ಜನೌಷದಿ ಕೇಂದ್ರ ಸ್ಥಳಾಂತರಿಸದಿರಿ: ವಿ.ನೀಲೇಶ್ ಆಗ್ರಹ

| Published : Jun 01 2025, 02:17 AM IST

ಸಾರಾಂಶ

ನರಸಿಂಹರಾಜಪುರ, ಬಡವರ ಪಾಲಿಗೆ ಸಂಜೀವಿನಿ ಆಗಿರುವ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯಿಂದ ಬೇರ್ಪಡಿಸಬಾರದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಸರ್ಕಾರವನ್ನು ಆಗ್ರಹಿಸಿದರು.

ಬಿಜೆಪಿ ಪಕ್ಷದಿಂದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬಡವರ ಪಾಲಿಗೆ ಸಂಜೀವಿನಿ ಆಗಿರುವ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯಿಂದ ಬೇರ್ಪಡಿಸಬಾರದು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಸರ್ಕಾರವನ್ನು ಆಗ್ರಹಿಸಿದರು.

ಶನಿವಾರ ತಾಲೂಕು ಬಿಜೆಪಿ ಪಕ್ಷದಿಂದ ಸರ್ಕಾರಿ ಆಸ್ಪತ್ರೆ ಎದುರು ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಯಿಂದ ಸ್ಥಳಾಂತರಿಸುವ ಹುನ್ನಾರ ಮಾಡುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ.

ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆ ಒಳಭಾಗದಲ್ಲಿ ಇರುವಂತೆ ಆದೇಶ ಮಾಡಿತ್ತು. ಇದು ಬಡ ರೋಗಿಗಳಿಗೆ ವರದಾನವಾಗಿ ಕೆಲಸ ಮಾಡುತ್ತಿದೆ. ಹೊರಗಡೆ ಮೆಡಿಕಲ್ ಶಾಪ್‌ಗಳಲ್ಲಿ ₹100 ರು.ಗೆ ಸಿಗುವ ಔಷಧಿ ಜನೌಷಧಿಯಲ್ಲಿ ₹20- 30 ರು.ಗಳಿಗೆ ಸಿಗುತ್ತಿದೆ. ಇದರಿಂದ ಬಡ ರೋಗಿಗಳಿಗೆ ಅನುಕೂಲವಾಗಿದೆ. ಬಡವರ ಕಷ್ಟವನ್ನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್ ಪಕ್ಷ ಬಡವರ ಮೇಲೆ ಸದಾ ಗದ ಪ್ರಹಾರ ಮಾಡಿಕೊಂಡು ಬಂದಿದೆ ಎಂದು ದೂರಿದರು.

ಈಗ ಮೆಡಿಕಲ್ ಮಾಫೀಯದವರ ಕೈಗೊಂಬೆಯಾಗಿರುವ ಕಾಂಗ್ರೆಸ್ ಸರ್ಕಾರ ಜನೌಷಧಿಯನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲು ಮುಂದಾಗಿದೆ. ಒಂದು ವೇಳೆ ಜನೌಷಧಿ ಕೇಂದ್ರವನ್ನು ಸ್ಥಳಾಂತರಿಸಿದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆ ಮುಂಭಾಗದಲ್ಲಿ ಆಹೋರಾತ್ರಿ ಧರಣಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಸ್. ಅಶೀಶ್‌ಕುಮಾರ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜು,ಅಲ್ಪಸಂಖ್ಯಾತ ರಾಜ್ಯ ಕಾರ್ಯಕಾರಿಣಿ ಸದಸ್ಯ ಫರ್ವಿಜ್, ನಗರ ಘಟಕ ಅಧ್ಯಕ್ಷ ಸುರಭಿ ರಾಜೇಂದ್ರ, ಯುವ ಮೋರ್ಚದ ತಾಲೂಕು ಅಧ್ಯಕ್ಷ ಪ್ರೀತಮ್, ಬಿಜೆಪಿ ಮುಖಂಡ ಮನೋಜ್, ವೈ.ಎಸ್.ರವಿ, ಮಂಜುನಾಥ ಲಾಡ್, ಜಯರಾಂ, ದರ್ಶನ್, ಶೇಖರ್ ಇದ್ದರು.