ಸಾರಾಂಶ
- ಪಂಚಮಸಾಲಿಗಳಿಗೆ 2ಎ ಮೀಸಲಾತಿ ಬಿಜೆಪಿಯಿಂದ ಮಾತ್ರ ಸಾಧ್ಯ: ಮಾಜಿ ಸಚಿವ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಬಿಜೆಪಿಗೆ ಮತ ಹಾಕಬೇಡಿ ಎನ್ನುವ ಕಳ್ಳ ಸ್ವಾಮಿಗಳು ಹೆಚ್ಚಾಗಿದ್ದು, ಅಂತಹವರ ಮಾತುಗಳನ್ನು ಕೇಳದೇ, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸುವ, ನಮ್ಮ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಿಜೆಪಿಗೆ ಮತ ನೀಡುವಂತೆ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿ ನಾಯಕ, ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಗರದ ಬಂಟರ ಭವನದಲ್ಲಿ ಬುಧವಾರ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ಹಮ್ಮಿಕೊಂಡಿದ್ದ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಬೇಡಿಕೆ ಆಲಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಗೂ ಸಮಾಜಕ್ಕೆ ಕಾಲಾವಕಾಶ ನೀಡತ್ತಿಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ಒಲವು ತೋರಿಲ್ಲ ಎಂದರು. ಎಸಿ ರೂಂನಲ್ಲಿ ಕುಳಿತುಕೊಳ್ಳುವ ಸ್ವಾಮಿಗಳು ಪಂಚಮಸಾಲಿ ಸಮಾಜಕ್ಕೆ ಬೇಡ. ಕಳ್ಳ ಸ್ವಾಮಿಗಳ ಮಾತುಗಳನ್ನು ಸಮಾಜ ಬಾಂಧವರೂ ಕೇಳಬಾರದು. ಕೂಡಲ ಸಂಗಮದಿಂದ ಬೆಂಗಳೂರುವರೆಗೆ ಐತಿಹಾಸಿಕ ಪಾದಯಾತ್ರೆ ಕೈಗೊಂಡ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಸಮಾಜದ ಮುಖಂಡರು, ಸಮಾಜ ಬಾಂಧವರ ಹೋರಾಟದಿಂದ 2 ಡಿ ಮೀಸಲಾತಿ ಸಿಕ್ಕಿದೆ. ಸಮಾಜಕ್ಕೆ ಒಟ್ಟು ಶೇ.7 ಮೀಸಲಾತಿ ಸಿಕ್ಕಿದೆ. ಪಂಚಮಸಾಲಿ, ಗೌಡರಿಗೆ ಮೀಸಲಾತಿ ಸಿಕ್ಕಿದ್ದರೆ ಅದು ಕೂಡಲ ಸಂಗಮ ಶ್ರೀಗಳ ಹೋರಾಟದಿಂದ ಎಂದು ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮಾಜಕ್ಕೆ ಮೀಸಲು ಸಿಕ್ಕ ನೋಟಿಫಿಕೇಷನ್ ಸುಟ್ಟು ಹಾಕಲಾಯಿತು. ಆದರೆ, ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಶೇ.23 ಮೀಸಲಾತಿ ಇತರೆ ಸಮುದಾಯಗಳಿಗೆ ಹಂಚಿಕೆ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಪಂಚಮಸಾಲಿ ಇತರೇ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ಅದು ಬಿಜೆಪಿಯಿಂದ ಮಾತ್ರವೇ ಸಾಧ್ಯ. ಸದ್ಯ ಪಂಚಮಸಾಲಿಗೆ 2 ಎ ಮೀಸಲಾತಿ ಅಸಾಧ್ಯ. 2 ಎ ಅಡಿಯಲ್ಲಿ ಹಾಲುಮತ, ಗಾಣಿಗ ಹೀಗೆ ಇತರೆ ಜಾತಿಗಳಿವೆ. ಒಂದುವೇಳೆ ಹಾಲುಮತ ಎಸ್ಟಿಗೆ ಹೋದರೆ ನಮಗೆ 2ಎ ಮೀಸಲು ಸಿಗಲು ಸಾಧ್ಯ ಎಂದು ತಿಳಿಸಿದರು.