ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿರಾಜ್ಯದಲ್ಲಿ ಬೆಂಗಳೂರು ಸಿಟಿಯಲ್ಲಿ ಅತೀ ಹೆಚ್ಚು ಡ್ರಗ್ಸ್ ಕೇಸ್ ಪತ್ತೆಯಾಗುತ್ತಿದೆ. ನಂತರದ ಸ್ಥಾನದಲ್ಲಿ ಮಂಗಳೂರು ಸಿಟಿ ಇದೆ. ಮೂರನೇ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇದೆ. ಇದು ನಿಜಕ್ಕೂ ಆತಂಕದ ವಿಚಾರ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಕಳವಳ ವ್ಯಕ್ತಪಡಿಸಿದರು.ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಇಂದು ನಡೆದ ಶಾಲಾ ಕಾಲೇಜುಗಳಲ್ಲಿ ಮಾದಕದ್ರವ್ಯ ವಿರೋಧಿ ಮತ್ತು ಜಾಗೃತಿ ಸಮಿತಿ ರಚನೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವೈಜ್ಞಾನಿಕ, ದೇವಾಲಯಗಳ ನಗರಿ ಎಂದೇ ಕರೆಯಲ್ಪಡುವ ಉಡುಪಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಪ್ರಕರಣಗಳು ದಾಖಲಾಗುತ್ತಿದೆ. ಕಾಲೇಜಿಗೆ ಹೋಗುವ ಮಕ್ಕಳಲ್ಲೇ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು ಸಮಸ್ಯೆಗಳು ನಮಗೆ ಕಂಡುಬಂದಿದೆ. ಈ ಸಮಸ್ಯೆ ಸರಿಪಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಮಾದಕದ್ರವ್ಯ ವಿರೋಧಿ ಮತ್ತು ಜಾಗೃತಿ ಸಮಿತಿ ರಚನೆ ಮಾಡಿದ್ದೇವೆ. ಕಾಲೇಜು ಪ್ರಾಂಶುಪಾಲರು ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂಬ ವಿಷಯ ಮಕ್ಕಳಿಗೆ ಗೊತ್ತಾದರೆ ಅವರಲ್ಲಿ ಒಂದು ರೀತಿಯ ಭಯ ಬರುತ್ತದೆ. ಡ್ರಗ್ಸ್ ಬಳಕೆಗೆ ಅವರು ಹಿಂಜರಿಯುತ್ತಾರೆ ಎಂದವರು ಹೇಳಿದರು.ಎಎಸ್ಪಿ ಸುಧಾಕರ್ ನಾಯ್ಕ್, ಡಿವೈಎಸ್ಪಿ ಡಿ.ಟಿ. ಪ್ರಭು, ಕಾರ್ಕಳ ವಿಭಾಗದ ಎಎಸ್ಪಿ ಡಾ. ಹರ್ಷ ಪ್ರಿಯಂವದಾ, ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರ್ಗೀಸ್ ಉಪಸ್ಥಿತರಿದ್ದರು.