ಸಾರಾಂಶ
- ಜಿಲ್ಲಾ ಜವಾಹರ್ ಲಾಲ್ ಮಂಚ್ನಿಂದ ಜನಜಾಗೃತಿಗಾಗಿ ಬೃಹತ್ ಮಾನವ ಸರಪಳಿ- ಕಾಲ್ನಡಿಗೆ ಜಾಥಾ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ವಿದ್ಯಾರ್ಥಿ, ಯುವಜನರು ಗಾಂಜಾ, ಡ್ರಗ್ಸ್ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗಿ, ಬದುಕು, ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳೀದರು.
ನಗರದ ಶ್ರೀ ಜಯದೇವ ವೃತ್ತದಲ್ಲಿ ಸೋಮವಾರ ಜಿಲ್ಲಾ ಜವಾಹರ್ ಲಾಲ್ ಮಂಚ್ನಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳು ಸಮಾಜಕ್ಕೆ ಹಾಗೂ ದೇಶಕ್ಕೆ ಮಾರಕ ಎಂಬ ಘೋಷವಾಕ್ಯದೊಂದಿಗೆ ಶ್ರೀ ಸಿದ್ಧಗಂಗಾ ಶಾಲಾ ಮಕ್ಕಳಿಂದ ಬೃಹತ್ ಮಾನವ ಸರಪಳಿ ಹಾಗೂ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಮಾತನಾಡಿದರು.ದುಶ್ಚಟಗಳಿಗೆ ತುತ್ತಾದರೆ ಭವಿಷ್ಯವೇ ಸರ್ವನಾಶವಾಗುತ್ತದೆ. ಯುವಪೀಳಿಗೆಯಲ್ಲಿ ಮಾದಕ ವಸ್ತುಗಳ ಅಪಾಯದ ಕುರಿತಂತೆ ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳು ಸೇರಿದಂತೆ ಎಲ್ಲ ಕಡೆ ವ್ಯಾಪಕ ಜಾಗೃತಿ, ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ಮಾದಕ ವ್ಯಸನಗಳಿಂದಾಗಿ ಎಷ್ಟೋ ಜನರು ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಕೆಲವರು ವ್ಯಸನ ತ್ಯಜಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳೂ ಇವೆ ಎಂದು ತಿಳಿಸಿದರು.
ಯುವಜನರು ಇಂತಹ ದುಶ್ಚಟ, ವ್ಯಸನಗಳಿಗೆ ಬಲಿಯಾಗದೇ ತಮ್ಮ ಆರೋಗ್ಯ, ಭವಿಷ್ಯ, ಬದುಕಿನ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಓದಿನತ್ತ ಗಮನ ಕೇಂದ್ರೀಕರಿಸಿ, ಉನ್ನತ ಸಾಧನೆ ಮೆರೆಯಬೇಕು. ಪಾಲಕರು ಕಷ್ಟಪಟ್ಟು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಅದನ್ನೆಲ್ಲಾ ಅರ್ಥ ಮಾಡಿಕೊಂಡು ಯುವಕ-ಯುವತಿಯರು, ವಿದ್ಯಾರ್ಥಿಗಳು ಉತ್ತಮವಾಗಿ ಉಜ್ವಲ ಭವಿಷ್ಯ ತಮ್ಮದಾಗಿಸಿಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ಮಾತ್ರವೇ ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ, ಸಹಭಾಗಿತ್ವವೂ ಮುಖ್ಯ ಎಂದು ವಿವರಿಸಿದರು.ಸಾರ್ವಜನಿಕರು ಎಲ್ಲಿಯಾದರೂ ಮಾದಕ ವಸ್ತುಗಳು, ಗಾಂಜಾದಂತಹ ಅಮಲಿನ ಪದಾರ್ಥ ಮಾರಾಟ, ಸಾಗಾಟ ಮಾಡುವುದು, ಬಳಕೆ ಮಾಡುತ್ತಿರುವುದು, ಸೇವಿಸುತ್ತಿರುವುದು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು. ಆಗ ಮಾತ್ರ ಇದನ್ನೆಲ್ಲಾ ಸಂಪೂರ್ಣ ತೊಡೆದು ಹಾಕಲು ಸಾಧ್ಯ ಎಂದು ದಿನೇಶ ಶೆಟ್ಟಿ ತಿಳಿಸಿದರು.
ಬಾಲ್ ಮಂಚ್ ರಾಜ್ಯಾಧ್ಯಕ್ಷ ಎಚ್.ಜೆ.ಮೈನುದ್ದೀನ್, ಮೊಹಮ್ಮದ್ ಜಿಕ್ರಿಯ, ಫಯಾಜ್ ಅಹಮ್ಮದ್, ಕೆ.ಎಚ್.ಪ್ರೇಮಾ, ನಾಗರಾಜ, ಶಿಲ್ಪಾ, ಭರತ್, ಅಫ್ರೀದ್, ವೀರೇಶ, ಪ್ರವೀಣ, ಲಿಯಾಖತ್ ಅಲಿ, ಸಲ್ಮಾ ಬಾನು, ಖಾಜಾ, ಅಮ್ಜದ್, ಯುವ ಕಾಂಗ್ರೆಸ್ ಮುಖಂಡರಾದ ಮುಜಾಹಿತ್ ಪಾಷಾ, ಹರೀಶ, ಬಾಷಾ ಇತರರು ಇದ್ದರು. ಸಿದ್ದಗಂಗಾ ಶಾಲೆ ಸಾವಿರಾರು ವಿದ್ಯಾರ್ಥಿಗಳು ಬಿತ್ತಿಪತ್ರ ಹಿಡಿದು ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸಿದರು.- - -
(ಕೋಟ್) ಮಾದಕ ವಸ್ತುಗಳ ವಿರುದ್ಧ ಪ್ರತಿಯೊಬ್ಬರೂ ಹೋರಾಟ ನಡೆಸಬೇಕಾಗಿದೆ. ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಸಾವಿರಾರು ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಕಾಲ್ನಡಿಗೆ ಜಾಥಾದಲ್ಲಿ ಭಾಗಿಯಾಗಿದ್ದಾರೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಕರಪತ್ರ ಹಿಡಿದು ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಇದು ಜನರ ಗಮನವನ್ನೂ ಸೆಳೆಯಿತು. - ಎಂ.ಮೊಹಮ್ಮದ್ ಜಿಕ್ರಿಯಾ, ಜಿಲ್ಲಾಧ್ಯಕ್ಷ- - -
-30ಕೆಡಿವಿಜಿ8:ಮಾದಕ ವಸ್ತುಗಳು ಸಮಾಜಕ್ಕೆ ಹಾಗೂ ದೇಶಕ್ಕೆ ಮಾರಕ ಎಂಬ ಘೋಷವಾಕ್ಯದಡಿ ನಡೆದ ಕಾಲ್ನಡಿಗೆ ಜಾಥಾಗೆ ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಚಾಲನೆ ನೀಡಿದರು.