ದೊಡ್ಡಬಳ್ಳಾಪುರಕ್ಕೆ ಬೇಕು ಕಾವೇರಿ ನೀರು

| Published : Jun 16 2025, 04:56 AM IST

ಸಾರಾಂಶ

ಸ್ಥಳೀಯ ರೈತರ ವಿರೋಧದ ನಡುವೆಯು ಈಗಾಗಲೇ ನೆಲಮಂಗಲ ತಾಲೂಕಿನ ಕೆರೆಗಳಿಗೆ ವೃಷಭಾವತಿ ನೀರು ಹರಿಸುವ ಯೋಜನೆಯ ಕಾಮಗಾರಿಗೆ ಉಪಮುಖ್ಯಮಂತ್ರಿ ಗುದ್ದಲಿ ಪೂಜೆ ನರೆವೇರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿಗೆ ಬೇಕಿರುವುದು ಎತ್ತಿನಹೊಳೆ ಹಾಗೂ ಕಾವೇರಿ ನೀರು ಹೊರತು, ಬೆಂಗಳೂರಿನಲ್ಲಿ ಕೊಳಚೆ ನೀರು ಶುದ್ಧೀಕರಿಸಿ ಬಿಡುವ ವೃಷಭಾವತಿ ಯೋಜನೆಯಲ್ಲ. ಹೀಗಾಗಿ ವೃಷಭಾವತಿ ನೀರಾವರಿ ಯೋಜನೆ ವಿರುದ್ಧ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳು 15 ದಿನಗಳಲ್ಲಿ ನಿರ್ಣಯ ಅಂಗೀಕರಿಸಿ ನೀಡುವಂತೆ ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದರು.

ಇಲ್ಲಿನ ಜಗಜೀವನ್‌ರಾಮ್‌ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ, ನಗರಸಭೆ ಚುನಾಯಿತ ಜನಪ್ರತಿನಿಧಿಗಳ, ವಿವಿಧ ಸಂಘಟನೆ ಮುಖಂಡರ ಹಾಗೂ ಸಾರ್ವಜನಿಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ರೈತರ ವಿರೋಧದ ನಡುವೆಯು ಈಗಾಗಲೇ ನೆಲಮಂಗಲ ತಾಲೂಕಿನ ಕೆರೆಗಳಿಗೆ ವೃಷಭಾವತಿ ನೀರು ಹರಿಸುವ ಯೋಜನೆಯ ಕಾಮಗಾರಿಗೆ ಉಪಮುಖ್ಯಮಂತ್ರಿ ಗುದ್ದಲಿ ಪೂಜೆ ನರೆವೇರಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಕೆರೆ ಹಾಗೂ ಅರಳುಮಲ್ಲಿಗೆ ಕೆರೆಗಳಿಗೂ ಬೆಂಗಳೂರಿನಲ್ಲಿ ಹರಿಯುವ ವೃಷಾಭಾವತಿ ನೀರನ್ನು ಶುದ್ದೀಕರಿಸಿ ಹರಿಸುವ ಕಾಮಗಾರಿಯ ಸಮಗ್ರ ಯೋಜನಾ ವರದಿ ಸಿದ್ಧವಾಗುತ್ತಿದೆ. ಇದಕ್ಕೆ ಸ್ಥಳೀಯರು ಜನಪ್ರತಿನಿಧಿಗಳು ಮತ್ತು ಜನರು ಪ್ರತಿರೋಧ ತೋರಬೇಕು ಎಂದು ಹೇಳಿದರು.

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವೃಷಾಭಾವತಿ ನೀರನ್ನು ತಾಲೂಕಿನ ಕೆರೆಗಳಿಗೆ ಹರಿಸುವ ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸಿ ನೀಡಿದರೆ ವಿಧಾನ ಸಭೆಯ ಮುಂಗಾರು ಅಧಿ-ವೇಷನದಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ ತಾಲೂಕಿನ ಸಾಸಲು ಹೋಬಳಿಯ ಏಳು ಕೆರೆಗಳಿಗೆ ಮಾತ್ರ ನೀರು ತುಂಬಿಸುವ ಯೋಜನೆ ಇದೆ. ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟಿರುವ ತಾಲೂಕಿನ 28 ಕೆರೆಗಳಿಗೂ ಎತ್ತಿನಹೊಳೆ ನೀರು ತುಂಬಿಸಬೇಕು ಎಂದರು.

ಕಾವೇರಿಗಾಗಿ ಸರ್ವಪಕ್ಷ ನಿಯೋಗ:

ನಗರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕಾವೇರಿ ನೀರು ಹರಿಸುವ ಪೈಪ್‌ಲೈನ್ ಹಾಕಲಾಗಿದೆ. ಇದೇ ಪೈಪ್‌ಲೈನ್‌ ಮೂಲಕ ನಗರಸಭೆ ವ್ಯಾಪ್ತಿಗೆ ಹಾಗೂ ಕೈಗಾರಿಕಾ ಪ್ರದೇಶದಲ್ಲಿನ ದೊಡ್ಡತುಮಕೂರು, ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೂ ಕಾವೇರಿ ನೀರು ಸರಬರಾಜು ಮಾಡಬೇಕು. ಈ ಬಗ್ಗೆ ತಾಲೂಕಿನ ಸರ್ವ ಪಕ್ಷ ನಿಯೋಗವನ್ನು ರಾಜ್ಯ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ದು ಮನವಿ ಮಾಡಲಾಗುವುದು ಎಂದರು. ಕರೆದೊಯ್ದು ಮಾಡಲಾಗುವುದು

ಮಕ್ಕಳು ಬದುಕು ಕರಾಳ:

ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು ಮಾತನಾಡಿ, ನಮ್ಮ ತಾಲೂಕಿಗೆ ಬೆಂಗಳೂರಿನ ಕೊಚ್ಚೆ ನೀರಾಗಿರುವ ವೃಷಾಭಾವತಿ ನೀರು ಹರಿಸುವ ಹಾಗೂ ಬಿಬಿಎಂಪಿ ಕಸ ತಂದು ಸುರಿಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಯಾವುದೇ ತರಹದ ಹೋರಾಟಕ್ಕೂ ತಾಲೂಕಿನ ಜನ ಸಿದ್ಧ. ಇಲ್ಲದಿದ್ದರೆ ನಮ್ಮಮಕ್ಕಳ ಬದುಕು ಕರಾಳವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮೆಟ್ರೊ, ಕಾವೇರಿ ಬೇಕು:

ರೈತ ಸಂಘದ ಕಾರ್ಯದರ್ಶಿ ಆರ್.ಸತೀಶ್‌ ಮಾತನಾಡಿ, ದೇವನಹಳ್ಳಿಗೆ ಮಾತ್ರ ಕಾವೇರಿ ನೀರಿಸುವ ಯೋಜನೆ, ಮೆಟ್ರೊ ರೈಲು ಯೋಜನೆ ಜಾರಿಯಾದರೆ ಸಾಲದು. ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಿಗೂ ಯೋಜನೆಗಳು ಜಾರಿಯಾಗಬೇಕು. ಇದಕ್ಕೆ ನಾವು ಬೆಂಬಲವಾಗಿ ನಿಂತು ಹೋರಾಟ ಮಾಡಲು ಸಿದ್ದ ಎಂದರು.

ಭೂ ಸ್ವಾಧೀನ ನಿಲ್ಲಿಸಿ:

ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಕೆಎಐಡಿಬಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀಪಡಿಸಿಕೊಳ್ಳುತ್ತಿದೆ. ಆದರೆ ಸ್ವಾಧೀನವಾಗಿರುವ ಭೂಮಿಯನ್ನು ಮಾತ್ರ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಈ ಅವೈಜ್ಞಾನಿಕ ಭೂಸ್ವಾಧೀನ ನಿಲ್ಲಬೇಕು ಎಂದು ತಿಳಿಸಿದರು.

ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ನಗರಸಭೆಯ ಹಲವು ಸದಸ್ಯರು ಭಾಗಿಯಾದರು.

ಫೋಟೋ-

15ಕೆಡಿಬಿಪಿ1- ದೊಡ್ಡಬಳ್ಳಾಪುರ ಡಾ.ಬಾಬುಜಗಜೀವನ್ ರಾಂ ಭವನದಲ್ಲಿ ನಡೆದ ಸಭೆಯಲ್ಲಿ ಅರ್ಕಾವತಿ ಹೋರಾಟ ಸಮಿತಿ ಮುಖಂಡರು ಶಾಸಕ ಧೀರಜ್‌ ಮುನಿರಾಜ್‌ ಅವರಿಗೆ ಮನವಿ ಸಲ್ಲಿಸಿದರು.