ಕೊಪ್ಪಳ: ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ಜತೆಗೆ ಗೃಹ ಬಳಕೆಯ ಸಿಲಿಂಡರ್ ಸಮಸ್ಯೆ ತಲೆದೋರಿದ್ದು, ಕೊಪ್ಪಳ ನಗರದ ಭಾರತ ಗ್ಯಾಸ್ ಎಜೆನ್ಸಿ ಲೋಡ್ ಬಂದಿಲ್ಲ, ಸಿಲಿಂಡರ್ ಲಭ್ಯವಿಲ್ಲ ಎಂದು ಬೋರ್ಡ್ ಹಾಕಿ ಬೀಗ ಹಾಕಿದ್ದಾರೆ.
ಹೌದು, ಈಗ ಕೊಪ್ಪಳದಲ್ಲಿ ಗೃಹ ಬಳಕೆಯ ಸಿಲಿಂಡರ್ ಅಭಾವ ಎದುರಾಗಿದೆ. ಅದರಲ್ಲೂ ಗ್ಯಾಸ್ ಎಜೆನ್ಸಿ ಅವರು ಬೋರ್ಡ್ ನೇತು ಹಾಕಿ, ಸಿಲಿಂಡರ್ ಲಭ್ಯವಿಲ್ಲ ಎಂದು ಹಾಕಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಸಿಲಿಂಡರ್ ಸಮಸ್ಯೆ ಮತ್ತಷ್ಟು ಜಠಿಲವಾಗಲಾರಂಭಿಸಿದೆ.ಇದುವರೆಗೂ ಗೃಹ ಬಳಕೆಯ ಸಿಲಿಂಡರ್ ಸಮಸ್ಯೆಯಿಲ್ಲ ಎನ್ನುವ ಭಾವನೆ ಇತ್ತು. ಆದರೆ, ಗ್ಯಾಸ್ ಎಜೆನ್ಸಿ ಈ ರೀತಿಯ ಬೋರ್ಡ್ ಹಾಕುತ್ತಿದ್ದಂತೆ ಸಿಲಿಂಡರ್ಗಾಗಿ ಅಲೆಯುವವರ ಸಂಖ್ಯೆ ದುಪ್ಪಟ್ಟಾಗಿದೆ. ಗ್ಯಾಸ್ ಮನೆ ಮನೆಗೆ ನೀಡುವವರು ಮತ್ತು ಗ್ಯಾಸ್ ಎಜೆನ್ಸಿಯ ಎಲ್ಲ ನಂಬರ್ ಆಪರೇಟ್ ಆಗುತ್ತಿಲ್ಲ. ಕೆಲವರು ಕರೆ ಸ್ವೀಕಾರ ಮಾಡುತ್ತಿಲ್ಲ. ಇನ್ನು ಕೆಲವರ ಮೊಬೈಲ್ ಸ್ವಿಚ್ ಆಗಿವೆ.
ಇದು, ಕೊಪ್ಪಳ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಭಾರತ್ ಗ್ಯಾಸ್ ಬಳಕೆ ಮಾಡುವವರೆಲ್ಲರಿಗೂ ನಿಧಾನಕ್ಕೆ ಸಿಲಿಂಡರ್ ಸಮಸ್ಯೆಯಾಗಲಾರಂಭಿಸಿದೆ. ಹೀಗಾಗಿ, ಬುಕ್ಕಿಂಗ್ ಮಾಡುವವರ ಸಂಖ್ಯೆಯೂ ದುಪ್ಪಟ್ಟಾಗಿದೆ. ಬುಕ್ಕಿಂಗ್ ಆಗದೆ ಇರುವುದರಿಂದ ಎಜೆನ್ಸಿಯ ಬಳಿಗೆ ಹೋಗಲಾರಂಭಿಸಿದ್ದಾರೆ. ಇದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.ಕೃತಕ ಅಭಾವ: ಇಲಾಖೆಯ ಅಧಿಕಾರಿ ನೀಡುವ ಮಾಹಿತಿ ಪ್ರಕಾರ ಇದುವರೆಗೂ ಅಡುಗೆ ಅನಿಲ ಸಮಸ್ಯೆಯಿಲ್ಲ. ಬೇಕಾಗುವಷ್ಟು ಪೂರೈಕೆ ಇದೆ ಎಂದು ಹೇಳುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆಯ ಜತೆಗೆ ಗೃಹಬಳಕೆಯ ಸಿಲಿಂಡರ್ ಸಮಸ್ಯೆಯಾಗಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೃತಕ ಅಭಾವ ಸೃಷ್ಟಿ ಮಾಡಿ, ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಗ್ಯಾಸ್ ಬುಕ್ಕಿಂಗ್ ಆಗದೆ ಇದ್ದರೂ ಕಾಳಸಂತೆಯಲ್ಲಿ ಬುಕ್ ಮಾಡಿ, ಕೊಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ಗ್ಯಾಸ್ ಎಜೆನ್ಸಿಗೆ ಬೀಗ ಬೀಳುತ್ತಿದ್ದಂತೆ ಕಾಳಸಂತೆಯಲ್ಲಿ ಸಿಲಿಂಡರ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಇದನ್ನು ಅಧಿಕಾರಿಗಳು ಪತ್ತೆ ಮಾಡಬೇಕಾಗಿದೆ. ಸರ್ಕಾರಿ ಒಡೆತನದ ಭಾರತ ಗ್ಯಾಸ್ ಎಜೆನ್ಸಿಯಲ್ಲಿಯೇ ಈಗ ಸಿಲಿಂಡರ್ ಇಲ್ಲ ಎನ್ನುವುದು ದೊಡ್ಡ ಆತಂಕವನ್ನುಂಟು ಮಾಡಿದೆ.
ಮದುವೆಗೂ ಬಿಸಿ: ಕೊಪ್ಪಳ ನಗರ ಸೇರಿದಂತೆ ವಿವಿಧ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಮದುವೆಗೆ ಸಿಲಿಂಡರ್ ಸಮಸ್ಯೆಯ ಬಿಸಿ ತಟ್ಟಿದೆ. ಸಿಲಿಂಡರ್ ಸಿಗದೆ ಇರುವುದಕ್ಕೆ ಕಟ್ಟಿಗೆಯ ಒಲೆ ಹೂಡಿ ಮದುವೆಗೆ ಬಂದವರಿಗೆ ಅಡುಗೆ ಮಾಡಿ ಹಾಕಿದ್ದಾರೆ.