ತಾಲೂಕಾಡಳಿತದ ದಿವ್ಯ ನಿರ್ಲಕ್ಷ್ಯದಿಂದಾಗಿ ಪತ್ನಿ ಮರಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದ ಬದುಕಿದ ಗಂಡನಿಗೆ 2021ರಲ್ಲಿ ಮರಣ ಪತ್ರ ನೀಡಿ ಮಹಾನ್ ಯಡವಟ್ಟು ಮಾಡಿಕೊಂಡ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ.

ರಟ್ಟೀಹಳ್ಳಿ: ತಾಲೂಕಾಡಳಿತದ ದಿವ್ಯ ನಿರ್ಲಕ್ಷ್ಯದಿಂದಾಗಿ ಪತ್ನಿ ಮರಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದ ಬದುಕಿದ ಗಂಡನಿಗೆ 2021ರಲ್ಲಿ ಮರಣ ಪತ್ರ ನೀಡಿ ಮಹಾನ್ ಯಡವಟ್ಟು ಮಾಡಿಕೊಂಡ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ.

ತಾಲೂಕಿನ ಶಿರಗಂಬಿ ಗ್ರಾಮದ ಮಲ್ಲಮ್ಮ ಟೋಪನಗೌಡ ಗುಬ್ಬಿ ಎಂಬ ಮಹಿಳೆ ಆಗಸ್ಟ್ 12, 2021ರಂದು ಮರಣ ಹೊಂದಿದ್ದರು. ಪತ್ನಿ ಮರಣ ಪ್ರಮಾಣ ಪತ್ರಕ್ಕೆ ಆಕೆಯ ಗಂಡ ಟೋಪನಗೌಡ ಗುಬ್ಬಿ ಎಂಬುವವರು ರಟ್ಟೀಹಳ್ಳಿ ತಾಲೂಕು ಕಚೇರಿಗೆ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಪತ್ನಿ ಮರಣ ಪ್ರಮಾಣ ಪತ್ರದ ಬದಲು ಅರ್ಜಿದಾರನೇ ಮೃತಪಟ್ಟಿರುವುದಾಗಿ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದಾರೆ. ಬದುಕಿದ್ದ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಪರಿಣಾಮ ಕಳೆದ 5 ವರ್ಷಗಳಿಂದ ಟೋಪನಗೌಡ ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಬದುಕಿದ್ದ ವ್ಯಕ್ತಿಗೆ ಮರಣ ಪತ್ರ ನೀಡಿದ ತಾಲೂಕಾಡಳಿತ ಯಡವಟ್ಟಿನಿಂದಾಗಿ ಆತನ ಪಡಿತರ ಚೀಟಿ, ಆಧಾರ್, ಎಫ್ಐಡಿ ರದ್ದಾಗಿವೆ. ಇದನ್ನು ಸರಿಪಡಿಸಲು ಕಳೆದ 5 ವರ್ಷಗಳ ಹಿಂದೆ ಮರು ಅರ್ಜಿ ಸಲ್ಲಿಸಿದರೂ ಮರಣ ಪ್ರಮಾಣದ ದಾಖಲಾತಿಯಲ್ಲಿ ಹೆಸರು ತೆಗೆಯದೇ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗಾಗಿ, ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿ ಬರುತ್ತಿದೆ.ಕ್ರಮ ಜರುಗಿಸಿ

ಬದುಕಿದ್ದ ವ್ಯಕ್ತಿಗೆ ಮರಣ ಪತ್ರ ನೀಡಿದ ತಾಲೂಕಾಡಳಿತ ಸಿಬ್ಬಂದಿ, ಸರಕಾರಿ ಕೆಲಸವನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಜೀವಂತ ನಿದರ್ಶನ. ತಪ್ಪು ಮಾಡಿದ ತಹಸೀಲ್ದಾರ್ ಕಚೇರಿಯ ಅಧಿಕಾರಿ ಮೇಲೆ ತಕ್ಷಣ ಕಾನೂನು ಕ್ರಮಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು.

* ಬಿ.ಸಿ. ಪಾಟೀಲ್, ಮಾಜಿ ಸಚಿವಮರು ಚಾಲನೆ

2021ರಲ್ಲಿ ಆದ ಯಡವಟ್ಟಿನ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಟೋಪನಗೌಡ ಗುಬ್ಬಿ ಎಂಬುವವರ ಮರಣ ಪ್ರಮಾಣದ ದಾಖಲಾತಿಯಿಂದ ಕೈ ಬಿಟ್ಟು ಮತ್ತೆ ರೇಶನ್ ಕಾರ್ಡ್, ಆಧಾರ್‌ ಕಾರ್ಡ್, ಎಫ್‌ಐಡಿ ಮರು ಚಾಲನೆ ಮಾಡಲಾಗುವುದು.

* ಶ್ವೇತಾ ಅಮರಾವತಿ, ತಹಸೀಲ್ದಾರ್