ಸಾರಾಂಶ
ಹಾನಗಲ್ಲ ತಾಲೂಕಿನ ಶಂಕರಿಕೊಪ್ಪ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕೊಡಮಾಡಿದ ₹ 1.15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಲಿಕಾ ಸಾಮಗ್ರಿ, ಕಂಪ್ಯೂಟರ್, ಪೀಠೋಪಕರಣ ಹಾಗೂ ಪುಸ್ತಕ ವಿತರಿಸಲಾಯಿತು. ಶಾಸಕ ಮಾನೆ ಪುತ್ರ ಸೂರಜ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ಹಾನಗಲ್ಲ: ತಾಲೂಕಿನ ಶಂಕರಿಕೊಪ್ಪ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕೊಡಮಾಡಿದ ₹ 1.15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಕಲಿಕಾ ಸಾಮಗ್ರಿ, ಕಂಪ್ಯೂಟರ್, ಪೀಠೋಪಕರಣ ಹಾಗೂ ಪುಸ್ತಕ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡ ಭರಮಣ್ಣ ಶಿವೂರ, ಶಾಸಕರು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸರ್ಕಾರದ ಅನುದಾನಕ್ಕೆ ಕಾಯದೇ ಸ್ವಂತ ಹಣದಲ್ಲಿ ಸೌಲಭ್ಯ ಕಲ್ಪಿಸುವ ಮೂಲಕ ಕಳಕಳಿ ಮೆರೆಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಸೇರಿ ಸಂಗ್ರಹಿಸುವ ಹಣಕ್ಕೆ ಸರಿಸಮನಾಗಿ ಸ್ವಂತ ಹಣ ಸೇರಿಸಿ ಸೌಲಭ್ಯ ದೊರಕಿಸುತ್ತಿದ್ದು, ತಾಲೂಕಿನ ಹತ್ತಾರು ಶಾಲೆಗಳು ಡೆಸ್ಕ್ ಇನ್ನಿತರ ಸೌಲಭ್ಯಗಳ ಪ್ರಯೋಜನ ಪಡೆದಿವೆ. ಇದೀಗ ತಾಲೂಕಿನಲ್ಲಿರುವ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಹಾನಗಲ್ನಲ್ಲಿ ಪರಿವರ್ತನ ಕಲಿಕಾ ಸಂಸ್ಥೆ ತೆರೆದು ಉಚಿತ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣದ ಮೇಲಿರುವ ಅವರ ಕಾಳಜಿ ರಾಜ್ಯದ ಇನ್ನುಳಿದ ಶಾಸಕರಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.ಶಾಸಕ ಶ್ರೀನಿವಾಸ ಮಾನೆ ಪುತ್ರ ಸೂರಜ್ ಮಾನೆ, ಎಸ್ಡಿಎಂಸಿ ಅಧ್ಯಕ್ಷೆ ಶಾರದಾ ಕಾಳಂಗಿ, ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಹೆಡಮೇಸ್ತ್ರಿ, ಮಾಜಿ ಅಧ್ಯಕ್ಷ ಶಂಭು ಮಲಕಣ್ಣನವರ, ಸದಸ್ಯರಾದ ಮಹೇಶ ಕೆರಿಮತ್ತಿಹಳ್ಳಿ, ಕಮಲಾಕ್ಷಿ ಭಜಂತ್ರಿ, ಗುಡ್ಡಪ್ಪ ಗಡಿಯಂಕನಹಳ್ಳಿ, ಮಾಜಿ ಸದಸ್ಯ ಬಾನಪ್ಪ ಬಿದರಿ, ನಾಗರಾಜ ಕೋಟಿ, ಮುಖಂಡರಾದ ಸಿದ್ದಪ್ಪ ಕಾಳಂಗಿ, ಬಾನಪ್ಪ ಕೆರಿಮತ್ತಿಹಳ್ಳಿ, ಶಂಕ್ರಪ್ಪ ಗಡಿಯಂಕನಹಳ್ಳಿ, ಚನ್ನಬಸಪ್ಪ ಬೆನಕಣ್ಣನವರ, ಚಂದ್ರಪ್ಪ ಬೆನಕಣ್ಣನವರ, ಮುಖ್ಯೋಪಾಧ್ಯಾಯ ನಾಗಪ್ಪ ಹಂಚಿನಮನಿ, ನಿವೃತ್ತ ಶಿಕ್ಷಕ ಎಂ.ಸಿ. ಮಲಕಣ್ಣನವರ ಇದ್ದರು.