ಸಾರಾಂಶ
-ಯಾದಗಿರಿಯಲಿ ಶುರುವಾಗಲಿದೆ ಬೀದರ್ನ ಶಾಹೀನ್ ಕಾಲೇಜುಕನ್ನಡಪ್ರಭ ವಾರ್ತೆ ಯಾದಗಿರಿ
‘ಡಾಕ್ಟರ್ಸ್ ಫ್ಯಾಕ್ಟ್ರಿ’ ಎಂದೇ ಹೆಸರು ವಾಸಿಯಾಗಿರುವ ಬಡ ಹಾಗೂ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ರಾಜ್ಯ ಅಷ್ಟೇ ಅಲ್ಲ ದೇಶಾದ್ಯಂತ ಗಮನ ಸೆಳೆದಿರುವ ಶಾಹೀನ್ ಶಿಕ್ಷಣ ಸಂಸ್ಥೆ ತನ್ನ ಅಂಗ ಸಂಸ್ಥೆಯನ್ನು ಯಾದಗಿರಿಯಲ್ಲಿ ಆರಂಭಿಸಲು ಉದ್ದೇಶಿರುವುದು ಇಲ್ಲಿನ ಶೈಕ್ಷಣಿಕ ಪ್ರಗತಿಯ ಆಶಾಕಿರಣ ಎಂದೇ ಹೇಳಲಾಗುತ್ತಿದೆ.ಪಿಯುಸಿ ವಿಜ್ಞಾನ ಸೇರಿ ವೈದ್ಯರಾಗಬೇಕೆನ್ನುವ ಕನಸು ಹೊಂದಿರುವ ಹಾಗೂ ಎಂಜಿನೀಯರಿಂಗ್ನಲ್ಲಿ ಭವಿಷ್ಯ ಕಾಣುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೀದರಿನ ಶಾಹೀನ್ ಶಿಕ್ಷಣ ಸಂಸ್ಥೆ (ಶಾಹೀನ್ ಗ್ರೂಪ್ ಆಫ್ ಇನ್ಸಿಟಿಟ್ಯೂಷನ್ಸ್) ಇದೀಗ ಯಾದಗಿರಿಯಲ್ಲಿಯೂ ಶೈಕ್ಷಣಿಕ ಚಟುವಟಿಕೆ ಕಾರ್ಯಾರಂಭಗೊಳಿಸಲಿದೆ. ಬೀದರ್ನಲ್ಲಿನ ಕಾಲೇಜಿನಲ್ಲಿ ನೀಡುವಷ್ಟೇ, ಅತ್ಯುನ್ನತ ಗುಣಮಟ್ಟದ ಶಿಕ್ಷಣವನ್ನು ಯಾದಗಿರಿಯಲ್ಲಿ ನೀಡುವ ಉದ್ದೇಶದಿಂದ ಶಾಹೀನ್-ವಿಷನ್ ಸಹಯೋಗ ಮಾಡಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಚೆನ್ನರಾಜು ದಮ್ಮಣ್ಣನವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಾಹೀನ್ ಸಹಯೋಗದೊಂದಿಗೆ, ವಿಷನ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಶಾಹೀನ್ ಬೀದರಿನಿಂದ ನಿರ್ವಹಿಸಲ್ಪಡುತ್ತವೆ. ಉಪನ್ಯಾಸಕರ ಆಯ್ಕೆಯಲ್ಲಿ ಶಾಹೀನ್ನ ಪಾತ್ರ ಪಮುಖವಾಗಿರುತ್ತದೆ ಮತ್ತು ವಿಷನ್ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದಿಂದಲೆ ನಡೆಯುವ ನೀಟ್-ಸಿಇಟಿ–ಜೆಇಇ ಎಲ್ಲ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಬೀದರ್ನಿಂದಲೇ ಬರುತ್ತವೆ ಎಂದು ಅವರು ತಿಳಿಸಿದರು.ಬೀದರ್ನ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಭಾರತದಲ್ಲಿಯೇ ಪ್ರತಿಷ್ಠಿತ ಕಾಲೇಜುಗಳ ಸಮೂಹವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆಯನ್ನು ಮಾಡುತ್ತಿದೆ. ಪ್ರತಿವರ್ಷ ಈ ಸಂಸ್ಥೆಯಿಂದ 1800 ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಉಚಿತ ವೈದ್ಯಕೀಯ ಸೀಟನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಉಚಿತ ಎಂಜಿನೀಯರಿಂಗ ಸೀಟ್ ಪಡೆದು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ ಚೆನ್ನರಾಜು, ಈ ಸಹಯೋಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಏ.26 ರಂದು ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ರವರು ಹಾಗೂ ಶಾಹೀನ್ನ ಸಂಸ್ಥಾಪಕ ಅದ್ಯಕ್ಷರಾದ ಡಾ.ಅಬ್ದುಲ್ ಖದೀರ್ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಾದಗಿರಿಯ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಸುರಪುರದ ಶಾಸಕ ರಾಜಾ ವೇಣುಗೋಪಾಲ ನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಣ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಸಂಸ್ಥೆಯ ಸಂಸ್ಥಾಪಕರಾದ ಖುರ್ಷೀದ್ ಆಲಂ ಚೌಧರಿ, ಸಂಸ್ಥೆಯ ಕಾರ್ಯದರ್ಶಿ ಡಾ.ಪ್ರೇಮರಾಜ್ ಉಪಸ್ಥಿತರಿದ್ದರು.