ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ 19 ಸಾವಿರ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಶೇಷಾದ್ರಿ ಹೇಳಿದರು
ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ 19 ಸಾವಿರ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಶೇಷಾದ್ರಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ಸ್ವತ್ತಿನ ಮಾಲೀಕರಿಗೆ ಇ-ಖಾತಾ ವಿತರಿಸುವ 29ನೇ ಅಭಿಯಾನದಲ್ಲಿ ಮಾತನಾಡಿದ ಅವರು, 31 ವಾರ್ಡ್ ಗಳ ಸ್ವತ್ತುಗಳಿಗೆ ಇದುವರೆಗೆ 29 ಹಂತಗಳಲ್ಲಿ 19 ಸಾವಿರ ಇ ಖಾತಾ ವಿತರಣೆ ಕೆಲಸ ಮಾಡಿರುವುದು ಇತರ ನಗರಸಭೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕರ್ತವ್ಯ ಸೇರಿದಂತೆ ಇತರೆ ಕೆಲಸಗಳಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಆದರೂ ಸಕಾಲದಲ್ಲಿ ಇ- ಖಾತಾಗಳನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ಕಂದಾಯವನ್ನು ಪಾವತಿ ಮಾಡಬೇಕು. ಇದರಿಂದ ನಗರದಲ್ಲಿ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ. ಕಂದಾಯ ಪಾವತಿ ಮಾಡದಿದ್ದರೆ ನಿಮಗೆ ಹೊರೆಯಾಗಲಿದೆ. ಹಾಗಾಗಿ ಪ್ರತಿವರ್ಷ ಕಂದಾಯ ಪಾವತಿ ಮಾಡಿಕೊಂಡು ನಗರಸಭೆ ವತಿಯಿಂದ ಸಿಗುವ ರಿಯಾಯಿತಿಯ ಲಾಭವನ್ನು ಪಡೆದುಕೊಂಡು ನಗರಸಭೆ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.ಕರಗ ಮಹೋತ್ಸವ ಹಿನ್ನೆಲೆಯಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಸಂಭ್ರಮ ಇತ್ತು. ರಾಜ್ಯದ ವಿವಿಧ ಭಾಗಗಳಿಂದ ಜನರು ಧಾರ್ಮಿಕ ಕಾರ್ಯ, ಔತಣ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸಿದ್ದರು. ಈ ಮೂಲಕ ಕೋಮು ಸೌಹಾರ್ದತೆ ಸಂದೇಶ ರವಾನಿಸಿದಂತಾಗಿದೆ ಎಂದು ಹೇಳಿದರು.
ಕರಗದ ಹಿನ್ನೆಲೆಯಲ್ಲಿ ಎಲ್ಲ ವಾರ್ಡ್ ಗಳ ರಸ್ತೆಯಲ್ಲಿ ತ್ಯಾಜ್ಯ ಹೆಚ್ಚಳವಾಗಿದ್ದು, ಅದರ ವಿಲೇವಾರಿಗೆ ನಗರಸಭೆ ಪೌರಕಾರ್ಮಿಕರು ಅಗತ್ಯ ಕ್ರಮವಹಿಸಿದ್ದಾರೆ. ಜೊತೆಗೆ ಶಾಂತಿಯುತವಾಗಿ ಕರಗ ಮಹೋತ್ಸವ ಆಚರಣೆ ಮಾಡಿದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೆ.ಶೇಷಾದ್ರಿ ಹೇಳಿದರು.ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯೆ ವಿಜಯಕುಮಾರಿ, ಪೌರಾಯುಕ್ತ ಡಾ.ಜಯಣ್ಣ, ಅಧಿಕಾರಿಗಳಾದ ಕಿರಣ್, ನಾಗರಾಜು, ತಸ್ಲೀಂ, ಮೋಹನ್, ಶಶಿ, ವೇದ, ನಾಗರತ್ನಮ್ಮ ಮತ್ತಿತರರು ಹಾಜರಿದ್ದರು.
6ಕೆಆರ್ ಎಂಎನ್ 4.ಜೆಪಿಜಿನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಸ್ವತ್ತಿನ ಮಾಲೀಕರಿಗೆ ಇ-ಖಾತಾ ವಿತರಿಸಿದರು.