ಸಾರಾಂಶ
ಮೂಲ್ಕಿಯ ಸುರಭಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ ಹಾಗೂ ಯುವ ಪಡೆ ಮೂಲ್ಕಿಯ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿ ಹಾಗೂ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ – ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದ್ದು ಮಕ್ಕಳು ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹ ಪಡೆದು ಮುಂದಿನ ತಮ್ಮ ವೃತ್ತಿ ಜೀವನದಲ್ಲಿ ಅರ್ಹರಿಗೆ ಶಿಕ್ಷಣಕ್ಕೆ ಸಹಕಾರ ನೀಡುವ ಕಾರ್ಯ ಮಾಡಬೇಕೆಂದು ಮೂಲ್ಕಿಯ ಕಾರ್ನಾಡು ಕೊಸೆಸಾಂವ್ ಅಮ್ಮನವರ ಚರ್ಚ್ ಧರ್ಮಗುರು ವಂ. ಅಂತೋನಿ ಶೆರಾ ಹೇಳಿದ್ದಾರೆ.ಮೂಲ್ಕಿಯ ಸುರಭಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ ಹಾಗೂ ಯುವ ಪಡೆ ಮೂಲ್ಕಿಯ ಸಂಯುಕ್ತ ಆಶ್ರಯದಲ್ಲಿ ಮೂಲ್ಕಿಯ ಸುರಭಿ ಸಂಸ್ಥೆ-ಯ ಮುಂಭಾಗದಲ್ಲಿ ಜರಗಿದ 2ನೇ ವರ್ಷದ 2024-2025ನೇ ಸಾಲಿನ ಮೂಲ್ಕಿ ಹಾಗೂ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ – ಸಮವಸ್ತ್ರ ಹೊಲಿಸಲು ಆರ್ಥಿಕ ನೆರವು ವಿತರಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.ಮೂಲ್ಕಿಯ ಸುರಭಿ ಎಲೆಕ್ಟ್ರಾನಿಕ್ಸ್, ಸಂಸ್ಥೆಯ ಮಾಲಕ ಜಾನ್ ಕ್ವಾಡ್ರಸ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂಲ್ಕಿ ತಾಲೂಕು ಹಾಗೂ ಆಸುಪಾಸಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ 110 ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ – ಸಮವಸ್ತ್ರ ಹೊಲಿಸಲು ಸುಮಾರು 2 ಲಕ್ಷ ರು. ಮೌಲ್ಯದ ಆರ್ಥಿಕ ನೆರವು ವಿತರಿಸಲಾಯಿತು.ಈ ಸಂದರ್ಭ ಆರ್ಯಭಟ ಪ್ರಶಸ್ತಿ ಪುರಸ್ಕ್ರತ ಡಾ.ಹರೀಶ್ಚಂದ್ರ ಪಿ ಸಾಲ್ಯಾನ್ ಅವರನ್ನು ಗೌರವಿಸಲಾಯಿತು.
ಮೂಲ್ಕಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುರೇಶ್ ಕುಂದರ್, ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಾಲಚಂದ್ರ ಕಾಮತ್, ಉದ್ಯಮಿ ವಾಸು ಪೂಜಾರಿ ಚಿತ್ರಾಪು ಮತ್ತು ಲಿಡಿಯಾ ಪುರ್ಟಾಡೋ ಇದ್ದರು. ರೋಶನ್ ಪುರ್ಟಾಡೋ ನಿರೂಪಿಸಿದರು.