ಬಣ್ಣದ ಮಾತು, ಚಂದದ ಜಾಹೀರಾತಿಗೆ ಮರುಳಾಗದಿರಿ: ನ್ಯಾ. ಪರಶುರಾಮ

| Published : Dec 25 2024, 12:49 AM IST

ಸಾರಾಂಶ

ಗ್ರಾಹಕರನ್ನು ಮೋಸ ಮಾಡವಲ್ಲಿಯೂ ಕಂಪನಿಗಳ ಮಧ್ಯ ಪರಸ್ಪರ ಸ್ಪರ್ಧೆ ಹೆಚ್ಚುತ್ತಿದೆ. ಉತ್ಪನ್ನಗಳ ಬಗ್ಗೆ ಗ್ರಾಹಕರನ್ನು ಮೆಚ್ಚಿಸಿ, ಅವರನ್ನು ಸೆಳೆಯಲು ಚಂದದ ಭಾಷೆ, ಆಕರ್ಷಕ ದೃಶ್ಯ ಬಳಸಿ ಜಾಹೀರಾತು ರೂಪಿಸುವ ಉತ್ಪಾದಕ ಕಂಪನಿಗಳು, ಅದಕ್ಕೆ ಸಂಬಂಧಿಸಿದ ಎಚ್ಚರಿಕೆಗಳನ್ನು ಸಣ್ಣ ಅಕ್ಷರಗಳಲ್ಲಿ ನಮೂದಿಸಿರುತ್ತವೆ.

ಧಾರವಾಡ:

ವಿವಿಧ ಮಾಧ್ಯಮಗಳಲ್ಲಿ ದಿನನಿತ್ಯ ಬಿತ್ತರವಾಗುವ ಬಣ್ಣದ ಮಾತಿನ, ಚಂದದ ಜಾಹೀರಾತುಗಳಿಗೆ ಮಾರು ಹೋಗಿ ಜೀವನ ಪೂರ್ತಿ ದುಡಿದ ಹಣ ಹಾಗೂ ದೈಹಿಕ, ಮಾನಸಿಕ ಆರೋಗ್ಯ ಕಳೆದುಕೊಳ್ಳಬೇಡಿ. ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತೆ ಇರಲಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಸಲಹೆ ನೀಡಿದರು.

ನಗರದ ಕೆಪಿಇಎಸ್ ಕಾನೂನು ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೇರಿ ಹಲವು ಇಲಾಖೆಗಳ ಜತೆಗೂಡಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಉತ್ಪಾದನಾ ಕ್ಷೇತ್ರದಲ್ಲಿ ಅನಪೇಕ್ಷಿತ ಸ್ಪರ್ಧೆ ಬೆಳೆಯುತ್ತಿದೆ. ತಮ್ಮ ಉತ್ಪನ್ನಗಳ ಖರೀದಿಗಾಗಿ ಗ್ರಾಹಕರನ್ನು ಮೋಸ ಮಾಡವಲ್ಲಿಯೂ ಕಂಪನಿಗಳ ಮಧ್ಯ ಪರಸ್ಪರ ಸ್ಪರ್ಧೆ ಹೆಚ್ಚುತ್ತಿದೆ. ಉತ್ಪನ್ನಗಳ ಬಗ್ಗೆ ಗ್ರಾಹಕರನ್ನು ಮೆಚ್ಚಿಸಿ, ಅವರನ್ನು ಸೆಳೆಯಲು ಚಂದದ ಭಾಷೆ, ಆಕರ್ಷಕ ದೃಶ್ಯ ಬಳಸಿ ಜಾಹೀರಾತು ರೂಪಿಸುವ ಉತ್ಪಾದಕ ಕಂಪನಿಗಳು, ಅದಕ್ಕೆ ಸಂಬಂಧಿಸಿದ ಎಚ್ಚರಿಕೆಗಳನ್ನು ಸಣ್ಣ ಅಕ್ಷರಗಳಲ್ಲಿ ನಮೂದಿಸಿರುತ್ತವೆ. ಇದನ್ನು ಗಮನಿಸಬೇಕು ಎಂದರು.

