ಸಾರಾಂಶ
ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸುವುದಕ್ಕೆ ಮತ್ತೊಂದು ಸಮುದಾಯದಲ್ಲಿ ದ್ವೇಷ ಹುಟ್ಟಿಸಿ ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಎಲ್ಲರೂ ಅರಿತು ಸರ್ಕಾರದ ನಡೆಯನ್ನು ಖಂಡಿಸಬೇಕು ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು.
ಮಂಡ್ಯ : ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸುವುದಕ್ಕೆ ಮತ್ತೊಂದು ಸಮುದಾಯದಲ್ಲಿ ದ್ವೇಷ ಹುಟ್ಟಿಸಿ ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. ಇದನ್ನು ಎಲ್ಲರೂ ಅರಿತು ಸರ್ಕಾರದ ನಡೆಯನ್ನು ಖಂಡಿಸಬೇಕು ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದರು.
ನಗರದ ಸರ್. ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ವಕ್ಫ್ ವಿವಾದದ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ವಕ್ಫ್ ವಿವಾದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಿ, ಗಂಭೀರವಾಗಿ ಹೋರಾಟ ನಡೆಸಬೇಕು. ಕಾಂಗ್ರೆಸ್ ಸರ್ಕಾರದಿಂದ ರೈತರಿಗೆ, ಜನಸಾಮಾನ್ಯರಿಗೆ, ಮಠ ಮಾನ್ಯಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ಭವಿಷ್ಯ ಹೇಗಿರಲಿದೆ ಎಂದು ಕಾಂಗ್ರೆಸ್ಸಿಗರು ಈಗಲೇ ತೋರಿಸುತ್ತಿದ್ದಾರೆ, ಆದರೆ ನಮಗೆ ಅರ್ಥ ಆಗುತ್ತಿಲ್ಲ ಎಂದು ಹೇಳಿದರು.
ಈ ಸಮಸ್ಯೆ ಯಾವುದೋ ಪಕ್ಷಕ್ಕೊ, ವ್ಯಕ್ತಿಗೋ ಸಂಬಂಧಿಸಿದ್ದಲ್ಲ. ಇದನ್ನು ನಿರ್ಲಕ್ಷ್ಯ ಮಾಡಿದರೆ ಭವಿಷ್ಯದಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ವಕ್ಫ್ ವಿರುದ್ಧ ಕೋರ್ಟ್ಗೆ ಹೋಗಲು ಅವಕಾಶವೂ ಇಲ್ಲ. ಸರ್ಕಾರ ನೋಟಿಸ್ ಕಳುಹಿಸಿ, ವಾಪಸ್ ತೆಗೆದುಕೊಳ್ಳುತ್ತಾರೆ. ಇದರ ಹಿಂದಿನ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೊಟ್ಟು, ಕಿತ್ತು ಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಉಚಿತ ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ ಎನ್ನುತ್ತಾ ಪಡಿತರ ಚೀಟಿ ಕಿತ್ತುಕೊಳ್ಳುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಎರಡು ವರ್ಷಗಳೂ ಆಗಿಲ್ಲ. ಈ ಸರ್ಕಾರ ಬಂದು ಜನರು ಏನೆಲ್ಲಾ ಕಷ್ಟ ಅನುಭವಿಸುತ್ತಿದ್ದಾರೆ. ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದನ್ನು ನೋಡಿಯೂ ಸುಮ್ಮನೆ ಕುಳಿತುಕೊಂಡರೆ ಸಮಾಜ, ಸಮುದಾಯ, ಧರ್ಮಕ್ಕೆ ನಾವು ಮಾಡುವ ಅನ್ಯಾಯವಾಗುತ್ತದೆ. ಇದರ ವಿರುದ್ಧ ನಾವು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ಹೋರಾಡಬೇಕು ಎಂದು ಹೇಳಿದರು.
ವಕ್ಫ್ ಕಾಯಿದೆಯಲ್ಲಿ ಏನೆಲ್ಲಾ ಲೋಪದೋಷಗಳಿವೆ ಅದನ್ನು ಸರಿಪಡಿಸಿ ತಿದ್ದುಪಡಿ ತರಬೇಕೆಂಬ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಅಧಿವೇಶನದಲ್ಲಿ ಇದನ್ನು ತಿರುಚುವುದಕ್ಕೆ ಬೇರೆ ಬೇರೆ ದೇಶಗಳ ವಿಚಾರಗಳನ್ನು ತಂದು ಡೈವರ್ಟ್ ಮಾಡಲು ಮುಂದಾಗಿದ್ದಾರೆ. ಇದು ಭಯಾನಕ ವಿಚಾರವಾಗಿದೆ. ದೇಶವನ್ನು ಒಡೆಯುವಂತಹದ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.