ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪಟ್ಟಣದ ಲಯನ್ಸ್ ಕ್ಲಬ್ ಆಫ್ ಫ್ರೆಂಚ್ರಾಕ್ಸ್ ಸಂಸ್ಥೆಯಿಂದ ಉಚಿತವಾಗಿ ನೋಟ್ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು.ಬಳಿಕ ಮಾತನಾಡಿದ ಸಂಸ್ಥೆ ಮೈಸೂರು ವಲಯ ಜಿಲ್ಲಾಧ್ಯಕ್ಷ ಎಲ್.ಕೆ.ಜಯರಾಮು, ಸರ್ಕಾರಿ ಶಾಲೆಯಲ್ಲಿ ಓದುವ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ನೋಟ್ಬುಕ್, ಪೆನ್ನು, ಪೆನ್ಸಿಲ್ಗಳನ್ನು ವಿತರಣೆ ಮಾಡಿದ್ದೇವೆ. ವಿದ್ಯಾರ್ಥಿಗಳು ಇದರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧನೆ ಮಾಡಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಲಕ್ಷ್ಮೀಸಾಗರ ಸರ್ಕಾರಿ ಪ್ರೌಢಶಾಲೆಯೂ ನಾನು ಓದಿ ಬೆಳೆದ ಶಾಲೆಯಾಗಿದೆ. ಈ ಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಬಡ ಮಕ್ಕಳಿ ಅನುಕೂಲಕ್ಕಾಗಿ ಯಾವುದೇ ರೀತಿ ಸಹಾಯ, ಸಹಕಾರ ಮಾಡಲು ಸಿದ್ಧನಿದ್ದೇನೆ. ಒಟ್ಟಿನಲ್ಲಿ ನಮ್ಮೂರಿ ಸರ್ಕಾರಿ ಶಾಲೆ ಮಕ್ಕಳು ಚನ್ನಾಗಿ ಓದಬೇಕು ಎನ್ನುವುದು ನನ್ನ ಉದ್ದೇಶವಾಗಿದೆ ಎಂದರು.ಮುಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ಉಡುಗೊರೆಯಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಅಧ್ಯಕ್ಷ ಕುರಟ್ಟಿ ಡಾ.ಕೆ.ಆರ್.ಸ್ವಾಮಿಗೌಡ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಕರು, ಮನೆಯಲ್ಲಿ ಪೋಷಕರು ಮಾಡಬೇಕು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಲ್ಲೂ ಸಹ ಹೆಚ್ಚಿನ ಪ್ರತಿಭೆ ಇರುತ್ತದೆ ಅವರಿಗೆ ಸೂಕ್ತವಾದ ಮಾರ್ಗದರ್ಶನ ನೀಡಬೇಕು ಎಂದರು.
ವಿದ್ಯಾರ್ಥಿಗಳ ಸಂಘ-ಸಂಸ್ಥೆ, ದಾನಿಗಳ ನೀಡುವ ಕೊಡುಗೆಗಳನ್ನು ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು, ಆ ಮೂಲಕ ತಮ್ಮ ಉಜ್ವಲ ಭವಿಷ್ಯದ ಜತೆಗೆ ಸಮಾಜಕ್ಕೂ ಕೊಡುಗೆಯಾಗಬೇಕು ಎಂದರು.
ಇದೇ ವೇಳೆ ಪ್ರೌಢಶಾಲಾ ಆವರಣದಲ್ಲಿ ಗಿಡನೆಟ್ಟು ಪರಿಸರ ದಿನಾಚರಣೆ ಮಾಡಿದರು. ಈ ವೇಳೆ ಲಯನ್ಸ್ ಕ್ಲಬ್ ಆಫ್ ಫ್ರೆಂಚ್ರಾಕ್ಸ್ ಕಾರ್ಯದರ್ಶಿ ಪುಟ್ಟಬಸವೇಗೌಡ, ಎಸ್ಡಿಎಂಸಿ ಅಧ್ಯಕ್ಷ ವಿಶ್ವನಾಥ್, ಮುಖ್ಯಶಿಕ್ಷಕಿ ಸೌಭಾಗ್ಯ, ಸಹ ಶಿಕ್ಷಕ ಮಾಣಿಕ್ಯನಹಳ್ಳಿ ಜಯರಾಮು, ಎಸ್.ಎ.ಶಿವಕುಮಾರ್, ಪುಟ್ಟಸ್ವಾಮಿ, ನಾಗರಾಜು, ತಾಪಂ ಮಾಜಿ ಸದಸ್ಯ ರಾಜು, ಸ.ಹಿ.ಪ್ರ.ಶಾಲೆಯ ಎಸ್ಡಿಎಂಸಿ ಸದಸ್ಯ ನವೀನ್ಕುಮಾರ್, ಶಿಕ್ಷಕಿ ವಸಂತಬಾಯಿ, ಚೇತನ್, ಸೋಮಣ್ಣ ಸೇರಿದಂತೆ ಹಲವರು ಇದ್ದರು.