ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಗೆ ತಕ್ಷಣ ನೀರು ಬಿಡುವಂತೆ, ಸತತ 7 ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತ ಮುಖಂಡ ತೇಜಸ್ವಿ ಪಟೇಲ್ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ಟ್ರ್ಯಾಕ್ಟರ್ ಚಳವಳಿ ಹಮ್ಮಿಕೊಂಡಿದ್ದ ರೈತರನ್ನು ನಗರದ ಹೊರವಲಯದ ಶಿರಮಗೊಂಡನಹಳ್ಳಿ ಕ್ರಾಸ್ ಬಳಿ ತಡೆಯಲಾಗಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಗೆ ತಕ್ಷಣ ನೀರು ಬಿಡುವಂತೆ, ಸತತ 7 ಗಂಟೆ ನಿರಂತರ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರೈತ ಮುಖಂಡ ತೇಜಸ್ವಿ ಪಟೇಲ್ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ಟ್ರ್ಯಾಕ್ಟರ್ ಚಳವಳಿ ಹಮ್ಮಿಕೊಂಡಿದ್ದ ರೈತರನ್ನು ನಗರದ ಹೊರವಲಯದ ಶಿರಮಗೊಂಡನಹಳ್ಳಿ ಕ್ರಾಸ್ ಬಳಿ ತಡೆಯಲಾಗಿದೆ.ನಗರದ ಹೊರ ವಲಯದ ಶಿರಮಗೊಂಡನಹಳ್ಳಿ ಕ್ರಾಸ್ನ ಬಳಿ ಚನ್ನಗಿರಿ ತಾಲೂಕು ಕಾರಿಗನೂರು ಸುತ್ತಮುತ್ತಲಿನ ಪ್ರದೇಶ ಹಾಗೂ ಚನ್ನಗಿರಿ, ಹರಿಹರ, ದಾವಣಗೆರೆ, ಮಾಯಕೊಂಡ ಇತರೆ ಕಡೆಯಿಂದ ಟ್ರ್ಯಾಕ್ಟರ್, ದ್ವಿಚಕ್ರ ವಾಹನ, ಕಾರುಗಳಲ್ಲಿ ಆಗಮಿಸಿದ ರೈತರಿಗೆ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ಗಳನ್ನು ಇಟ್ಟು ತಡೆದಿದ್ದರಿಂದ ಹೋರಾಟದ ನೇತೃತ್ವ ವಹಿಸಿದ್ದ ತೇಜಸ್ವಿ ಪಟೇಲ್, ಎಂ.ಪಿ.ರೇಣುಕಾಚಾರ್ಯ ಇತರರು ಜಿಲ್ಲಾಡಳಿತ, ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಇದೇ ವೇಳೆ ಮಾತನಾಡಿದ ತೇಜಸ್ವಿ ವಿ.ಪಟೇಲ್, ಭದ್ರಾ ಡ್ಯಾಂನಿಂದ ಬಲ ದಂಡೆ ನಾಲೆಗೆ ತಕ್ಷಣವೇ ನೀರು ಬಿಡುಗಡೆಯ ನಿರ್ಧಾರ ಪ್ರಕಟಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ನಾವು ಊರಿನಿಂದ ಬರುವಾಗಲೇ ಎರಡು ದಿನಕ್ಕಾಗುವಷ್ಟು ಆಹಾರ ಪದಾರ್ಥ, ಸಾಮಾನು ಸರಂಜಾಮುಗಳ ಸಮೇತವೇ ದಾವಣಗೆರೆಗೆ ಬಂದಿದ್ದೇವೆ. ನೀವು ದಾವಣಗೆರೆ ನಗರ ಪ್ರವೇಶಕ್ಕೆ ತಡೆದ ಇದೇ ಸ್ಥಳದಲ್ಲೇ ಅಡುಗೆ ಮಾಡಿ, ಊಟ ಮಾಡಿಕೊಂಡಿರುತ್ತೇವೆ. ಭದ್ರಾ ಬಲದಂಡೆ ಕಾಲುವೆಗೆ ನೀರು ಬಿಡುಗಡೆ ಮಾಡುವವರೆಗೂ ನಾವ್ಯಾರೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಸಿದರು.ರೈತರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ನೀರು ಒಯ್ಯಬೇಕೆಂಬ ಹೊಸ ಸಂಪ್ರದಾಯ ಹುಟ್ಟು ಹಾಕುತ್ತೀರಾ? ಭದ್ರಾ ಬಲದಂಡೆ ನಾಲೆಗೆ ಯಾವಾಗ ನೀರು ಹರಿಯುತ್ತದೆಂದು ಜಿಲ್ಲಾಧಿಕಾರಿ ಹೇಳಲಿ. ಜಿಲ್ಲಾಡಳಿತದ ಹೇಳಿಕೆ ನಮಗೆ ಸಮಾಧಾನ ತರದಿದ್ದರೆ ಮುಂದಿನ ಹೋರಾಟದ ಬಗ್ಗೆ ನಾವೆಲ್ಲರು ಸೇರಿ ಚರ್ಚಿಸುತ್ತೇವೆ. ಸೂಳೆಕೆರೆ ಗೇಟ್ ಎತ್ತಬೇಕು, ಭದ್ರಾ ಬಲದಂಡೆಯ ನಾಲೆಗೆ ನೀರು ಬಿಡಬೇಕು, 7 ಗಂಟೆ ವಿದ್ಯುತ್ ಪೂರೈಸಬೇಕೆಂಬುದು ನಮ್ಮ ಬೇಡಿಕೆ ಎಂದು ತೇಜಸ್ವಿ ಪಟೇಲ್ ಜಿಲ್ಲಾಧಿಕಾರಿ ಗಮನಕ್ಕೆ ತಂದರು.
ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ರೈತರ ಬೇಡಿಕೆ ಬಗ್ಗೆ, ಜಿಲ್ಲೆಯ ಪರಿಸ್ಥಿತಿ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಭದ್ರಾ ಡ್ಯಾಂ ಬೇರೆ ಜಿಲ್ಲೆಯಲ್ಲಿದೆ. ಯಾವುದೇ ನಿರ್ಧಾರವನ್ನು ಸ್ವತಂತ್ರವಾಗಿ ನಾನು ತೆಗೆದುಕೊಳ್ಳಲು ಸಾಧ್ಯವಿಲ್ಲ. ರೈತರ ಬೇಡಿಕೆ ಬಗ್ಗೆ ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.ದಾವಣಗೆರೆಗೆ ಕುಡಿಯುವ ನೀರಿಗಾಗಿ 2 ಟಿಎಂಸಿ ನೀರಿನ ಅವಶ್ಯಕತೆ ಇದೆ. ಈಗಾಗಲೇ 1.2 ಟಿಎಂಸಿ ನೀರನ್ನು ನಾವು ಬಿಡಿಸಿಕೊಂಡಿದ್ದೇವೆ. 1.2 ಟಿಎಂಸಿ ನೀರು ನಮಗೆ ತಲುಪಿಲ್ಲ. ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ಡಿಸಿ ಜಿ.ಎಂ.ಗಂಗಾಧರಸ್ವಾಮಿ ಭರವಸೆ ನೀಡಿದರು. ಎಸ್ಪಿ ಡಾ.ಎಚ್.ಟಿ.ಶೇಖರ್ ಇದ್ದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಕರಿಬಸಪ್ಪ, ಬಿ.ಎಸ್.ಜಗದೀಶ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್ ಸೇರಿದಂತೆ ಸಾವಿರಾರು ರೈತರು ಪ್ರತಿಭಟನೆಯಲ್ಲಿದ್ದರು. ---ಫೋಟೊ-----16ಕೆಡಿವಿಜಿ4, 5, 6
ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಟ್ರ್ಯಾಕ್ಟರ್ ಮೂಲಕ ದಾವಣಗೆರೆಯತ್ತ ಧಾವಿಸಿದ ರೈತರನ್ನು ಶಿರಮಗೊಂಡನಹಳ್ಳಿ ಕ್ರಾಸ್ ಬಳಿ ತಡೆದಿದ್ದ ಸ್ಥಳಕ್ಕೆ ಡಿಸಿ ಗಂಗಾಧರಸ್ವಾಮಿ, ಎಸ್ಪಿ ಡಾ.ಶೇಖರ್ ಭೇಟಿ ನೀಡಿ, ರೈತರ ಅಹವಾಲು ಆಲಿಸಿದರು. ತೇಜಸ್ವಿ ಪಟೇಲ, ಡಿ.ಜಿ.ಶಾಂತನಗೌಡ, ಎಂ.ಪಿ.ರೇಣುಕಾಚಾರ್ಯ ಇತರರು ಇದ್ದರು....................16ಕೆಡಿವಿಜಿ7-
ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಟ್ರ್ಯಾಕ್ಟರ್ ಮೂಲಕ ದಾವಣಗೆರೆಯತ್ತ ಧಾವಿಸಿದ ರೈತರನ್ನು ಶಿರಮಗೊಂಡನಹಳ್ಳಿ ಕ್ರಾಸ್ ಬಳಿ ತಡೆದಿರುವ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿರುವುದು.