ಮಾಗಡಿ: ಪಟ್ಟಣದ ಡೂಮ್ಲೈಟ್ ವೃತ್ತದ ಅಶ್ವತ್ಥಕಟ್ಟೆ ಬಳಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಡಲೆ ಕಾಯಿ ಪರಿಷೆ ಅದ್ಧೂರಿಯಾಗಿ ಆಚರಿಸಿ ಸಾರ್ವಜನಿಕರಿಗೆ ಕಡಲೆಕಾಯಿ ಮತ್ತು ತಟ್ಟೆ ಇಡ್ಲಿ ಪ್ರಸಾದವಾಗಿ ವಿತರಿಸಲಾಯಿತು.
ಮಾಗಡಿ: ಪಟ್ಟಣದ ಡೂಮ್ಲೈಟ್ ವೃತ್ತದ ಅಶ್ವತ್ಥಕಟ್ಟೆ ಬಳಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಡಲೆ ಕಾಯಿ ಪರಿಷೆ ಅದ್ಧೂರಿಯಾಗಿ ಆಚರಿಸಿ ಸಾರ್ವಜನಿಕರಿಗೆ ಕಡಲೆಕಾಯಿ ಮತ್ತು ತಟ್ಟೆ ಇಡ್ಲಿ ಪ್ರಸಾದವಾಗಿ ವಿತರಿಸಲಾಯಿತು.
ಜಡೆದೇವರ ಮಠಾಧ್ಯಕ್ಷರಾದ ಇಮ್ಮಡಿ ಬಸವರಾಜ ಸ್ವಾಮೀಜಿ ರಾಸುಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸಂಕ್ರಾಂತಿ ಹಬ್ಬ ರೈತರ ಹಬ್ಬವಾಗಿದ್ದು, ರೈತರು ಬೆಳೆದ ಬೆಳೆಯನ್ನು ಪೂಜೆ ಮಾಡಿ ಮನೆಗೆ ತರುವ ಹಬ್ಬವಾಗಿದೆ. ಈ ಸಮಯದಲ್ಲಿ ಮನೆ ತುಂಬಾ ಬೆಳೆದ ಬೆಳೆ ಬಂದಿರುವುದರಿಂದ ರೈತರು ಈ ಸಮಯದಲ್ಲಿ ರಾಶಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಿ ಸಂಭ್ರಮಿಸುವ ಹಬ್ಬವಾಗಿದೆ ಎಂದು ಹೇಳಿದರು.ಪಟ್ಟಣದ ಅರಳೆಪೇಟೆಯ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಡೂಮ್ ಲೈಟ್ ವೃತ್ತದವರೆಗೂ ಅದ್ದೂರಿ ಮೆರವಣಿಗೆ, ರಾಶಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಕಳೆದ ಮೂರು ವರ್ಷಗಳಿಂದಲೂ ಕಡಲೆಕಾಯಿ ಪರಿಷೆ ಮಾಡುತ್ತಿದ್ದು ಒಂದು ರು.ಪಾಯಿಗೆ ಒಂದು ಕೆಜಿಯಂತೆ ವಿತರಣೆ ಮಾಡಲಾಯಿತು. ಒಂದು ಸಾವಿರ ಕೆಜಿ ಕಡಲೆ ಕಾಯಿ, 500 ಕೆಜಿ ಗೆಣಸು ಹಾಗೂ ಸಾರ್ವಜನಿಕರಿಗೆ ವಿಶೇಷವಾಗಿ 5 ಸಾವಿರ ತಟ್ಟೆ ಇಡ್ಲಿ, ಪೊಂಗಲ್ ಅನ್ನು ಪ್ರಸಾದವಾಗಿ ವಿತರಣೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ಬಗೆಯ ರಂಗೋಲಿ ಬಿಡಿಸುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಲಾಯಿತು. ಸಂಪ್ರದಾಯದಂತೆ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೆ ವೇಳೆ ವೀರಶೈವ ಸಮಾಜದ ಹಿರಿಯ ಮುಖಂಡರು ಹಾಗೂ ಇತರರು ಭಾಗವಹಿಸಿದ್ದರು.