ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿದ್ದ ಉದ್ಯಮಿ, ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹಲವು ಸ್ವಾಮೀಜಿಗಳು, ಗಣ್ಯರು ಸ್ಮರಿಸಿದರು.

ಬೆಂಗಳೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರೂ ಆಗಿದ್ದ ಉದ್ಯಮಿ, ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹಲವು ಸ್ವಾಮೀಜಿಗಳು, ಗಣ್ಯರು ಸ್ಮರಿಸಿದರು.

ಆರ್‌.ಟಿ.ನಗರದ ತರಳಬಾಳು ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಶಿವಶಂಕರಪ್ಪ ಅವರ ನುಡಿ-ನಮನ ಕಾರ್ಯಕ್ರಮದಲ್ಲಿ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶಿವಶಂಕರಪ್ಪ ಅವರು ದಾವಣಗೆರೆಯನ್ನು ಜ್ಞಾನಕಾಶಿಯಾಗಿ ಪರಿವರ್ತಿಸಿದ್ದರು. ಶ್ರೀಮಂತರು ದಾನಧರ್ಮದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.

ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಾನಶೂರ ಕರ್ಣ

ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಾನಶೂರ ಕರ್ಣರಾಗಿದ್ದರು. ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದ ಶಿವಶಂಕರಪ್ಪ ಅವರನ್ನು ಬರೀ ಮಾತಿನಲ್ಲಿ ಸ್ಮರಿಸಿದರೆ ಸಾಲದು. ಸಮುದಾಯಕ್ಕೆ ಸೇರಿದ ವೈದ್ಯಕೀಯ ಮತ್ತು ಇಂಜನಿಯರಿಂಗ್‌ ಕಾಲೇಜುಗಳಲ್ಲಿ ಸಮುದಾಯದ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ಸೀಟು ನೀಡಬೇಕು ಎಂದು ನುಡಿದರು.

ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಂಸದ ಬಸವರಾಜ ಬೊಮ್ಮಾಯಿ, ಸಚಿವ ಶರಣಪ್ರಕಾಶ್‌ ಪಾಟೀಲ್‌, ಮಹಾಸಭಾ ರಾಜ್ಯಾಧ್ಯಕ್ಷ ಡಾ.ಶಂಕರ ಬಿದರಿ, ಮಾಜಿ ಸಚಿವರಾದ ಲೀಲಾದೇವಿ ಆರ್‌.ಪ್ರಸಾದ್‌, ರಾಣಿ ಸತೀಶ್‌ ಮತ್ತಿತರರು ಹಾಜರಿದ್ದರು.

ಹಾಸ್ಟೆಲ್‌ ನಿರ್ಮಿಸಬೇಕು ಎಂಬುದು ಶಿವಂಶಕರಪ್ಪ ಅವರ ಆಶಯ

 ಬೆಂಗಳೂರಿನಲ್ಲಿ ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ನಿರ್ಮಿಸಬೇಕು ಎಂಬುದು ಶಿವಂಶಕರಪ್ಪ ಅವರ ಆಶಯವಾಗಿತ್ತು. ಇದನ್ನು ನನಸು ಮಾಡಲು ನಾವು ಬದ್ಧವಾಗಿದ್ದೇವೆ. ಎರಡು ಎಕರೆ ಜಮೀನು ಖರೀದಿಸಿದ್ದು ರೂಪುರೇಷೆ ಸಿದ್ಧವಾಗಿದೆ.

- ಈಶ್ವರ ಖಂಡ್ರೆ, ಅರಣ್ಯ ಸಚಿವ---