ಸಾರಾಂಶ
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಮಂಗಳೂರು ದಸರಾ ಉತ್ಸವ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಮಂಗಳೂರು ದಸರಾ ಉತ್ಸವ ಸಿದ್ಧತೆಗಳ ಪರಿಶೀಲನೆ ನಡೆಸಿದರು.
ನಗರದ ಸರ್ಕ್ಯುಟ್ ಹೌಸ್ನಲ್ಲಿ ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ದಸರಾ ಕಾರ್ಯಕ್ರಮಗಳ ಸಂದರ್ಭದಲ್ಲಿ ನಗರವನ್ನು ಅಲಂಕರಿಸುವ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದರು. ನಗರದಾದ್ಯಂತ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ನಗರದ ಪ್ರಮುಖ ಜಂಕ್ಷನ್ಗಳನ್ನು ಸುಂದರಗೊಳಿಸಬೇಕು. ದಸರಾ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು ತಂಡ ನಿಯೋಜಿಸಬೇಕು. ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಸದಾ ಲಭ್ಯವಾಗುವಂತೆ ನಿಗಾವಹಿಸಬೇಕು. ಪೊಲೀಸ್ ಭದ್ರತೆಯನ್ನು ಎಲ್ಲ ಕಡೆ ಕಲ್ಪಿಸಲು ಸೂಚಿಸಿದರು.ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್, ಪೊಲೀಸ್ ವರಿಷ್ಟಾಧಿಕಾರಿ ಅರುಣ್, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮತ್ತಿತರರು ಇದ್ದರು.
ಕುದ್ರೋಳಿ ದೇವಸ್ಥಾನಕ್ಕೆ ಸಚಿವರ ಭೇಟಿ:ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರು ಭಾನುವಾರ ಬೆಳಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಕುದ್ರೋಳಿಯಲ್ಲಿ ದಸರಾ ನವರಾತ್ರಿ ಕಾರ್ಯಕ್ರಮಗಳ ಸಿದ್ಧತೆಗಳನ್ನು ಸಚಿವರು ಈ ಸಂದರ್ಭದಲ್ಲಿ ವೀಕ್ಷಿಸಿದರು. ಮಾಜಿ ಶಾಸಕ ಹರೀಶ್ ಕುಮಾರ್, ಮುಖಂಡ ಪದ್ಮರಾಜ್ ಇದ್ದರು.