಟು ನೀಡುತ್ತದೆ. ಅತ್ಯಂತ ಅವೈಜ್ಞಾನಿಕವಾಗಿ ಉಪನ್ಯಾಸಕರ ಕಾರ್ಯಭಾರದ ಲೆಕ್ಕಾಚಾರ ಮಾಡಲಾಗಿದೆ. ನಿಯಮಾವಳಿಗೆ ತಿದ್ದುಪಡಿ ತಂದು ವಿದ್ಯಾರ್ಥಿ-ಉಪನ್ಯಾಸಕರ ಅನುಪಾತ ಮರು ನಿಗದಿ ಮಾಡಬೇಕು.- ಎ.ಎಚ್.ನಿಂಗೇಗೌಡ, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