ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್ಎಸ್ ಜಲಾಶಯದಿಂದ ಕಾವೇರಿ ಅಚ್ಚುಕಟ್ಟು ಪ್ರದೇಶದ ಎಲ್ಲಾ ನಾಲೆಗಳಿಗೆ ನೀರು ಹರಿಸಿ, ಕಟಾವಿಗೆ ಬಂದ ಬೆಳೆಗಳ ಉಳಿಸುವಂತೆ ಒತ್ತಾಯಿಸಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ತಾಲೂಕಿನ ಕೆಆರ್ಎಸ್ ನೀರಾವರಿ ನಿಗಮದ ಕಚೇರಿ ಮುಂಭಾಗದಲ್ಲಿ ಮುತ್ತಿಗೆ ಹಾಕಿ ಧರಣಿ ಕುಳಿತ ಶಾಸಕರು ಹಾಗೂ ರೈತ ಮುಖಂಡರು, ಕಾರ್ಯಕರ್ತರು ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆಯಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಮಳೆಯ ಪ್ರಮಾಣವು ಕುಸಿತಗೊಂಡು ಕಟಾವಿಗೆ ಬಂದ ಬೆಳೆಗಳು ಒಣಗುತ್ತಿದ್ದು, ಒಂದು ಕಟ್ಟು ನೀರನ್ನಾದರೂ ಬೆಳೆಗಳಿಗೆ ನಾಲೆಗಳ ಮೂಲಕ ಹರಿಸಿದರೆ ಬೆಳೆಗಳು ಸುಧಾರಣೆ ಕಾಣುತ್ತವೆ ಎಂದು ಆಗ್ರಹಿಸಿದರು.
ಕಷ್ಟದಲ್ಲಿರುವ ರೈತರ ಕಬ್ಬು, ಅಡಿಕೆ, ಬಾಳೆತೆಂಗು ಸೇರಿದಂತೆ ಇತರೆ ಕಟಾವಿನ ಬೆಳೆ ಬೆಳೆದಿದ್ದರೂ ಕಟಾವಿನ ಹಂತದಲ್ಲಿ ನೀರಿನ ಅವಶ್ಯಕವಿದೆ. ಇತ್ತ ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ಕಬ್ಬು ಬಾಡಿದೆ. ಅಡಿಕೆ ಸೊರಗುತ್ತಿದೆ. ಬಾಳೆಗೆ ನೀರಿಲ್ಲದೆ ಬಾಳೆ ಮೊತೆಗಳು ಉದುರುತ್ತಿದೆ. ಇದರಿಂದ ಬೆಳೆ ಒಣಗಿ ರೈತ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಕೂಡಲೇ ನಾಲೆಗಳಿಗೆ ನೀರು ಹರಿಸಿ ರೈತರ ಸಂಕಷ್ಟವನ್ನು ದೂರ ಮಾಡಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗ್ರಹಿಸಿದರು.ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪುಗೌಡ ಮಾತನಾಡಿ, ಜಲಾಶಯದಲ್ಲಿ 80 ಅಡಿಯಷ್ಟು ನೀರಿದ್ದರೂ ನೀರು ಬಿಡದ ಸರ್ಕಾರ ಇಷ್ಟಾದರೂ ಸರ್ಕಾರ ರೈತರ ಪರ ನಿಲ್ಲದೆ ನಾಲೆಗಳಿಗೆ ನೀರು ಹರಿಸದೆ, ಮೀನಾ ಮೇಷ ಎಣಿಸಿ ರೈತರನ್ನು ಹಾಳು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಪುಟ್ಟಣ್ಣಯ್ಯ ಅವರು ಇದ್ದ ವೇಳೆಯಲ್ಲಿ 80 ಅಡಿ ನೀರಿದ್ದ ಜಲಾಶಯದಿಂದ ಒಂದು ಕಟ್ಟು ನೀರನ್ನು ನಾಲೆಗಳ ಮೂಲಕ ಹರಿಸಿ ಬೆಳೆಗಳ ಉಳಿಸಲಾಗಿತ್ತು. ಆದರೆ, ಇದೀಗ ಕುಡಿಯುವ ನೀರಿಗೆ ಮಾತ್ರ ಬಳಸಬೇಕು ಎಂದು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬ ರೀತಿ ಬೆಳೆಗಳು ನೀರಿಲ್ಲದೆ ಒಣಗಿಸಲಾಗುತ್ತಿದೆ. ಕುಡಿಯುವ ನೀರಿಗೂ ಸಮಸ್ಯೆ ಯಾಗದಂತೆ ನೋಡಿಕೊಂಡು ಕೂಡಲೇ ಸರ್ಕಾರ ಎಚ್ಚೆತ್ತು ನಾಲೆಗಳಿಗೆ ನೀರು ಹರಿಸಿ ಬೆಳೆಗಳ ಕಾಪಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪುಟ್ಟಣಯ್ಯ ಅವರ ಪತ್ನಿ ಸುನೀತ ಪುಟ್ಟಣ್ಣಯ್ಯ, ರೈತ ಸಂಘದ ಅಧ್ಯಕ್ಷ ಶಂಭುಗೌಡ, ಪಾಂಡು ಗೋವಿಂದೇಗೌಡ, ಪ್ರಿಯಾರಮೇಶ್, ಚಂದ್ರಶೇಖರ್, ಜಯರಾಮೇಗೌಡ, ಕೃಷ್ಣೇಗೌಡ, ನಾಗರಾಜು, ಶಂಕರ್ ಅಗ್ರಹಾರ, ವಿಜಯ್ ಕುಮಾರ್, ಕೆನ್ನಾಳು ನಾಗರಾಜು, ಬಿ.ಎಸ್. ರಮೇಶ್, ಪುರುಷೋತ್ತಮ, ರವಿ ಕೆ.ಎಂ.ದೊಡ್ಡಿ, ಮದ್ದೂರು ಶಂಕರ್, ಡಿ ಎಂ.ಕೃಷ್ಣೇಗೌಡ, ಜಗದೀಶ್ ಬ್ಯಾಡರಳ್ಳಿ ಸೇರಿದಂತೆ ಇತರ ನೂರಾರು ರೈತ ಮುಖಂಡರು ಭಾಗವಹಿಸಿ ನೀರಾವರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಫಾರೂಕ್ ಅಭು ಅವರು ಮನವಿ ಸಲ್ಲಿಸಿದರು.