ವೈದ್ಯರು ನಿಸ್ವಾರ್ಥ ವೃತ್ತಿ ಪರತೆ ಬೆಳಸಿಕೊಳ್ಳಬೇಕು

| Published : Apr 09 2025, 12:31 AM IST

ಸಾರಾಂಶ

ಉತ್ತಮ ವೈದ್ಯ ರೋಗಿಗೆ ಚಿಕಿತ್ಸೆ ನೀಡುತ್ತಾನೆ. ಸಾಮಾನ್ಯ ವೈದ್ಯ ಕಾಯಿಲೆಗೆ ಮಾತ್ರ ಚಿಕಿತ್ಸೆ ನೀಡುತ್ತಾನೆ. ರೋಗಿಯನ್ನು ಮಾನವೀಯ ಗುಣಗಳಿಂದ ಕಾಣಬೇಕು. ವೈದ್ಯರು ಹಣದ ಬಗ್ಗೆ ಯೋಚಿಸದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಹಣವೇ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವೈದ್ಯಕೀಯ ಸೇವೆ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜದಲ್ಲಿ ವೈದ್ಯರನ್ನು ಗೌರವದಿಂದ ಕಾಣುವ ಹಾಗೂ ದೊಡ್ಡ ಸ್ಥಾನದಲ್ಲಿ ಗುರುತಿಸಲಾಗುತ್ತಿದೆ ಎಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡೀನ್ ಹಾಗೂ ನಿರ್ಧೇಶಕ ಡಾ.ಎಂ.ಎಲ್.ಮಂಜುನಾಥ್ ತಿಳಿಸಿದರು. ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಫ್ರಷರ್ಸ್ ಡೇ ಅಪ್ರತಿಮನ್ಸ್ 2025 ಅನ್ನು ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ವೃತ್ತಿ ಉದಾತ್ತ ವೃತ್ತಿಯಾಗಿದ್ದು, ವೈದ್ಯರಾದ ನಂತರ ನಿಸ್ವಾರ್ಥ ವೃತ್ತಿ ಪರತೆ ಬೆಳಸಿಕೊಳ್ಳಿ ಎಂದರು.

ಮಾನವೀಯತೆ ಬೆಳೆಸಿಕೊಳ್ಳಿ

ಉತ್ತಮ ವೈದ್ಯ ರೋಗಿಗೆ ಚಿಕಿತ್ಸೆ ನೀಡುತ್ತಾನೆ. ಸಾಮಾನ್ಯ ವೈದ್ಯ ಕಾಯಿಲೆಗೆ ಮಾತ್ರ ಚಿಕಿತ್ಸೆ ನೀಡುತ್ತಾನೆ. ರೋಗಿಯನ್ನು ಮಾನವೀಯ ಗುಣಗಳಿಂದ ಕಾಣಬೇಕು. ವೈದ್ಯರು ಹಣದ ಬಗ್ಗೆ ಯೋಚಿಸದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೆ ವೃತ್ತಿಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದರೆ ಹಣವೇ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ ಎಂದರು.

ವೈದ್ಯಕೀಯ ವಿದ್ಯಾರ್ಥಿಗಳು ದೊಡ್ಡ ಕನಸು ಹೊಂದಿರಬೇಕು. ಸಾಧನೆಗೆ ಯಾವುದೇ ಶಾರ್ಟ್ ಕಟ್‌ಗಳು ಇರುವುದಿಲ್ಲ, ಪರಿಶ್ರಮ, ಸಮಯ ಪಾಲನೆ, ಬದ್ದತೆಯಿಂದ ತಮ್ಮ ಗುರಿ ತಲುಪಲು ಸಾಧ್ಯ. ವೈದ್ಯ ವೃತ್ತಿಯಲ್ಲಿ ಜೂನಿಯರ್ ಮತ್ತು ಸೀನಿಯರ್ ಎಂಬ ಬೇಧವಿಲ್ಲ. ವಿದ್ಯಾರ್ಥಿಗಳು ತಾಯಿ, ಮಾತೃಭೂಮಿಯನ್ನು ಪ್ರೀತಿಸುವಷ್ಟೇ ಗುರುಗಳನ್ನು ಪ್ರೀತಿಸಬೇಕು. ಕೇವಲ ಅಂಕ ಗಳಿಕೆಯಿಂದ ಯಶಸ್ಸು ಅಸಾಧ್ಯ, ಉತ್ತಮ ವೈದ್ಯರಾಗಲು ಮೊದಲು ತನ್ನ ವೃತ್ತಿಯ ಮಹತ್ವ ಮತ್ತು ಧ್ಯೇಯವನ್ನು ತಿಳಿದು ಸೇವೆಯಲ್ಲಿ ತೊಡಗುವಂತೆ ತಿಳಿಸಿದರು.

