ಕನ್ನಡಪ್ರಭ ವಾರ್ತೆ ಇಳಕಲ್ಲ
ತಾಲೂಕಿನ ಅಮೀನಗಡ ಹೊಬಳಿಯ ಉಪನಾಳ ಎಸ್.ಸಿ ಗ್ರಾಮದಲ್ಲಿ ಹಳ್ಳಕ್ಕೆ ನಿರ್ಮಿಸಲಾದ ಚೆಕ್ ಡ್ಯಾಂ ತೆರವುಗೊಳಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ರೈತ ಸೇನೆ ತಾಲೂಕು ಕಚೇರಿ ಭೀಮನಗಡ ರೈತ ಸೇನೆ ಹಮ್ಮಿಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ನಾಲ್ಕನೇ ದಿನದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಹಾಗೂ ಉಪಾಧ್ಯಕ್ಷರು ರೈತರಿಗೆ ನಿಮ್ಮ ಹೋರಾಟ ನ್ಯಾಯ ಸಿಗುವವರೆಗೂ ಮುಂದುವರೆಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು.ಇದೇ ವೇಳೆ ಬೆಳೆ ನಷ್ಟವಾಗಿ ಅನ್ಯಾಯಕ್ಕೆ ಒಳಗಾದ ಉಪನಾಳ ಎಸ್.ಸಿ. ಗ್ರಾಮದ ರೈತರು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಹಾಗೂ ಉಪಾಧ್ಯಕ್ಷ ಶಂಕರ ಪಾಟೀಲ ಅವರ ಮುಂದೆ ಕಣ್ಣೀರು ಹಾಕಿದರು.
ರೈತರಿಗೆ ಸಂತೈಸಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನ್ಯಾಯಕ್ಕಾಗಿ ನಡೆಸಿರುವ ರೈತರ ಹೋರಾಟ ಸಮರ್ಥನೀಯವಾಗಿದೆ. ಇಲ್ಲಿ ಕುಳಿತು ಕೇವಲ ಪ್ರತಿಭಟನೆ ಮಾಡಿದರೆ ಸಾಲದು. ಇದಕ್ಕೆ ಕಾನೂನಿನ ಚಡಿ ಏಟು ಬೇಕು. ಕಾನೂನಾತ್ಮಕವಾಗಿ ಹೋರಾಟ ಮಾಡುವುದು ಅತ್ಯವಶ್ಯವಾಗಿದೆ. ಇದು ಎಂಜಿನಿಯರ್ ಗಳಿಂದ ಆದ ಪ್ರಮಾದ. ರಂಗ ಸಮುದ್ರದಿಂದ ೨ ಕಿಮೀ ದೂರದ ಉಪನಾಳ ಎಸ್.ಸಿಯಲ್ಲಿ ಚೆಕ್ ಡ್ಯಾಂ ಕಾಮಗಾರಿ ಪ್ರಾರಂಭಿಸಿರುವುದೇ ಅವೈಜ್ಞಾನಿಕ. ಇದರ ಅವಶ್ಯಕತೆಯೇ ಇರಲಿಲ್ಲ. ರೈತರು ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಮನವಿ ಮಾಡಿದರೂ ಯಾರದೋ ಒತ್ತಡಕ್ಕೆ ನಿರ್ಮಿಸಿ ಅಲ್ಲಿರುವ ರೈತರನ್ನು ಸಂಕಷ್ಟಕ್ಕೆ ದೂಡಿದ್ದೀರಿ. ಕೂಡಲೇ ರೈತರಿಗೆ ಆದ ನಷ್ಟವನ್ನು ಪರಿಹಾರ ರೂಪದಲ್ಲಿ ಕೊಡಬೇಕು. ಹೊಲಗಳಿಗೆ ನೀರು ಹೋಗದಂತೆ ಅಡ್ಡಗೋಡೆ ನಿರ್ಮಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಸದಾ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಅಭಯ ನೀಡಿದರು.ಕರ್ನಾಟಕ ರೈತ ಸೇನೆ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಹಾಗೂ ಉಪಾಧ್ಯಕ್ಷ ಶಂಕರ ಪಾಟೀಲ ಮಾತನಾಡಿ, ಅಧಿಕಾರಿಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯ ಕೇಳಿ ನಾವಿಂದು ಬರಬೇಕಾಯಿತು. ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಬಂದಿರುವುದು ಈ ಹೋರಾಟಕ್ಕೆ ಆನೆ ಬಲ ಬಂದತ್ತಾಗಿದೆ. ರೈತರಿಗೆ ನ್ಯಾಯ ಸೀಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ. ನಾವು ಸದಾ ನಿಮ್ಮೊಂದಿರುರುತ್ತೇವೆ ಎಂದು ಹೇಳಿದರು.
ಪ್ರತಿಭಟನಾ ಸ್ಥಳದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಶಿಕಾಂತ ಬಂಡರಗಲ್ಲ, ಗುರು ಗಾಣಗೇರ, ರೈತ ಸೇನೆ ಮುಖಂಡರಾದ ಮಲ್ಲನಗೌಡ ತುಂಬದ, ನೀಲಪ್ಪ ಕಡಿಯವರ, ಹುಲ್ಲಪ್ಪ ಪೂಜಾರ, ಮಲ್ಲಪ್ಪ ಮೊಕಾಶಿ, ನಾಗರಾಜ ಹೂಗಾರ, ಹನುಮಂತ ಕಿಳ್ಳಿಕ್ಯಾತರ, ಧೂಳಪ್ಪ ಉಮಚಗಿ, ಬಸವರಾಜ ಕುರಟ್ಟಿ, ಗಾಡಪ್ಪ ತಳೀಗೇರ, ವಿಠಲ ಹೊಸುರ, ಹುಚ್ಚಪ್ಪ ಜಲಗೇರಿ, ಶಿದ್ದಪ್ಪ ಸುಳ್ಯದ, ಬಿಜೆಪಿ ಮುಖಂಡರಾದ ಲಕ್ಷ್ಮಣ ಗುರಂ, ಮಹಾಂತಪ್ಪ ಚನ್ನಿ, ವಿಜಯ ಗಿರಡ್ಡಿ, ಮಂಜುನಾಥ ಶೆಟ್ಟರ, ಸಂತೋಷ ಐಲಿ, ಚಂದ್ರಶೇಖರ ಏಕಬೋಟೆ ಇತರರು ಉಪಸ್ಥಿತರಿದ್ದರು.