ಸಾರಾಂಶ
ಕಿಕ್ಕೇರಿ: ಹರೆಯದ ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡುವುದರಿಂದ ಸಂಭವಿಸುವ ಅವಘಡಗಳಿಗೆ ಪೋಷಕರು ಹೊಣೆಯಾಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಇನ್ಸ್ಪೆಕ್ಟರ್ ರೇವತಿ ಎಚ್ಚರಿಕೆ ನೀಡಿದರು.
ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತೆ ಸಪ್ತಾಹ, ಅಪರಾಧ ತಡೆಯುವಿಕೆ, ಸೈಬರ್ ಕ್ರೈಂ ಮಾಹಿತಿ ಕುರಿತು ಮಾತನಾಡಿದರು.ನಾವೆಲ್ಲರೂ ಹುಟ್ಟಿನಿಂದ ಸಾಯುವವರಿಗೆ ಕಾನೂನು ವ್ಯಾಪ್ತಿಯಲ್ಲಿ ಬದುಕಬೇಕಿದೆ. ವಿಶ್ವಜ್ಞಾನಿ ಡಾ.ಅಂಬೇಡ್ಕರ್ ನೀಡಿರುವ ಸಂವಿಧಾನ ಸರ್ವರ ಬದುಕಿನ ನೆಮ್ಮದಿಗೆ ಸಹಕಾರಿಯಾಗಿದೆ. ರಸ್ತೆ ಸುರಕ್ಷತೆ ನಿಯಮ ಪಾಲಿಸಿ ಅಪ್ರಾಪ್ತ ಮಕ್ಕಳ ವಾಹನ ಚಲಾವಣೆಯಿಂದ ಸಾಕಷ್ಟು ಅವಘಡ ಸಂಭವಿಸುತ್ತಿವೆ. ಸೂಕ್ತ ದಾಖಲೆಗಳು ಇಲ್ಲದೆ ವಾಹನ ಚಾಲನೆಗೆ ಅವಕಾಶ ನೀಡಬಾರದು ಎಂದು ಕಿವಿಮಾತು ಹೇಳಿದರು.
ಶಿಕ್ಷಣ ಪ್ರತಿ ಮಗುವಿನ ಹಕ್ಕು. ಮಕ್ಕಳಿಗೆ ಬೆಲೆಬಾಳುವ ಆಭರಣವನ್ನು ಹಾಕಿಸಿ ಹೊರಗಡೆ ಕಳಿಸಬಾರದು. ಅಪ್ರಾಪ್ತ ಮಕ್ಕಳ ವಿವಾಹದ ಬಗ್ಗೆ ಎಚ್ಚರ ವಹಿಸಬೇಕು. ಮೊಬೈಲ್ ಗೀಳಿನಿಂದ ಹಲವು ಅವಘಡಗಳು ಸಂಭವಿಸುತ್ತಿವೆ. ಆನ್ಲೈನ್ ಗೇಮಿಂಗ್ ಚಟ ಯುವಕರು, ಮಕ್ಕಳ ಬದುಕು ಕಸಿಯುತ್ತಿದೆ ಎಂದು ಎಚ್ಚರಿಸಿದರು.ಮದ್ಯಪಾನ, ಧೂಮಪಾನ, ದುಶ್ಚಟಗಳು ಯುವಕರನ್ನು ಬಲುಬೇಗ ಆಕರ್ಷಿಸಿ ಅವರ ಬದುಕನ್ನು ಸರ್ವನಾಶ ಮಾಡುತ್ತಿವೆ. ಸೈಬರ್ ಕ್ರೈಂ, ಬ್ಯಾಂಕ್ ಅಧಿಕಾರಿಗಳು ಎಂದು ಮಾಹಿತಿ ಕೇಳಿದರೆ ಯಾವುದೇ ಕಾರಣಕ್ಕೂ ಯಾವುದೇ ಮಾಹಿತಿ ನೀಡಬಾರದು. ಮಾದಕ ವಸ್ತು ಮಾರಾಟ ಜಾಲ, ಆಘಾತಕರ ಚಟುವಟಿಕೆಗಳು ನಡೆಯುವಿಕೆ, ಅಪರಿಚಿತ ವ್ಯಕ್ತಿಗಳು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿದಾರರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು.
ಈ ವೇಳೆ ಸಿಬ್ಬಂದಿ ಕುಮಾರ್, ಮೂರ್ತಿ, ಶಾಲಾ ಶಿಕ್ಷಕರು ಇದ್ದರು.