ಸಾರಾಂಶ
ಈ ಬಾರಿಯ ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿಗೆ ಹಿರಿಯ ಹೆಸರಾಂತ ಜಾನಪದ ವಿದ್ವಾಂಸ ಡಾ. ಡಿ.ಕೆ, ರಾಜೇಂದ್ರ ಹಾಗೂ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಡಾ. ವಿಜಯಶ್ರೀ ಸಬರದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಸಾಹಿತ್ಯ, ಸಂಘಟನೆ, ಜಾನಪದ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಸಿದ್ಧಿಗಳಿಂದ ವಿಖ್ಯಾತರಾದ ಪ್ರೊ. ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 21ರಂದು ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ.
ಈ ಬಾರಿಯ ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿಗೆ ಹಿರಿಯ ಹೆಸರಾಂತ ಜಾನಪದ ವಿದ್ವಾಂಸ ಡಾ. ಡಿ.ಕೆ, ರಾಜೇಂದ್ರ ಹಾಗೂ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿಗೆ ಡಾ. ವಿಜಯಶ್ರೀ ಸಬರದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.ಡಾ. ಡಿ.ಕೆ. ರಾಜೇಂದ್ರ ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನವರು. ಎಂ.ಎ. ಪದವೀಧರರಾಗಿ, ಅವರ ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಕುರಿತ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ, ಉಪನ್ಯಾಸಕರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಜಾನಪದಕ್ಕೆ ಸಂಬಂಧಿಸಿದ ‘ಜಾನಪದ ಸಮೀಕ್ಷೆ’, ಜಾನಪದ ಸಂಚಯ’, ‘ಜಾನಪದ ಸಮಾಲೋಕ’, ‘ಮುರಾವು’, ‘ಜಾನಪದ: ಕೆಲವು ಗ್ರಹಿಕೆಗಳು’, ‘ಜಾನಪದ ಮತ್ತು ಶಿಷ್ಟಪದ’, ಕರಪಾಲದವರು, ಜನಪದ ನಂಬಿಕೆಗಳು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ‘ವಿಷಯ ವಿಶ್ವಕೋಶ: ಜಾನಪದ ಸಂಪುಟ’, ‘ಕಾವ್ಯಗಂಗೋತ್ರಿ’, ‘ಕಾವ್ಯ ಸಂಗಮ’, ‘ಅಮೃತವರ್ಷ’, ಇತ್ಯಾದಿ ಹಲವಾರು ಕೃತಿಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದಾರೆ.ಡಾ. ವಿಜಯಶ್ರೀ ಸಬರದ ಅವರು ಪ್ರಾರಂಭಿಕ ಹಾಗೂ ಪದವಿ ಶಿಕ್ಷಣವನ್ನು ಬೀದರ್ನಲ್ಲಿ ಪಡೆದು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ‘ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಬೀದರ್ನ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು.ಜಾನಪದ ಮತ್ತು ಮಹಿಳೆ, ಲೋಕ ಜಾನಪದ, ಸಬರದ ಮತ್ತು ಜಾನಪದ (ವಿಮರ್ಶಾ ಕೃತಿಗಳು), ಗುರುಶಿಷ್ಯರ ತತ್ವಪದಗಳು, ಕೊಹಿನೂರ ಹಸನಾಸಾಬರ ತತ್ವಪದಗಳು, ನೀರಲಕೇರಿ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು, ಧರಿನಾಡಿನ ತತ್ವಪದಗಳು (ಸಂಪಾದಿತ ಕೃತಿಗಳು), ಅನೇಕ ಸ್ಮರಣ ಸಂಚಿಕೆಗಳಲ್ಲಿ ಇವರ ೨೦ಕ್ಕೂ ಹೆಚ್ಚು ಜಾನಪದ ಸಂಬಂಧಿ ಲೇಖನಗಳು ಪ್ರಕಟಗೊಂಡಿವೆ. ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ೧೫ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು ೬ ಎಂ.ಫಿಲ್ ಮತ್ತು ೫ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ.