ಹುಬ್ಬಳ್ಳಿ: ವಿಧಾನಪರಿಷತ್ತಿಗೆ 1980ರಿಂದ ಸತತ 8 ಬಾರಿ ಆಯ್ಕೆಯಾಗುವ ಮೂಲಕ 45 ವರ್ಷಗಳಿಂದ ಸುಧೀರ್ಘ ಸದನದ ಪಯಣದಲ್ಲಿ ಸಾಗುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ ಕುರಿತು ಸಿರಗೇರಿಯ ಅನ್ನಪೂರ್ಣ ಕ್ರಿಯೇಶನ್ಸ್ ನಿರ್ಮಿಸಿದ ಸಾಕ್ಷ್ಯಚಿತ್ರ ಜೂನ್ 16ರಂದು ಬಿಡುಗಡೆಗೊಳ್ಳಲಿದೆ ಎಂದು ಡಾ. ಬಸವರಾಜ ಧಾರವಾಡ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೂನ್ 16ರಂದು ಸೋಮವಾರ ಬೆಳಗ್ಗೆ 9.30ಕ್ಕೆ ಬಳ್ಳಾರಿ ನಗರದ ಅನಂತಪುರ ರಸ್ತೆಯಲ್ಲಿರುವ ಬಿ.ಪಿ.ಎಸ್.ಸಿ. ಸಭಾಂಗಣದಲ್ಲಿ ಸಚಿವ ಮಧು ಬಂಗಾರಪ್ಪ ಸಾಕ್ಷ್ಯಚಿತ್ವದ ಲೋಕಾರ್ಪಣೆ ಮಾಡಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎನ್. ಭರತರಡ್ಡಿ ಹಾಗೂ ಬಿಪಿಎಸ್‌ಸಿ ಸಂಸ್ಥೆ ಅಧ್ಯಕ್ಷ ಡಾ. ಮಹಿಮಾ ಪಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಿರಗೇರಿಯ ಅನ್ನಪೂರ್ಣ ಕ್ರಿಯೇಶನ್ಸ್ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಿದ್ದಾರೆ. ಎರಡನೇ ಭಾಗವನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ ಎಂದು ಅನ್ನಪೂರ್ಣ ಕ್ರಿಯೇಶನ್ಸ್ ನಿರ್ದೇಶಕ ಸಿರಿಗೇರಿ ಯರಿಸ್ವಾಮಿ ತಿಳಿಸಿದ್ದಾರೆ.