ವೃತ್ತಿ ಕೌಶಲ್ಯ, ಜವಾಬ್ದಾರಿ

ವೈದ್ಯ ವಿದ್ಯಾರ್ಥಿಗಳು ವೃತ್ತಿಯ ಬಗ್ಗೆ ಗೌರವ, ವೃತ್ತಿ ಕೌಶಲ್ಯ ಮತ್ತು ಜವಾಬ್ದಾರಿಯನ್ನು ಅರಿಯಬೇಕು. ಮೊಬೈಲ್, ಇಂಟರ್‌ನೆಟ್‌ಗಳನ್ನು ಅವಶ್ಯಕತೆಗೆ ಮಾತ್ರ ಬಳಸಿ, ಹಾಗೆಯೇ ದುಶ್ಚಟಗಳಿಗೆ ಬಲಿಯಾಗದೆ ಸಮಯ ಹಾಳು ಮಾಡದೆ ಪರಿಶ್ರಮದಿಂದ ವಿದ್ಯಾವಂತರಾಗಬೇಕು. ಆರೋಗ್ಯ ಮತ್ತು ಶಿಕ್ಷಣ ದೇಶದ ಬೆಳವಣಿಗೆಯನ್ನು ನಿರ್ಣಯಿಸುವ ಪ್ರಮುಖ ಕ್ಷೇತ್ರಗಳು, ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ವೃತ್ತಿಯಲ್ಲಿ ಯಶಸ್ವಿಯಾಗಬೇಕು.ರೋಗ ಬೇಗ ಗುಣಪಡಿಸುವ ಪ್ರಕ್ರಿಯೆಯಲ್ಲಿ ವೈದ್ಯರು ರೋಗಿಯೊಂದಿಗಿನ ಉತ್ತಮ ಒಡನಾಟವು ಪ್ರಮುಖವಾದುದು ಎಂದು ಕಿವಿಮಾತು ಹೇಳಿದರು.

ಈ ವೇಳೆ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವಿಭಾಗ ಮುಖ್ಯಸ್ಥರಾದ ಡಾ.ಎಂ.ಆರ್.ಅನಿತ, ಡಾ.ಸುರೇಶ್ ನಾಯಕ್, ಡಾ.ಎಸ್.ಹೆಚ್.ಗೀತಾ, ಡಾ.ಸಿ.ಎಸ್.ನಾಗಲಕ್ಷ್ಮಿ,ಡಾ.ರವೀಂದ್ರ,ಡಾ.ಅರ್ಜುನ್ ಬಹದ್ದೂರ್, ಡಾ.ಶಂಕರಪ್ಪ,ಡಾ.ಪುಷ್ಪ, ಡಾ.ಮಂಜುಳ, ಚೈತ್ರರಾವ್, ಡಾ.ಅನಿತಾಲಕ್ಷ್ಮಿ, ಡಾ.ಭಾರ್ಗವಿ, ಡಾ.ಜ್ಯೋತಿ, ಡಾ.ನರಸಿಂಹ, ಡಾ.ಹೇಮಂತ್, ಡಾ.ಸಂದೀಪ್, ಮೆಡಿಕಲ್ ವಿದ್ಯಾರ್ಥಿಗಳು ಇದ್ದರು.