ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ಲಕ್ಷಾಂತರ ಜನರೊಂದಿಗೆ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತವನ್ನು ಮುಕ್ತಗೊಳಿಸಲು ದಾವಣಗೆರೆ ಜಿಲ್ಲೆಯ ಕೊಡುಗೆಯೂ ಅಪಾರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನದಲ್ಲಿ ಪಾಲ್ಗೊಂಡ ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿ, 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, 1942ರ ಕ್ವಿಟ್ ಇಂಡಿಯಾ ಚಳವಳಿಗೆ ಮಧ್ಯ ಕರ್ನಾಟಕದ ದಾವಣಗೆರೆಯ ಹೋರಾಟಗಾರರ ತ್ಯಾಗ, ಬಲಿದಾನವೂ ಇದೆ ಎಂದರು.
ದಾವಣಗೆರೆಯ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ ಹಾಗೂ ಮಾಗಾನಹಳ್ಳಿ ಹನುಮಂತಪ್ಪ 1942ರ ಕ್ವಿಟ್ ಇಂಡಿಯಾ ಚಳವಳಿ ತೀವ್ರ ಸ್ವರೂಪ ಪಡೆದಿದ್ದ ವೇಳೆ ಇಲ್ಲಿನ ಗಡಿಯಾರ ಕಂಬ ಪ್ರದೇಶದ ಬಳಿ ರೈಲ್ವೆ ನಿಲ್ದಾಣದ ಕಡೆಯಿಂದ ಬಂದ ಆಂಗ್ಲರ ಗುಂಡಿಗೆ ಎದೆಯೊಡ್ಡಿ, ಹುತಾತ್ಮರಾದ ಮಹಾನ್ ಹೋರಾಟಗಾರರು ಎಂದು ಸ್ಮರಿಸಿದರು.ನುಡಿದಂತೆ ನಡೆದ ಸರ್ಕಾರ:
ಯುವ ಕರ್ನಾಟಕ ಮತ್ತು ನವಭಾರತದ ಆಶಯದೊಂದಿಗೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ನುಡಿದಂತೆ ನಡೆದ ಸರ್ಕಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಭೂ ಗ್ಯಾರಂಟಿ, ನೀರಾವರಿ ಮತ್ತು ಇ-ಆಡಳಿತ ಸುಧಾರಣೆಗಳು ಮಹಿಳೆಯರ ಮತ್ತು ಜನಸಾಮಾನ್ಯರ ಆರ್ಥಿಕ ಸಬಲೀಕರಣಕ್ಕೆ ಬೆನ್ನೆಲುಬಾಗಿ ನಿಂತಿವೆ ಎಂದು ತಿಳಿಸಿದರು.
₹473.52 ಕೋಟಿ ವೆಚ್ಚ:
ಶಕ್ತಿ ಯೋಜನೆಯಿಂದ 2023ರ ಜೂನ್ನಿಂದ 2026ರ ಜುಲೈವರೆಗೆ ದಾವಣಗೆರೆಯೊಂದರಲ್ಲೇ 15.90 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ಸರ್ಕಾರ ₹473.52 ಕೋಟಿ ವೆಚ್ಚ ಭರಿಸಿದೆ. 44,265 ಅಂತ್ಯೋದಯ ಕಾರ್ಡ್ಗೆ 35 ಕೆಜಿ ಹಾಗೂ 3.21 ಲಕ್ಷ ಆದ್ಯತಾ ಪಡಿತರ ಚೀಟಿಗಳ 11.39 ಲಕ್ಷ ಫಲಾನುಭವಿಗೆ ಪಾರದರ್ಶಕವಾಗಿ ಪಡಿತರ ತಲುಪಿಸುತ್ತಿದೆ. 5.12 ಲಕ್ಷಕ್ಕೂ ಹೆಚ್ಚು ಗ್ರಾಹಕರು 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ಕಳೆದ ಜುಲೈ ತಿಂಗಳಲ್ಲಿ ₹77.15 ಕೋಟಿ ಬಿಲ್ ಹೊಂದಾಣಿಕೆ ಮಾಡಲಾಗಿದೆ ಎಂದರು.ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಲ್ಲೆಯ 3.76 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗೆ ಒಟ್ಟು ₹2,193.83 ಕೋಟಿ ಹಣ ಜಮೆ ಮಾಡಲಾಗಿದೆ. ಯುವನಿಧಿಯಡಿ ಜೂನ್ ಅಂತ್ಯಕ್ಕೆ 13,769 ಪದವೀಧರರು ಹಾಗೂ 308 ಡಿಪ್ಲೊಮಾದಾರ ಯುವಕ-ಯುವತಿಯರಿಗೆ ಒಟ್ಟು ₹44.22 ಕೋಟಿ ನಿರುದ್ಯೋಗ ಭತ್ಯೆ ವಿತರಿಸಲಾಗಿದೆ. ಕಂದಾಯ, ಭೂಸುರಕ್ಷಾ ಮತ್ತು ಇ-ಆಡಳಿತದಡಿ ಜಿಲ್ಲೆಯ 485 ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮವಾಗಿ ಪರಿವರ್ತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೇ 26,732 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
ಒಟ್ಟು 7,43,375 ಪಹಣಿಗಳಲ್ಲಿ 6,44,910 ಆಧಾರ್ ಜೋಡಣೆ ಮಾಡಿ ಶೇ.86, ಇ-ಪೌತಿ ಖಾತೆ ಆಂದೋಲನದಡಿ 83,891 ಪೌತಿ ಖಾತೆ ಮಾಡಿ ಶೇ.90 ಪ್ರಗತಿ ಸಾಧಿಸಲಾಗಿದೆ. ಭೂ ಸುರಕ್ಷಾದಡಿ 5,51,511 ಕಡತಗಳನ್ನು ತಂತ್ರಾಂಶದಲ್ಲಿ ಅಳವಡಿಸಿ, 1,95,355 ಪುಟಗಳ ಡಿಜಿಟಲ್ ದಾಖಲೆ ನೀಡಲಾಗಿದೆ ಎಂದರು.ತುಕಡಿಗಳ ಪಥಸಂಚಲನ:
ಪೋಲೀಸ್ ಹಾಗೂ ರಕ್ಷಣಾ ಪಡೆಗಳ ತಂಡಗಳು- ಡಿಎಆರ್ ಪೊಲೀಸ್ ತಂಡ, ನಾಗರಾಜ ಆರ್.ಎಸ್.ಐ ಡಿಎಆರ್, ನಗರ ಉಪ ವಿಭಾಗ ಪೊಲೀಸ್ ತಂಡ ರವಿನಾಯ್ಕ ಲಮಾಣಿ ಪಿಎಸ್ಐ. ಗೃಹರಕ್ಷಕ ದಳ ತಂಡ:ಹೋಂ ಗಾರ್ಡ್ ಅಧಿಕಾರಿ ತಿಪ್ಪೇಸ್ವಾಮಿ, ಅರಣ್ಯ ರಕ್ಷಕ ದಳ ಡಿ.ಕೃಷ್ಣಕುಮಾರ, ಮಹಾನಗರ ಪಾಲಿಕೆ ತಂಡ ಅಜಯಕುಮಾರ, ಜಿಲ್ಲಾ ಪೊಲೀಸ್ ವಾದ್ಯ ವೃಂದ ಹೊನ್ನೂರಪ್ಪ ಎಲ್.ಆರ್.ಎಸ್.ಐ. ಕಮಾಂಡರ್, ಎನ್ಸಿಸಿ ತಂಡಗಳು: ಡಿಆರ್ಎಮ್ ತಂಡ- ಅನಿಲ್ ಬಿ ರಾಥೋಡ್, ಎಆರ್ಜಿ ತಂಡ- ಎಚ್.ಸುನಿಲಕುಮಾರ, ಜಿಎಫ್ಜಿ ಕಾಲೇಜು ತಂಡ ವೈ-ಜಾವೀದ್, ಡಿಆರ್ಆರ್ ತಂಡ-ಸೂರ್ಯ ಬಾಲಾಜಿ, ಎವಿಕೆ ತಂಡ-ಸಿ.ರಮ್ಯ, ಜಿಎಂಐಟಿ ತಂಡ-ಬಿ.ಸಿ.ಮನೋಜ. ಎನ್ಸಿಸಿ ಶಾಲೆ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ-ಸೇಂಟ್ ಪಾಲ್ಸ್ ಸ್ಕೂಲ್-ಎನ್ಸಿಸಿ ಶಾಲಾ ವಿಭಾಗ- ಸಾಜಿ ಪೊ ಕೋಲ್ವೇಕರ್, ಭಾರತ್ ಸೇವಾದಳ ತಂಡ- ಬಿಂದು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ತಂಡ ಧನುಶ್ರೀ, ಶಾಲಾ ತಂಡಗಳು- ಸಿದ್ದಗಂಗಾ ಹೈಸ್ಕೂಲ್ ಎಸ್.ಮಧುಪ್ರಿಯ, ಜೈನ್ ಪಬ್ಲಿಕ್ ಸ್ಕೂಲ್ ತಂಡ-ನಿಧಿ ಎಸ್ ಪಾಟೀಲ್, ಪೋಲೀಸ್ ಪಬ್ಲಿಕ್ ಸ್ಕೂಲ್-ಗಣೇಶ, ತರಳಬಾಳು ಸ್ಕೂಲ್ ತಂಡ-ಎಸ್.ಶ್ರೇಯಾ, ಎಸ್.ಎಸ್.ಎಂ.ವಿ.