ಶ್ರೀಚೆಲುವನಾರಾಯಣಸ್ವಾಮಿ ಅನ್ನದಾನ ಭವನ ನಿರ್ವಹಣೆಗೆ ಒಂದೂವರೆ ಲಕ್ಷ ರು.ದೇಣಿಗೆ

| Published : Jun 22 2025, 01:19 AM IST

ಶ್ರೀಚೆಲುವನಾರಾಯಣಸ್ವಾಮಿ ಅನ್ನದಾನ ಭವನ ನಿರ್ವಹಣೆಗೆ ಒಂದೂವರೆ ಲಕ್ಷ ರು.ದೇಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ನದಾನ ಭವನ ಚಾಲನೆಯಂದು ಸಚಿವರು ಲಕ್ಷ ರು. ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಮಹಾವಿಷ್ಟುವಿನ ದರ್ಶನಕ್ಕೆ ಪ್ರಶಸ್ತ ದಿನವಾದ ಏಕಾದಶಿಯೂ ಸೇರಿದ ಶನಿವಾರ ಮೇಲುಕೋಟೆಗೆ ಆಗಮಿಸಿದ ಸಚಿವರ ಪತ್ನಿ ಧನಲಕ್ಷ್ಮಿ ದೇಗುಲದ ಅಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ಅನ್ನದಾನ ಭವನ ನಿರ್ವಹಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ ಶನಿವಾರ ಒಂದೂವರೆ ಲಕ್ಷ ರು, ದೇಣಿಗೆಯ ಚೆಕ್ ನೀಡಿದರು.

ಅನ್ನದಾನ ಭವನ ಚಾಲನೆಯಂದು ಸಚಿವರು ಲಕ್ಷ ರು. ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಮಹಾವಿಷ್ಟುವಿನ ದರ್ಶನಕ್ಕೆ ಪ್ರಶಸ್ತ ದಿನವಾದ ಏಕಾದಶಿಯೂ ಸೇರಿದ ಶನಿವಾರ ಮೇಲುಕೋಟೆಗೆ ಆಗಮಿಸಿದ ಸಚಿವರ ಪತ್ನಿ ಧನಲಕ್ಷ್ಮಿ ಸ್ಥಾನಾಚಾರ್ಯ ಹಾಗೂ ದೇವಾಲಯದ ಪಾರುತ್ತೇಗಾರ್ ಶ್ರೀನಿವಾಸನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ಚೆಲುವನಾರಾಯಣಸ್ವಾಮಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ದೇವಾಲಯದ ಮುಂಭಾಗ ಕಾರ್ಯ ನಿರ್ವಾಹಕ ಅಧಿಕಾರಿ ಶೀಲಾರಿಗೆ ಚೆಕ್ ಹಸ್ತಾಂತರಿಸಿದರು.

ಚೆಲುವನಾರಾಯಣಸ್ವಾಮಿಯವರ ಅನ್ನದಾನ ಭವನ ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ನಡೆಯಬೇಕು. ಭಕ್ತರು ಉದಾರವಾಗಿ ಅನ್ನದಾನ ಭವನಕ್ಕೆ ಸಹಾಯ ಮಾಡಬೇಕು. ವರ್ಷದಲ್ಲಿ ಒಂದೊಂದು ದಿನ ಭಕ್ತರಿಗೆ ಅನ್ನದಾನ ಮಾಡಲು ದಾನಿಗಳು ಮುಂದೆ ಬಂದು ಸ್ವಾಮಿ ಕೈಂಕರ್ಯದಲ್ಲಿ ಭಾಗಿಯಾಗಬೇಕು ಎಂದರು.

ನಂತರ ಯತಿರಾಜದಾಸರ್ ಗುರುಪೀಠಕ್ಕೆ ಭೇಟಿ ನೀಡಿದ ಧನಲಕ್ಷ್ಮಿ ವಿಜಯಲಕ್ಷ್ಮಿ ಅಮ್ಮನವರ ದರ್ಶನ ಪಡೆದರು. ಈವೇಳೆ ಹಾಜರಿದ್ದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಪ್ರತಿಕ್ರಿಯಿಸಿ ದೇವಾಲಯದ ಅನ್ನದಾನ ಕೈಂಕರ್ಯಕ್ಕೆ ಸಚಿವರ ಪತ್ನಿ ಧನಲಕ್ಷ್ಮಿಯವರು ಲಕ್ಷರೂ ಕಾಣಿಕೆ ನೀಡಿ ಮಾದರಿಯಾಗಿದ್ದಾರೆ. ಸಚಿವ ದಂಪತಿಗಳು ವೈಯುಕ್ತಿಕವಾಗಿ ಹಲವು ಕೈಂಕರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.

ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಬರುವ ರಾಜಕಾರಣಿಗಳು ಉದ್ಯಮಿಗಳು, ಮನೆದೇವರ ಕುಲದವರು ಹಾಗೂ ದಾನಿಗಳು ದೇಗುಲದ ಅಭಿವೃದ್ಧಿ ಮತ್ತು ಸೇವೆಗಳಿಗೆ ಸಹಕಾರ ಮಾಡಬೇಕು ದೇವಾಲಯಗಳಲ್ಲಿ ವಿಶೇಷ ಉತ್ಸವಗಳ ವೇಳೆ ಕೈಂಕರ್ಯಗಳನ್ನು ವಹಿಸಿಕೊಂಡು ಉತ್ಸವಗಳು ವೈಭವಯುತವಾಗಿ ನಡೆಯಲು ಸಹಕಾರ ನೀಡಬೇಕು ಎಂದರು.

ಈ ವೇಳೆ ಶ್ರೀನಿವಾಸನ್ ಗುರೂಜಿ ಆಷಾಢ ಮಾಸದ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಜುಲೈ 12 ರಂದು ಮಹಾಭಿಷೇಕ -ಕಲ್ಯಾಣೋತ್ಸವದಿಂದ ಆರಂಭವಾಗಿ 10 ದಿನಗಳ ಕಾಲ ನಡೆಯಲಿದೆ. ಜುಲೈ 16ರಂದು ಐತಿಹಾಸಿಕ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ.

ಮೈಸೂರು ಮಹಾಜರಾಗಿದ್ದ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಹೆಸರಲ್ಲಿ ನಡೆಯುವ ಬ್ರಹ್ಮೋತ್ಸವದಲ್ಲಿ ಭಕ್ತರು ಪುಷ್ಪಕೈಂಕರ್ಯ ಸೇವೆ, ಅನ್ನದಾನ, ಉತ್ಸವ ವಾಹನೋತ್ಸವ ಮಾಡಿಸಲು ಅವಕಾಶವಿದೆ. ದಾನಿಗಳು ಮುಂದೆ ಬಂದು ಜಾತ್ರಾ ಮಹೋತ್ಸವದಲ್ಲಿ ಸೇವೆ ಮಾಡಬಹುದು ಎಂದು ಶ್ರೀನಿವಾಸನ್ ಗುರೂಜಿ ಮಾಹಿತಿ ನೀಡಿದರು.