ಸಾರಾಂಶ
ಕೊಪ್ಪಳ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿ ಜಾರಿ ಮಾಡುತ್ತೇವೆ. ಆದ್ದರಿಂದ ಈ ಭಾಗದ ರೈತರು ಯಾವುದೇ ಕಾರಣಕ್ಕೂ ಸೋಲಾರ್ ಹಾಗೂ ವಿಂಡ್ ಪವರ್ ಕಂಪನಿಗೆ ಜಮೀನು ನೀಡಬೇಡಿ.
ಕೊಪ್ಪಳ:
ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿಯಲ್ಲಿ ಪ್ರಸಕ್ತ ವರ್ಷ ಜಾರಿಗೊಳಿಸಲಾಗುತ್ತಿದೆ. ಹೀಗಾಗಿ, ಸೋಲಾರ್ ಮತ್ತು ವಿಂಡ್ ಪವರ್ಗೆ ರೈತರು ಭೂಮಿಯನ್ನು ಲೀಜ್ಗೆ ಕೊಡಬೇಡಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.ತಾಲೂಕಿನ ಅಳವಂಡಿ, ಗುಡಿಗೇರಿ, ಮುರ್ಲಾಪುರ, ಘಟ್ಟರಡ್ಡಿಹಾಳ ಹಾಗೂ ಹೈದರನಗರ ಗ್ರಾಮಗಳಲ್ಲಿ ಅಂದಾಜು ₹ 22.63 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ, ಮಾತನಾಡಿದರು.
ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಮಧ್ಯಪ್ರದೇಶ ಮಾದರಿ ಜಾರಿ ಮಾಡುತ್ತೇವೆ. ಆದ್ದರಿಂದ ಈ ಭಾಗದ ರೈತರು ಯಾವುದೇ ಕಾರಣಕ್ಕೂ ಸೋಲಾರ್ ಹಾಗೂ ವಿಂಡ್ ಪವರ್ ಕಂಪನಿಗೆ ಜಮೀನು ನೀಡಬೇಡಿ. ಈಗಾಗಲೇ ಕೆಲವೊಂದಿಷ್ಟು ರೈತರು ತಮ್ಮ ಹೊಲಗಳನ್ನು ಲೀಜ್ಗೆ ನೀಡಿದ್ದೀರಿ. ಇನ್ನಾದರೂ ಆ ಕೆಲಸ ನಿಲ್ಲಿಸಿ ಎಂದು ಮನವಿ ಮಾಡಿದ ಶಾಸಕರು, ಈ ಭಾಗವನ್ನು ಸಂಪೂರ್ಣ ನೀರಾವರಿ ಪ್ರದೇಶವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಕಲ್ಯಾಣ ಪಥದ ಯೋಜನೆಯಡಿ ಅಳವಂಡಿ ಹೋಬಳಿಯಲ್ಲಿ ಅಂದಾಜು ₹ 18.63 ಕೋಟಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅಭಿವೃದ್ಧಿ, ಅಳವಂಡಿಯಲ್ಲಿ ₹ 3 ಕೋಟಿ ವೆಚ್ಚದಲ್ಲಿ ನೂತನ ಪ್ರವಾಸಿ ಮಂದಿರದ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ಈ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಹನುಮರಡ್ಡಿ ಅಂಗನಕಟ್ಟಿ, ಭರಮಪ್ಪ ಹಟ್ಟಿ, ಗಾಳೆಪ್ಪ ಪೂಜಾರ, ಗ್ಯಾರಂಟಿ ತಾಲೂಕು ಅಧ್ಯಕ್ಷ ಬಾಲಚಂದ್ರನ ಮುನಿರಬಾದ್, ನವೋದಯ ವಿರೂಪಣ್ಣ, ಭೀಮಣ್ಣ ಬೋಚನಹಳ್ಳಿ, ಅನ್ವರ್ ಗಡಾದ, ತೋಟಪ್ಪ ಸಿಂಟ್ರ, ಸುರೇಶ ದಾಸರೆಡ್ಡಿ, ಗವಿಸಿದ್ಧನಗೌಡ ಮುದ್ದಾಬಳ್ಳಿ, ತಹಸೀಲ್ದಾರ್ ವಿಠ್ಠಲ್ ಚೌಗಲೆ, ತಾಪಂ ಇಒ ದುಂಡೇಶ ತುರಾದಿ, ಅಕ್ಬರ್ ಪಲ್ಟಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.