ಸಾರಾಂಶ
ಚನ್ನಪಟ್ಟಣ: ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡರ ೬೦ನೇ ಹುಟ್ಟುಹಬ್ಬವನ್ನು ವಿಶೇಷಚೇತನರಿಗೆ ಅಹಾರ ಕಿಟ್ ಹಾಗೂ ಶ್ರೀಗಂಧದ ಸಸಿ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಿಂಗೇಗೌಡ ಮಾತನಾಡಿ, ನಾಡು, ನುಡಿ, ಜಲ, ಭಾಷೆಯ ಅಸ್ಮಿತೆ ಕಾಪಾಡುವಲ್ಲಿ ಹಾಗೂ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಕಕಜವೇ ರಾಜ್ಯಾಧ್ಯಕ್ಷ ರಮೇಶ್ಗೌಡರ ಕೊಡುಗೆ ಅಪಾರ ಎಂದು ಬಣ್ಣಿಸಿದರು.ರಮೇಶ್ಗೌಡರು ಬಡ ಕುಟುಂಬದಲ್ಲಿ ಹುಟ್ಟಿ ವಿದ್ಯಾರ್ಥಿ ದಿಸೆಯಲ್ಲಿ ನಾಡು ನುಡಿಯ ಹೋರಾಟಕ್ಕೆ ಧುಮುಕಿ ಹೋರಾಟ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದರು. ನೀರಾ ಹೋರಾಟದಲ್ಲಿ ದೊಡ್ಡ ಸಂಚಲನ ಸೃಷ್ಠಿಸಿದ ಇವರು ಮನಸ್ಸು ಮಾಡಿದ್ದರೆ ರಾಜಕಾರಣಕ್ಕೆ ಪ್ರವೇಶ ಮಾಡಬಹುದಿತ್ತು. ಆದರೆ ಅವರು ನಾಡುನುಡಿಯ ರಕ್ಷಣೆಗೆ ಪಣ ತೊಟ್ಟರು. ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಅಡಿಕಲ್ಲು ಹಾಕುವಂತೆ ಒತ್ತಾಯಿಸಿ ಪ್ರತಿನಿತ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಎಚ್ಚರಿಸುತ್ತಾ ಬಂದಿದ್ದು ೬೨೩ ದಿನಗಳಿಂದ ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ಇವರ ಹೋರಾಟದ ಗುಣ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದರು.
ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿದ ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡ ಮಾತನಾಡಿ, ಹುಟ್ಟುಹಬ್ಬವನ್ನು ಆಡಂಬರವಾಗಿ ಆಚರಣೆ ಮಾಡಿಕೊಳ್ಳುವಲ್ಲಿ ಯಾವುದೇ ಅರ್ಥ ಇಲ್ಲ. ದುರ್ಬಲರಿಗೆ ನಾವೆಲ್ಲರೂ ಸಹಕಾರಿಯಾಗಿ ನಿಲ್ಲಬೇಕಿದೆ. ಇಂದು ಮದುವೆ ಶುಭ ಸಮಾರಂಭದಲ್ಲಿ ಅಗತ್ಯಕ್ಕಿಂತ ಹೆಚ್ಚು ಆಹಾರ ತಯಾರಿಸಿ ಕೊನೆಗೆ ಗುಂಡಿಗೆ ಸುರಿದು ಮುಚ್ಚುತ್ತಾರೆ. ಇದರ ಬದಲು ಅಗತ್ಯವಾಗಿ ಅಡುಗೆ ಮಾಡಿಸಿ ಉಳಿದ ಆಹಾರ ಪದಾರ್ಥಗಳನ್ನು ಇಂತಹ ಅಗತ್ಯವಿವರುವರಿಗೆ ನೀಡಿದರೆ, ಅವರ ಆಶೀರ್ವಾದವೂ ಸಿಗುತ್ತದೆ. ಈ ನಿಟ್ಟಿನಲ್ಲಿ ಆಂದೋಲನದ ಅಗತ್ಯ ಇದೆ ಎಂದರು.ಈ ವೇಳೆ ಕಾಂಗ್ರೆಸ್ ಮುಖಂಡ ಎಂ.ಸಿ.ಕರಿಯಪ್ಪ, ಬಮೂಲ್ ಮಾಜಿ ನಿರ್ದೇಶಕ ಎಚ್.ಸಿ.ಜಯಮುತ್ತು, ಎಲೇಕೇರಿ ರವೀಶ್, ನಗರಸಭಾ ಅಧ್ಯಕ್ಷ ವಾಸೀಲ್ ಅಲಿಖಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಸಾಗರ್, ಜೆಡಿಎಸ್ ಧುರೀಣ ವಡ್ಡರಹಳ್ಳಿ ರಾಜಣ್ಣ, ಹಾಪ್ಕಾಮ್ಸ್ ನಿರ್ದೇಶಕ ಎಂ.ಎನ್. ರಾಜಶೇಖರ್ ಸೇರಿದಂತೆ ಹಲವರು ರಮೇಶ್ಗೌಡರಿಗೆ ಶುಭ ಕೋರಿದರು.
ಪೊಟೋ೧೬ಸಿಪಿಟಿ೨:ಚನ್ನಪಟ್ಟಣದಲ್ಲಿ ಕಕಜವೇ ರಾಜ್ಯಾಧ್ಯಕ್ಷ ರಮೇಶ್ಗೌಡ ಜನ್ಮದಿನದ ಪ್ರಯುಕ್ತ ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಿಸಲಾಯಿತು.