ಸಾರಾಂಶ
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಆಡಳಿತ ಸಭೆಯನ್ನು ಅಧ್ಯಕ್ಷ ಜಾನ್ಸನ್ ಪಿಂಠೋ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಡಿಕೇರಿ ಹೊಟೇಲ್ ಸಭಾಂಗಣದಲ್ಲಿ ನಡೆಸಲಾಯಿತು.
ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಆಡಳಿತ ಸಭೆಯನ್ನು ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಠೋ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಡಿಕೇರಿ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆಸಲಾಯಿತು.ರೋಮನ್ ಕ್ಯಾಥೋಲಿಕ್ನ ಜಗದ್ಗುರು ಪೋಪ್ ಫ್ರಾನ್ಸಿಸ್ ರವರು ನಿಧನ ಹೊಂದಿದ್ದು ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆಯನ್ನು ಸಲ್ಲಿಸುವ ಮೂಲಕ ಸಂತಾಪ ಸೂಚಿಸಲಾಯಿತು.
ಮುಂದುವರಿದ ಸಭೆಯಲ್ಲಿ ಕೊಡಗು ಜಿಲ್ಲಾ ರೊಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಹಾಗೂ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಂಯುಕ್ತಾಶ್ರಯದಲ್ಲಿ ಮೇ 9, 10 ಮತ್ತು 11ರಂದು 14ನೇ ವರ್ಷದ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್, ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಕ್ರೀಡಾಕೂಟವನ್ನು ಸುಂಟಿಕೊಪ್ಪದ ಜಿಯಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. 3 ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟವನ್ನು ಸಂಘದ ಸರ್ವ ಸದಸ್ಯರು ಸಹಭಾಗಿತ್ವ ವಹಿಸಿಕೊಳ್ಳುವುದರೊಂದಿಗೆ ಯಶಸ್ವಿಗೊಳಿಸಲು ಪಣತೊಡಬೇಕು ಎಂದು ಸಂಘದ ಅಧ್ಯಕ್ಷ ಸಭೆಯಲ್ಲಿ ತಿಳಿಸಿದರು.ಈ ಸಭೆಯಲ್ಲಿ ಗೌರವ ಅಧ್ಯಕ್ಷ ಜೋಕಿಂವಾಸ್, ಜೋಕಿಂ ರಾಡ್ರಿಗಸ್, ಸಂಘದ ಪ್ರಧಾನ ಕಾರ್ಯದರ್ಶಿ ಜೂಡಿವಾಸ್, ಖಜಾಂಜಿ ಜೇಮ್ಸ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಪ್ರಭು, ಸಂಘಟನಾ ಕಾರ್ಯದರ್ಶಿಗಳಾದ ಅಂತೋಣಿ ಡಿಸೋಜ, ಮಾರ್ವಿನ್ ಲೋಬೋ, ಪಿಲಿಫ್ವಾಸ್, ಪಿ.ಎಫ್.ಸಬಾಸ್ಟೀನ್, ರೋಸ್ಮೇರಿ ರಾಡ್ರಿಗಸ್, ಗ್ರೇಸಿ ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ರಾಬಿನ್, ಮಡಿಕೇರಿ ತಾಲೂಕು ಅಧ್ಯಕ್ಷ ಸಬಾಸ್ಟೀನ್, ಕುಶಾಲನಗರ ತಾಲೂಕು ಅಧ್ಯಕ್ಷ ಪೀಟರ್, ಯುವಘಟಕದ ಅಧ್ಯಕ್ಷ ಪ್ರಶಾಂತ್ ಮತ್ತಿತರರು ಇದ್ದರು.