ಕೊಡಗಿನ ನೆಲದಲ್ಲಿ ಶಿಕ್ಷಣ ಸಂಸ್ಥೆಗಳು ಹಾಲೇರಿ ಅರಸರಾದಿಯಾಗಿ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡರೂ, ಅನಾದಿ ಕಾಲದಿಂದ ವಿಭಿನ್ನ ಸಂಸ್ಕೃತಿಯೊಂದಿಗೆ ಸಂಸ್ಕಾರಯುತವಾದ ಸಾಮಾಜಿಕ ಬದುಕು ಹುಟ್ಟಿಕೊಂಡು ಬಂದಿರುವುದು ಈ ನೆಲದ ಪಾವಿತ್ರ್ಯತೆಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಮಡಿಕೇರಿ: ಕೊಡಗಿನ ನೆಲದಲ್ಲಿ ಶಿಕ್ಷಣ ಸಂಸ್ಥೆಗಳು ಹಾಲೇರಿ ಅರಸರಾದಿಯಾಗಿ ಬ್ರಿಟಿಷರ ಕಾಲದಲ್ಲಿ ಸ್ಥಾಪನೆಗೊಂಡರೂ, ಅನಾದಿ ಕಾಲದಿಂದ ವಿಭಿನ್ನ ಸಂಸ್ಕೃತಿಯೊಂದಿಗೆ ಸಂಸ್ಕಾರಯುತವಾದ ಸಾಮಾಜಿಕ ಬದುಕು ಹುಟ್ಟಿಕೊಂಡು ಬಂದಿರುವುದು ಈ ನೆಲದ ಪಾವಿತ್ರ್ಯತೆಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹೇಳಿದರು.
ಇಲ್ಲಿ ಸರ್ವರೂ ಸಹೋದರತೆ, ಸೌಹಾರ್ದತೆ ಹಾಗೂ ಸಮಾನತೆಯಿಂದ ಬದುಕು ರೂಪಿಸಿಕೊಂಡಿರುವುದು ದೇಶಕ್ಕೇ ಮಾದರಿ. ಶಾಲಾ ಜೀವನದಲ್ಲೇ ಮಕ್ಕಳು ಇವನ್ನೆಲ್ಲ ಅರಿತುಕೊಂಡು ಭವಿಷ್ಯನ್ನು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ನೂತನ ಯೋಜನೆಯಾಗಿ ‘ಕೊಡವ ಪುಸ್ತಕ ಪತ್ತಾಯ’ವನ್ನು ವಿದ್ಯಾಸಂಸ್ಥೆಗಳಲ್ಲಿ, ಐನ್ಮನೆಗಳಲ್ಲಿ, ಸಂಘ-ಸಂಸ್ಥೆ, ಸಮಾಜಗಳಲ್ಲಿ ಸ್ಥಾಪಿಸಲಾಗುತ್ತಿದೆ. ಇದರಿಂದ ಜನಪದೀಯವಾದ ಕೊಡವ ಸಾಹಿತ್ಯವು ಜೀವಂತವಾಗಿರಲು ಸಾಧ್ಯ ಎಂದು ಅವರು ಹೇಳಿದರು.ಅರಮೇರಿ ಕಳಂಚೇರಿಯಲ್ಲಿನ ಶ್ರೀ ಶಾಂತಮಲ್ಲ ಸ್ವಾಮೀಜಿ ವಿದ್ಯಾಸಂಸ್ಥೆಯಲ್ಲಿ ಅಕಾಡೆಮಿಯ 17ನೇ ಕೊಡವ ಪುಸ್ತಕ ಪತ್ತಾಯ ಅನಾವರಣ ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕ ಶಾಂತಮಲ್ಲ ಸ್ವಾಮೀಜಿ ಅವರ 29ನೇ ಗುರುಸ್ಮರಣೆ ದಿನ ಉದ್ಘಾಟಿಸಿ ಮಾತನಾಡಿದರು.
ಬದುಕಿನ ಹಲವು ಮಗ್ಗುಲಗಳನ್ನು ತಿಳಿದುಕೊಳ್ಳಲು ಕತೆ, ಕಾದಂಬರಿ, ವೈಚಾರಿಕ ಲೇಖನಗಳ ಸಾಹಿತ್ಯವು ಅನುಕೂಲವಾಗಿದ್ದು, ಶಿಕ್ಷಣವೆಂಬುದು ಕೇವಲ ಪಠ್ಯದೊಂದಿಗಿನ ಸಮ್ಮಿಲನವಾಗಿರಬಾರದು ಎಂದು ಅಭಿಪ್ರಾಯಪಟ್ಟರು.ಪುಸ್ತಕ ಪತ್ತಾಯವನ್ನು ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅನಾವರಣಗೊಳಿಸಿದರು. ಅಕಾಡೆಮಿ ವತಿಯಿಂದ ನೋಂದಣಿ ಪತ್ರವನ್ನು ಸಂಸ್ಥೆಯ ಪ್ರಾಂಶುಪಾಲ ಬಲ್ಲಚಂಡ ಕುಸುಂ ಟಿಟೊ ಅವರಿಗೆ ನೀಡಲಾಯಿತು. ವಿದ್ಯಾಸಂಸ್ಥೆ ವತಿಯಿಂದ ಅಕಾಡೆಮಿಗೆ 10 ಸಾವಿರ ರು. ಮೊತ್ತದ ಚೆಕ್ನ್ನು ಪತ್ತಾಯದ ಪ್ರಯುಕ್ತ ನೀಡಲಾಯಿತು.ಅಲ್ಲಪ್ಪಿರ ಹಾಗೂ ಮಂಡೇಟಿರ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿಗಳನ್ನು ಮಠಾಧೀಶರ ಮುಖೇನ ಹಸ್ತಾಂತರಿಸಲಾಯಿತು.