ಉತ್ಪನ್ನಗಳ ರುಚಿ ಹೆಚ್ವಿಸಲು, ಆಕರ್ಷಕವಾಗಿ ಕಾಣಲು ಆಹಾರ ಪದಾರ್ಥಗಳಿಗೆ ರಾಸಾಯನಿಕ ಬಳಸುತ್ತಾರೆ. ಇದಕ್ಕೆ ಮಕ್ಕಳು, ಯುವಕ-ಯುವತಿಯರು ಹೆಚ್ಚು ಆಕರ್ಷಕರಾಗಿ ಖರೀದಿಸಿ, ತಿನ್ನುತ್ತಾರೆ. ಮುಂದೆ ಅನೇಕ ರೋಗಗಳಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಆದಷ್ಟು ನೈಸರ್ಗಿವಾಗಿ ಬೆಳೆಯುವ, ಸಿಗುವ ಆಹಾರ ಮತ್ತು ಇತರ ಉತ್ಪನ್ನ ಖರೀದಿಸುವಲ್ಲಿ ನಾವು ಆದ್ಯತೆ ನೀಡಬೇಕು ಎಂದು ನ್ಯಾಯಾಧೀಶರು ಆರೋಗ್ಯ ಸಲಹೆ ನೀಡಿದರು.

ಪ್ಲಾಸ್ಟಿಕ್ ಹಾಗೂ ಪರಿಸರ ಹಾನಿಕರ ಇತರ ಉತ್ಪನ್ನಗಳ ಬಳಕೆ ತ್ಯಜಿಸಿ, ಪರಿಸರ ಸ್ನೇಹಿ ವಸ್ತುಗಳ ಖರೀದಿಗೆ ಮಹತ್ವ ನೀಡಬೇಕು. ಪ್ರತಿಯೊಬ್ಬರಿಗೆ ಗ್ರಾಹಕ ಕಾಯ್ದೆಯ ಬಗ್ಗೆ ತಿಳಿವಳಿಕೆ ಮೂಡಿಸಲು ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕಿ ವಸುಂಧರ ಹೆಗಡೆ ಮಾತನಾಡಿದರು. ಆಯೋಗದ ಸದಸ್ಯ ಪ್ರಭು ಹಿರೇಮಠ, ಬಿ.ವಿ. ಸೋಮಾಪುರ, ಸರೋಜಕುಮಾರ ಬೆಹೆರಾ, ಬಿಪಿಸಿ ಕಂಪನಿಯ ಶಿವಕುಮಾರ, ಐಒಸಿ ಕಂಪನಿಯ ಸಂಜೀವಕುಮಾರ, ಆಹಾರ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕ ಶಿವಶಂಕರ ಹಿರೇಮಠ, ರಮೇಶ ಬಂಡಿ, ಆಹಾರ ನಿರೀಕ್ಷಕರಾದ ಕೆ.ಎಂ. ಜೋಶಿ, ವಿನಾಯಕ ದೀಕ್ಷಿತ , ಜಯದೇವ ವಂಟಮೂರಿಮಠ ಇದ್ದರು.

ಮಾಧುರಿ ಕುಲಕರ್ಣಿ ಗ್ರಾಹಕರ ಹಕ್ಕುಗಳ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆಹಾರ ಅಪವ್ಯಯ ಕುರಿತು ಜಾಗೃತಿಗಾಗಿ ಆಹಾರ ತಜ್ಞ ಬಸವರಾಜ ಬಿಳಿಅಂಗಡಿ ಪ್ರಾತ್ಯಕ್ಷಿಕೆ ನೀಡಿದರು. ವೀಣಾ ಎಲ್. ಕಡ್ಲಿಗುಂದಿ ಸ್ಬಾಗತಿಸಿದರು. ಗಂಗಾ ಕರಡಿಗುದ್ದಿ ನಿರೂಪಿಸಿ, ನಾರಾಯಣ ಇಳಿಗೇರ ವಂದಿಸಿದರು. ಕೆಪಿಇಎಸ್‌ ಕಾಲೇಜು ಪ್ರಾಚಾರ್ಯ ಸಂಜೀವ ಪಾಟೀಲ ಇದ್ದರು.