ಆರೋಗ್ಯ ರಕ್ಷಣೆ, ಶ್ರಮ, ಸಮರ್ಪಣೆಯಲ್ಲಿ ವೈದ್ಯರ ಕೊಡುಗೆ ಇದೆ: ಮಧು ಜಿ.ಮಾದೇಗೌಡ

| Published : Jul 31 2025, 12:45 AM IST

ಆರೋಗ್ಯ ರಕ್ಷಣೆ, ಶ್ರಮ, ಸಮರ್ಪಣೆಯಲ್ಲಿ ವೈದ್ಯರ ಕೊಡುಗೆ ಇದೆ: ಮಧು ಜಿ.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರಲ್ಲಿ ಹಣದಾಸೆ ಹೆಚ್ಚಾಗುತ್ತಿದೆ ಹೊರತು ವೈದ್ಯಕೀಯ ವೃತ್ತಿಯನ್ನು ಸೇವೆ ಎಂದು ಪರಿಗಣಿಸುತ್ತಿಲ್ಲ. ಇದಕ್ಕೆ ಸಮಾಜದ ವ್ಯವಸ್ಥೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಆರೋಗ್ಯ ರಕ್ಷಣೆ, ಶ್ರಮ ಮತ್ತು ಸಮರ್ಪಣೆಯಲ್ಲಿ ವೈದ್ಯರ ನಿರಂತರ ಕೊಡುಗೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ಪಟ್ಟಣದ ಭಾರತ್ ವಿಕಾಸ್ ಸೇವಾ ಟ್ರಸ್ಟ್ ಭವನದಲ್ಲಿ ವಿಕಾಸ್ ಪರಿಷತ್ ಕದಂಬ ಶಾಖೆ ಮತ್ತು ಸೇವಾ ಟ್ರಸ್ಟ್‌ನಿಂದ ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಆಸ್ಪತ್ರೆ ಜನರಲ್ ಸರ್ಜನ್ ಡಾ.ಜಿ.ಬಿ.ಚಿಕ್ಕ ಬೋರೇಗೌಡ ಹಾಗೂ ಆಯುರ್ವೇದ ವೈದ್ಯೆ ಡಾ.ಟಿ.ಎಸ್. ಭಾಗ್ಯಲಕ್ಷ್ಮಿರನ್ನು ಅಭಿನಂದಿಸಿ ಮಾತನಾಡಿ, ವೈದ್ಯರ ತ್ಯಾಗ, ದೀರ್ಘ ಗಂಟೆಗಳ ಕೆಲಸ ಮತ್ತು ರೋಗಿಗಳನ್ನು ಗುಣಪಡಿಸುವ ನಿರಂತರ ಅನ್ವೇಷಣೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೆಲವು ವೈದ್ಯರಲ್ಲಿ ಹಣದಾಸೆ ಹೆಚ್ಚಾಗುತ್ತಿದೆ ಹೊರತು ವೈದ್ಯಕೀಯ ವೃತ್ತಿಯನ್ನು ಸೇವೆ ಎಂದು ಪರಿಗಣಿಸುತ್ತಿಲ್ಲ. ಇದಕ್ಕೆ ಸಮಾಜದ ವ್ಯವಸ್ಥೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವೈದ್ಯರು ರೋಗಿಗಳನ್ನು ಉಳಿಸಲು ಸಾಕಷ್ಟು ಹೋರಾಟ ಮಾಡುತ್ತಾರೆ. ಆದರೆ, ಕೈಮೀರಿದ ಸಂದರ್ಭದಲ್ಲಿ ರೋಗಿ ಸಾವನಪ್ಪಿದಾಗ ಕುಟುಂಬದವರು ವೈದ್ಯರಿಗೆ ಸ್ಪಂದಿಸದೆ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ ಎಂದರು.

ಪ್ರಧಾನ ಭಾಷಣ ಮಾಡಿದ ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ಕೊರೋನಾದಲ್ಲಿ ಯಾವುದೇ ದೇವಾಲಯಗಳು ಬಾಗಿಲುಗಳನ್ನು ತೆರೆದಿರಲಿಲ್ಲ. ಆದರೆ, ವೈದ್ಯರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಆಸ್ಪತ್ರೆ, ಕ್ಲಿನಿಕ್ ಹಾಗೂ ನರ್ಸಿಂಗ್ ಹೋಮ್ ಗಳಲ್ಲಿ ದಿನದ 24 ಗಂಟೆಗಳ ಕಾಲ ಸೇವೆ ನೀಡಿದ ವೈದ್ಯರು ನಿಜವಾದ ದೇವರು ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಎಂ.ಮಹಾಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸೇವಾ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಖಜಾಂಚಿ ಎಲ್.ಚಂದ್ರಶೇಖರ್, ಕಾರ್ಯದರ್ಶಿ ಎಚ್.ಕೆ.ಆನಂದ್, ಸಂಚಾಲಕರಾದ ಡಾ.ಸಿದ್ದೇಗೌಡ, ನೈದಿಲೆ ಚಂದ್ರು, ಬಿ.ವಿ.ಹಳ್ಳಿ ನಾರಾಯಣ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.