ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿಫಲವಾದ ಅಥವಾ ನಿರುಪಯುಕ್ತ ಕೊಳವೆ ಬಾವಿ ಕಂಡು ಬಂದರೆ ತಕ್ಷಣವೇ ಮುಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅಂತರ್ಜಲ ಪ್ರಾಧಿಕಾರ ಸಮಿತಿ ಅಧ್ಯಕ್ಷೆ ಮೀನಾ ನಾಗರಾಜ್ ತಿಳಿಸಿದ್ದಾರೆ.ವಿಫಲ ಕೊಳವೆ ಬಾವಿ ಮುಚ್ಚುವಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದ ಅನೇಕ ಕಡೆಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ವಿಫಲವಾದ ಕೊಳವೆ ಬಾವಿಗಳನ್ನು ಮುಚ್ಚಲು ನ್ಯಾಯಾಲಯದ ಆದೇಶವಿದ್ದು, ಈ ಕ್ರಮವನ್ನು ಅನುಸರಿಸದಿದ್ದಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರೆದ ಕೊಳವೆ ಬಾವಿ ಸಫಲವಾದಲ್ಲಿ ಕೇಸಿಂಗ್ ಪೈಪ್ ಆಳವಡಿಸಬೇಕು. ಮೋಟಾರ್ ಬಿಡುವವರೆಗೆ ಕೇಸಿಂಗ್ ಪೈಪ್ಗೆ ಕ್ಯಾಪ್ ಹಾಕುವುದು ಕಡ್ಡಾಯ, ಕೊರೆದ ಕೊಳವೆ ಬಾವಿ ವಿಫಲವಾಗಿ ಕೇಸಿಂಗ್ ಪೈಪ್ ತೆಗೆದ ಸಂದರ್ಭದಲ್ಲಿ ಕೊಳವೆ ಬಾವಿಯನ್ನು ಕೆಳಭಾಗದಿಂದ ಕಲ್ಲು ಮತ್ತು ಮಣ್ಣಿನಿಂದ ಮುಚ್ಚಬೇಕು.ಕೊರೆದಂತಹ ಕೊಳವೆ ಬಾವಿಗಳನ್ನು ಸುರಕ್ಷತೆಯಿಲ್ಲದೆ ಹಾಗೆಯೇ ಬಿಡುವುದರಿಂದ ಮುಂದಾಗುವ ಅನಾಹುತಗಳಿಗೆ ಭೂ ಮಾಲೀಕರು ಮತ್ತು ಡ್ರಿಲ್ಲಿಂಗ್ ಏಜೆನ್ಸಿಯವರೇ ನೇರ ಹೊಣೆಯಾಗುತ್ತಾರೆ. ಹೀಗಾಗಿ ಸಂಬಂಧಪಟ್ಟ ಕೊಳವೆ ಬಾವಿ ಮಾಲೀಕರು, ಡ್ರಿಲ್ಲಿಂಗ್ ಏಜೆನ್ಸಿಯವರು ತೆರೆದ ಕೊಳವೆ ಬಾವಿಗಳನ್ನು ಜನ, ಜಾನುವಾರುಗಳಿಗೆ ಅಪಾಯವಾಗುವ ಮುನ್ನ ಪೂರ್ಣ ಪ್ರಮಾಣದಲ್ಲಿ ಮುಚ್ಚಬೇಕು ಎಂದು ತಿಳಿಸಿದ್ದಾರೆ.
ಪೋಟೋ ಫೈಲ್ ನೇಮ್ 12 ಕೆಸಿಕೆಎಂ 2