ಕಾಂಗ್ರೆಸ್ನಿಂದ ಪಂಚಮಸಾಲಿಗೆ ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯ ಭೇಟಿಗೆ ಲಕ್ಷ್ಮೀ ಹೆಬ್ಬಾಳಕರ್, ಶಿವಾನಂದ ಪಾಟೀಲ, ವಿನಯ ಕುಲಕರ್ಣಿ, ವಿಜಯಾನಂದ ಕಾಶೆಪ್ಪನವರ ಪ್ರಯತ್ನಿಸಿದರೂ ಸ್ಪಂದಿಸಿಲ್ಲ. ನಾನು ಹೋರಾಟಕ್ಕೆ ಬರುತ್ತೇನೆಂಬ ಘೋಷಣೆ ಬರುತ್ತಿದ್ದಂತೆ ಭೇಟಿಗೆ ಸಿಎಂ ಅವಕಾಶ ನೀಡಿದರು. ಕಾಂಗ್ರೆಸ್ಸಿನಲ್ಲಿ ಲಿಂಗಾಯತರ ಬಗ್ಗೆ ಅಲರ್ಜಿ ಇದೆಯೆಂದು ಹೆಬ್ಬಾಳ್ಕರ ಹೇಳಿದ್ದರು. ಈ ಬಗ್ಗೆ ವೀರರಾಣಿ ಕಿತ್ತೂರು ಚನ್ನಮ್ಮನ ಪುತ್ಥಳಿ ಎದುರು ಪ್ರಮಾಣ ಮಾಡಿ ಹೇಳಲು ನಾನು ಸಿದ್ಧ. ಮೀಸಲಾತಿ ಹೋರಾಟ ನೇತೃತ್ವದ ವಹಿಸಿರುವ ಸ್ವಾಮೀಜಿ ರಾತ್ರೋರಾತ್ರಿ ಬೇರೆ ಬೇರೆಯವರು ಬೆದರಿಕೆ ಕರೆ ಮಾಡುತ್ತಿದ್ದಾರೆ. 2 ಎ ಮೀಸಲಾತಿ, 2 ಡಿ ಮೀಸಲಾಗಿ ಸಕ್ರಮ ಮಾಡುವವರೆಗೂ ನಾವು ಸುಮ್ಮನಿರಲ್ಲ ಎಂದು ಗುಟುರು ಹಾಕಿದರು.
ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್ ಮಾತನಾಡಿ,ಬಿಜೆಪಿ, ಕಾಂಗ್ರೆಸ್ ಚುನಾವಣೆ ನಂತರ ಪಂಚಮಸಾಲಿ ಸಮಾಜವನ್ನು ನೆನಪಿಸಿಕೊಳ್ಳಬೇಕು. ಪ್ರಧಾನಿ ಮೋದಿಯಾಗಲೀ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಾಗಲೀ ದುಡ್ಡಿಲ್ಲದ ಯಾರನ್ನಾದರೂ ಗೆಲ್ಲಿಸುತ್ತಾರಾ? ಜನಸಮೂಹಕ್ಕೂ ವಿವೇಚನೆ, ಶಕ್ತಿ ಇರುತ್ತದೆ ಎಂದರು.ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ, ಸಂಸದ ಜಿ.ಎಂ.ಸಿದ್ದೇಶ್ವರ, ರವಿಕುಮಾರ, ಜೆಡಿಎಸ್ ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ಹರಪನಹಳ್ಳಿ ಆರುಂಡಿ ನಾಗರಾಜ, ನಾರಾಯಣ ಸ್ವಾಮಿ, ಜಿ.ಎಸ್.ಅನಿತಕುಮಾರ, ಪರಮೇಶ್ವರ ಗೌಡ್ರು, ರಘುನಂದನ್, ಡಾ.ನಾಗರಾಳ ಹುಲಿ, ಎಂ.ಎಸ್.ರುದ್ರಗೌಡ್ರು, ಚಂದ್ರಶೇಖರಪ್ಪ, ಮುರುಗೇಶ ಆರಾಧ್ಯ, ಗಾಯತ್ರಿ, ಮಂಜುಳಾ ಇತರರು ಇದ್ದರು.
- - --1ಕೆಡಿವಿಜಿ3:
ದಾವಣಗೆರೆಯಲ್ಲಿ ಪಂಚಮಸಾಲಿ ಸಮಾಜ ಬಾಂಧವರ ಸಭೆಯಲ್ಲಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಮಾತನಾಡಿದರು.