ಗಂಗಾವತಿ: ಜೋಗದ ನಾರಾಯಣಪ್ಪ ನಾಯಕ ಸೇವಾ ಸಮಿತಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ 5000 ಉಚಿತ ನೋಟ್‌ಬುಕ್‌ ವಿತರಣೆ ಮಾಡಲಾಯಿತು.

ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಜೆಎನ್‌ಎನ್ ಚಾನಲ್ ಸಂಸ್ಥಾಪಕ, ಜೋಗದ ಸೇವಾ ಸಮಿತಿ ಸಂಸ್ಥಾಪಕ ಜೋಗದ ನಾರಾಯಣಪ್ಪ ನಾಯಕ ಅವರು ಗಂಗಾವತಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಲೆ ವಿದ್ಯಾರ್ಥಿಗಳಿಗೆ 15 ವರ್ಷಗಳಿಂದ ನೋಟ್‌ಬುಕ್‌ ವಿತರಿಸುತ್ತಿದ್ದಾರೆ.

ತಮ್ಮ ನಿವಾಸದಲ್ಲಿ ನೋಟ್‌ಬುಕ್‌ ವಿತರಿಸಿ ಮಾತನಾಡಿದ ಜೋಗದ ನಾರಾಯಣಪ್ಪ ನಾಯಕ, ಸರ್ಕಾರ ಶಾಲೆಗಳಿಗೆ ಬಿಸಿಯೂಟ, ಕ್ಷೀರಭಾಗ್ಯ ಮತ್ತಿತರ ಯೋಜನೆಗಳಿವೆ. ಪುಸ್ತಕಗಳನ್ನು ಸರ್ಕಾರ ನೀಡುತ್ತದೆ. ಆದರೆ ಕೆಲವು ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ ಇತರ ಕಲಿಕಾ ಸಾಮಗ್ರಿ ಖರೀದಿಸಲು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ತಮ್ಮ ಸೇವಾ ಸಮಿತಿಯ ನೇತೃತ್ವದಲ್ಲಿ ಕುಟುಂಬದವರ ಸಹಕಾರದಿಂದ ಪ್ರತಿ ವರ್ಷ ವಿತರಿಸಲಾಗುತ್ತಿದೆ ಎಂದರು.

ಸರ್ಕಾರಿ ಶಾಲೆಗಳಾದ ಬೆಂಡರವಾಡಿ, ಸಿದ್ದಿಕೇರಿ, ವಡ್ಡರಹಟ್ಟಿ, ಗದ್ವಾಲ್ ಕ್ಯಾಂಪ್, ಎಸ್ಸಿ-ಎಸ್ಟಿ ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯ, ತಿಮ್ಮಣ್ಣ ನಾಯಕ ಪ್ರೌಢಶಾಲೆ, ಲಂಬಾಣಿ ತಾಂಡಾ ಬಸಾಪಟ್ಟಣ, ಡಗ್ಗಿ ಕ್ಯಾಂಪ್ ಲಿಂಗಾಯಿತರ ವಸತಿ ನಿಲಯ, ಕಲ್ಲಯ್ಯ ಕ್ಯಾಂಪ್‌, ಉಳೆನೂರು ಸೇರಿದಂತೆ 20 ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ಶಾಲೆಯ ಮುಖ್ಯಗುರುಗಳಿಗೆ ಹಸ್ತಾಂತರಿಸಲಾಯಿತು.

ಜೋಗದ ಭರಮಪ್ಪ, ನಾಯಕ, ಜೋಗದ ಹೊನ್ನಪ್ಪ ನಾಯಕ, ಜೋಗದ ಕೃಷ್ಣ ನಾಯಕ, ಹನುಮಂತಪ್ಪ ನಾಯಕ ಕನಕಪ್ಪ, ಚಂದ್ರು, ಸುರೇಶ, ಗಾದಿಲಿಂಗಪ್ಪ ನಾಯಕ, ದಯಾನಂದ, ಕೇಶವ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.