ಎಸ್. ಶಾಲೆ -ನಿವೇದಿತಾ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ- ಹಿತೈಶ್ರಿ ಪ್ರಭುತೇಜ್, ಪಿ.ಎಸ್.ಎಸ್.ಐ.ಆರ್. ತೋಳಹುಣಸೆ ತಂಡ- ವೈ.ಬಿ.ಭುವನೇಶ್. ಭಾರತ್ ಜೋಡೋ ಸ್ಪೋರ್ಟ್ಸ್ ಹಾಸ್ಟೆಲ್ ಬಾಯ್ಸ್ ವಿಶೆಷ ತಂಡ- ಪ್ರೀತಂ, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆ ವಿಶೇಷ ತಂಡ- ಯಶವಂತ್ ಪಿಎಸ್ಎಸ್ ಇಎಂಆರ್ ತಂಡ ಭುವನೇಶ್.ಸಾಂಸ್ಕೃತಿಕ ಕಾರ್ಯಕ್ರಮ:
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಶ್ರೀ ಸಿದ್ದಗಂಗಾ ಶಾಲೆ, ದ್ವಿತೀಯ ಸ್ಥಾನ ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ತೃತೀಯ ಸ್ಥಾನ ದಾವಣಗೆರೆ ತಾ. ಹಿರೇತೊಗಲೇರಿಯ ಜೀನಿಯಸ್ ಸೆಂಟ್ರಲ್ ಶಾಲೆ ಪಡೆದವು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಎಂ.ಶಾಮನೂರು, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಪೂರ್ವ ವಲಯದ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಎಸ್ಪಿ ಡಾ. ಎಚ್.ಟಿ. ಶೇಖರ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು. ಅನಂತರ ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲೆಯ 320ಕ್ಕೂ ಹೆಚ್ಚು ಕೆರೆಗಳ ತುಂಬಿಸಲು ಒತ್ತು: ಸಚಿವಕಿಸಾನ್ ಸಮ್ಮಾನ್ ಮೂಲಕ ದಾವಣಗೆರೆ ಜಿಲ್ಲೆಯ ರೈತರ ಖಾತೆಗೆ ₹653 ಕೋಟಿ ನಗದು ವರ್ಗಾವಣೆಯಾಗಿದೆ. ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರಿನಲ್ಲಿ 2,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣಕ್ಕೆ ₹10.32 ಕೋಟಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ಜಿಲ್ಲೆಯ ರಾಜನಹಳ್ಳಿ, ಸಾಸ್ವೇಹಳ್ಳಿ, ಬೆನಕನಹಳ್ಳಿ, ಗೋವಿನಕೋವಿ- ಹನುಮಸಾಗರ ಹಾಗೂ ಉಬ್ರಾಣಿ- ಅಮೃತಾಪುರ ಏತ ನೀರಾವರಿ ಯೋಜನೆ ಮೂಲಕ 320ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.ಸರ್ಕಾರದ ಮೊದಲ 100 ದಿನಗಳ ಆಡಳಿತ ಮತ್ತು ಅಭಿವೃದ್ಧಿ ಒಳಗೊಳ್ಳುವಿಕೆಯ 45 ಕಾರ್ಯಕ್ರಮ ಕಾಲಮಿತಿಯಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಪ್ರಮುಖ ರೈತ ಮಿತ್ರ, ಬಡವರ ಬಂಧು 1 ಹೆಕ್ಟೇರ್ವರೆಗಿನ ಜಮೀನು ಹೊಂದಿರುವ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಮೊತ್ತದಲ್ಲಿ ಶೇ.50 ಸಬ್ಸಿಡಿ ನೀಡಲಾಗಿದೆ ಎಂದರು.