ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಅಂತರ ಕಡಿಮೆಗೊಳಿಸಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಸಂಪರ್ಕ ಸಭೆ ಆಯೋಜಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಬಸವರಾಜು ತಿಳಿಸಿದರು.

ತಾಲೂಕಿನ ತಳಗವಾದಿ ಗ್ರಾಮದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ನಡೆದ ಜನ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಗಳಲ್ಲಿ ಎಲ್ಲಾ ಸಮುದಾಯದ ಜನರು ಕಾನೂನು ಸುವ್ಯವಸ್ಥೆಗೆ ಬಂಗ ತರದಂತೆ ಒಗ್ಗಟ್ಟಿನಿಂದ ಶಾಂತಿಯುತವಾಗಿ ಬದುಕಬೇಕೆಂದು ಸಲಹೆ ನೀಡಿದರು.

ಗ್ರಾಮಗಳಲ್ಲಿ ನಡೆಯುವ ಸಣ್ಣಪುಟ್ಟ ಗಲಾಟೆಗಳನ್ನು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಬೇಕು. ಪೊಲೀಸ್ ಇಲಾಖೆ ಸಾರ್ವಜನಿಕರ ರಕ್ಷಣೆಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದರು.

ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ಗ್ರಾಮೀಣ ಜನರು ಮದ್ಯಕ್ಕೆ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳದೇ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ದುಡಿದ ಹಣವನ್ನು ಕುಟುಂಬದ ನಿರ್ವಹಣೆಗೆ ಖರ್ಚು ಮಾಡುವ ಜೊತೆಗೆ ಸ್ವಲ್ಪ ಹಣವನ್ನು ಭವಿಷ್ಯತ್‌ಗಾಗಿ ಉಳಿಸಬೇಕೆಂದರು.


ಗ್ರಾಮದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಪೊಲೀಸ್ ಆಧಿಕಾರಿಗಳ ಗಮನಕ್ಕೆ ತಂದರು. ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಟಿ.ಎಚ್ ಆನಂದ್, ಪ್ರಕಾಶ್, ಹೊನ್ನಯ್ಯ, ಶಿವಣ್ಣ, ನಿಂಗಣ್ಣ ಸೇರಿದಂತೆ ಇತರರು ಇದ್ದರು.

ಜಿಲ್ಲಾ ಕುರುಬರ ಸಂಘದ ಸದಸ್ಯತ್ವ ನೋಂದಣಿ ಹಣ ದುರುಪಯೋಗ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲಾ ಕುರುಬರ ಸಂಘದಲ್ಲಿ ಸದಸ್ಯತ್ವ ನೋಂದಣಿ ಹಣ ದುರುಪಯೋಗಪಡಿಸಿಕೊಂಡ ಈ ಹಿಂದಿನ ಆಡಳಿತ ಮಂಡಳಿ ವಿರುದ್ಧ ಸಂಘದ ಆಡಳಿತಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಎ.ರಮೇಶ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಎಲ್.ಸುರೇಶ್ ನೇತೃತ್ವದ ಆಡಳಿತ ಮಂಡಳಿ 13 ಸಾವಿರ ಸದಸ್ಯತ್ವ ನೋಂದಣಿ ಅರ್ಜಿ ಮುದ್ರಿಸಿ ಸದಸ್ವತ್ಯ ನೋಂದಣಿ ಆಂದೋಲನ ಅಭಿಯಾನ ಮಾಡಿಸಿದ್ದಾರೆ. ಆದರೆ, ಈ ಸಂಬಂಧ ಸಂಘದ ಖಾತೆಗೆ ಯಾವುದೇ ಹಣ ಜಮೆಯಾಗಿಲ್ಲ ಎಂದು ಆರೋಪಿಸಿದರು.ಸಂಘಕ್ಕೆ ಆಡಳಿತಾಧಿಕಾರಿ ನೇಮಕವಾದ ನಂತರ 12 ಸಾವಿರ ಸದಸ್ಯತ್ವ ನೋಂದಣಿ ಅರ್ಜಿಗಳು ಸಂಘದಿಂದ ನೀಡಲಾಗಿದೆ ಎಂದು ಪ್ರಕಟಿಸಿದ್ದಾರೆ. ಆದರೆ, ಈ ಅರ್ಜಿಗಳ ಶುಲ್ಕ 20 ರು. ನಂತೆ 2.40 ಲಕ್ಷ ರು. ಹಾಗೂ ಸದಸ್ಯತ್ವ ಶುಲ್ಕ 500 ರು. ನಂತೆ 60 ಲಕ್ಷ ರು. ಸಂಘದ ಖಾತೆಗೆ ಜಮೆ ಆಗಬೇಕು. ಈ ಸಂಬಂಧ ಯಾವುದೇ ದಾಖಲೆ ಒದಗಿಸಲಾಗಿಲ್ಲ. ಅಲ್ಲದೇ, ಸರ್ಕಾರದ ಅನುದಾನ 1 ಕೋಟಿ ಹಣದಲ್ಲಿ 80 ಲಕ್ಷ ರು.ಗಳನ್ನು ಖಾತೆಯಿಂದ ತೆಗೆಯಲಾಗಿದೆ. ನೆಲಸಮವಾದ ಹಾಸ್ಟೆಲ್‌ನ ಪೀಠೋಪಕರಣಗಳನ್ನು ಕದ್ದು ಮಾರಲಾಗಿದೆ ಎಂದು ದೂರಿದರು.

ಈ ಸಂಬಂಧ ಕೂಡಲೇ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜೊತೆಗೆ ದುರುಪಯೋಗ ಮಾಡಿಕೊಂಡ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಹಾದೇವು, ಜಯರಾಂ, ಎಸ್.ಸಿ.ಸ್ವಾಮಿ, ಎಸ್.ಡಿ.ರಮೇಶ್‌ರಾಜು, ಕೆ.ಎಸ್.ಗೋಪಾಲಕೃಷ್ಣ ಇದ್ದರು.