ನಗರದ 26ನೇ ವಾರ್ಡಿನ ದೋಬಿ ಘಾಟ್ ಬಳಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರು ಮಂಗಳವಾರ ಭೇಟಿ ನೀಡಿ, ಆಸ್ಪತೆ ಕಟ್ಟಡದ ಅಂತಿಮ ಹಂತದ ಕಾಮಗಾರಿ ಹಾಗೂ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ನಗರದ 26ನೇ ವಾರ್ಡಿನ ದೋಬಿ ಘಾಟ್ ಬಳಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಅವರು ಮಂಗಳವಾರ ಭೇಟಿ ನೀಡಿ, ಆಸ್ಪತೆ ಕಟ್ಟಡದ ಅಂತಿಮ ಹಂತದ ಕಾಮಗಾರಿ ಹಾಗೂ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉತ್ತಮವಾದ ಸ್ಥಳಾವಕಾಶ ದೊರೆತಿದ್ದು, ಒಂದು ಕೋಟಿ ರು. ವೆಚ್ಚದಲ್ಲಿ 260.38ಚ.ಮೀ ಅಳತೆಯಲ್ಲಿ ಆಸ್ಪತ್ರೆ ಕಟ್ಟಡವು ಅಚ್ಚುಕಟ್ಟಾಗಿ ಹಾಗೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ನೆಲಮಹಡಿಯಲ್ಲಿ ವೈದ್ಯರ ಕೊಠಡಿ, ಡೇ ಕೇರ್ ಕೊಠಡಿ, ಔಷಧಾಲಯ, ಮಹಿಳಾ ಮತ್ತು ಪುರುಷರ ಶೌಚಾಲಯ, ಮೊದಲ ಮಹಡಿಯಲ್ಲಿ ಆರೋಗ್ಯ ಕ್ಷೇಮ ಕೊಠಡಿ, ಪ್ರಯೋಗಾಲಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ನೀರು ಸರಬರಾಜು ಮತ್ತು ಒಳಚರಂಡಿ, ವಿದ್ಯುತ್ತೀಕರಣ, ನೀರು ಶೇಖರಣಾ ತೊಟ್ಟಿ, ವಿಶಾಲ ಪಾರ್ಕಿಂಗ್ ಜಾಗ ಇತ್ಯಾದಿ ಸೌಲಭ್ಯಗಳಿವೆ. ಶೀಘ್ರದಲ್ಲಿ ಈ ಆಸ್ಪತ್ರೆ ಉದ್ಘಾಟನೆಯಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ದೊರೆಯಲಿದೆ ಎಂದು ಹೇಳಿದರು.
ಆರೋಗ್ಯ ಸೇವೆ ಪ್ರತಿಯೊಬ್ಬ ನಾಗರಿಕನ ಮೂಲಭೂತ ಅಗತ್ಯವಾಗಿದ್ದು, ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೂ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಪರಿಸ್ಥಿತಿಯಲ್ಲಿ ಈ ಆರೋಗ್ಯ ಕೇಂದ್ರ ಅನುಕೂಲವಾಗಲಿದೆ. ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ರಕ್ತ ಪರೀಕ್ಷೆ ಸೇರಿದಂತೆ ಅಗತ್ಯ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ಸೇವೆಗಳು ದೊರೆಯಲಿವೆ ಜ್ಯೋತಿಗಣೇಶ್ ತಿಳಿಸಿದರು.ಮುಂದಿನ ಒಂದು ತಿಂಗಳೊಳಗೆ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಾರ್ವಜನಿಕರ ಸೇವೆಗೆ ಆರಂಭಿಸುವ ಉದ್ದೇಶವಿದೆ. ಕೇಂದ್ರ ಆರಂಭಗೊಂಡ ನಂತರ 26ನೇ ವಾರ್ಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಾರ್ಡುಗಳ ನಾಗರಿಕರು ಆರೋಗ್ಯ ಸೇವೆ ಪಡೆಯಬಹುದು ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಉತ್ತಮವಾಗಿ ರೂಪಿಸುವಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎಚ್. ಮಲ್ಲಿಕಾರ್ಜುನಯ್ಯ ಮತ್ತು ಮುಖಂಡರು ಪರಸ್ಪರ ಸಹಕಾರದೊಂದಿಗೆ ಕೈಜೋಡಿಸಿದ್ದಾರೆ. ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಚಂದ್ರಶೇಖರ್ ಹಾಗೂ ಉಮೇಶ್, ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯ ಎಚ್. ಮಲ್ಲಿಕಾರ್ಜುನಯ್ಯ, ವಾರ್ಡಿನ ಮುಖಂಡರಾದ ಮಹದೇವಯ್ಯ, ವಿಶ್ವಣ್ಣ, ದೀಪು, ಕಂಚಿವರಾಯಪ್ಪ, ವಿಶ್ವಮೂರ್ತಿ, ಸುನಿಲ್, ವೆಂಕಟೇಶ್, ವೇಣುಗೋಪಾಲ್, ನಾಗರಾಜು, ಪ್ರಕಾಶ್, ವಾಸಣ್ಣ, ನಟರಾಜು, ಮಂಜುನಾಥ್, ರಾಜಗೋಪಾಲ್, ಮಲ್ಲಿಕಾರ್ಜುನ್ ಹಾಗೂ ಕಟ್ಟಡದ ಗುತ್ತಿಗೆದಾರ ಗಗನ್ ಮತ್ತಿತರ ಮುಖಂಡರು ಹಾಜರಿದ್ದರು.
