ಸಾರಾಂಶ
ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನವಾದ ಗಾಯತ್ರಿ ಧ್ಯಾನಪೀಠದಲ್ಲಿ ಆಷಾಢ ಹುಣ್ಣಿಮೆಯಂದು ಶ್ರೀ ಗುರು ಪೂರ್ಣಿಮೆ ಆಚರಣೆ ಗುರುವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ದೊಡ್ಡಣ್ಣಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನವಾದ ಗಾಯತ್ರಿ ಧ್ಯಾನಪೀಠದಲ್ಲಿ ಆಷಾಢ ಹುಣ್ಣಿಮೆಯಂದು ಶ್ರೀ ಗುರು ಪೂರ್ಣಿಮೆ ಆಚರಣೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೈಭವದಿಂದ ಸಂಪನ್ನಗೊಂಡಿತು.ಗಾಯತ್ರಿ ಧ್ಯಾನಪೀಠದಲ್ಲಿ ಗುರು ಹುಣ್ಣಿಮೆಯ ಪ್ರಯುಕ್ತ ಶ್ರೀ ಮನ್ಯು ನಾಮಕ ಲಕ್ಷ್ಮೀನರಸಿಂಹ ಮಹಾ ಯಾಗವನ್ನು ವೇದಮೂರ್ತಿ ವಿಖ್ಯಾತ್ ಭಟ್ ನೇತೃತ್ವದಲ್ಲಿ ನೆರವೇರಿತು. ಯಾಗದ ಅಂಗವಾಗಿ ವಿವಿಧ ಆರಾಧನೆಗಳು ಸಂಪನ್ನಗೊಂಡವು
ಶ್ರೀ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿ ಪ್ರಸನ್ನ ಪೂಜೆ ನೆರವೇರಿದ ಬಳಿಕ ಕ್ಷೇತ್ರ ಗುರುಗಳಾದ ಶ್ರೀ ರಮಾನಂದ ಗುರೂಜಿ ಪಾದಪೂಜೆಯನ್ನು ಶಿಷ್ಯವರ್ಗದವರು ನೆರವೇರಿಸಿದರು. ನಂತರ ಪ್ರಜ್ಞಾ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಗಾನನಾಟ್ಯನಾದ ಪ್ರಿಯಳಾದ ದೇವಿಯ ಸನ್ನಿಧಾನದಲ್ಲಿ ವಿದ್ವಾನ್ ಭವಾನಿ ಶಂಕರ್ ನೇತೃತ್ವದ ಬ್ರಾಹ್ಮರಿ ನೃತ್ಯಾಲಯ ಮತ್ತು ಡಾ. ಮಂಜರಿಚಂದ್ರ ಪುಷ್ಪರಾಜ್ ಅವರ ಸೃಷ್ಟಿ ಕಲಾಕುಟೀರದ ಕಲಾವಿದರು ನೃತ್ಯ ಸೇವೆ ಸಮರ್ಪಿಸಿದರು.
ಗುರೂಜಿ ಸೂಕ್ತ ಮಾರ್ಗದರ್ಶನದಿಂದ ಕ್ಷೇಮ ಕಂಡುಕೊಂಡ ಭಕ್ತ ಜನರು ಗುರು ಅಭಿನಂದನೆಯನ್ನು ಸಲ್ಲಿಸಿ , ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಮಧ್ಯಾಹ್ನ ಕ್ಷೇತ್ರದ ಭಕ್ತರಿಗೆ ಮೃಷ್ಟಾನ್ನ ಸಂತರ್ಪಣೆ ಆಯೋಜಿಸಲಾಗಿತ್ತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