ಬದಲಾವಣೆಯ ನಿಯಮ ಭಾಷೆಗಳಿಗೆ ಮಾರಕವಾಗದಿರಲಿ: ವಿನಯಾ ಒಕ್ಕುಂದ

| Published : Mar 26 2025, 01:35 AM IST

ಬದಲಾವಣೆಯ ನಿಯಮ ಭಾಷೆಗಳಿಗೆ ಮಾರಕವಾಗದಿರಲಿ: ವಿನಯಾ ಒಕ್ಕುಂದ
Share this Article
  • FB
  • TW
  • Linkdin
  • Email

ಸಾರಾಂಶ

ಬದಲಾವಣೆ ಜಗದ ನಿಯಮ. ಆದರೆ, ಆ ಬದಲಾವಣೆಯು ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಬಾರದು ಎಂದು ಹಿರಿಯ ಲೇಖಕಿ ಡಾ. ವಿನಯಾ ಒಕ್ಕುಂದ ಹೇಳಿದರು.

ಧಾರವಾಡ: ಬದಲಾವಣೆ ಜಗದ ನಿಯಮ. ಆದರೆ, ಆ ಬದಲಾವಣೆಯು ಯಾವುದೇ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಬಾರದು ಎಂದು ಹಿರಿಯ ಲೇಖಕಿ ಡಾ. ವಿನಯಾ ಒಕ್ಕುಂದ ಹೇಳಿದರು.

ಇಲ್ಲಿಯ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಮಂಗಳವಾರ ನಡೆದ ಧಾರವಾಡ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬದಲಾವಣೆಯ ನಿಯಮಕ್ಕೆ ಸಿಲುಕಿ ಕನ್ನಡ ಸಹ ತನ್ನ ಮರ್ಯಾದೆ ಕಳೆದುಕೊಳ್ಳುವ ಕಾಲಘಟ್ಟಕ್ಕೆ ಬಂದಿರುವುದು ಬೇಸರದ ಸಂಗತಿ. ಈ ವಿಷಯದಲ್ಲಿ ನಾವು ಬ್ರಿಟಿಷರನ್ನು ಎದುರಿಸಬಹುದು. ಆದರೆ, ನಮ್ಮನವರನ್ನೇ ಎದುರಿಸುವುದು ಸಂಕಷ್ಟವಾಗಿದೆ ಎಂದರು.

ಪ್ರಸ್ತುತ ಬರವಣಿಗೆ ಕಷ್ಟದ ಕೆಲಸ ಹಾಗೂ ಬೇಡವಾದ ವಸ್ತುವೂ ಹೌದು. ಅಲ್ಲದೇ ಅಭಿವ್ಯಕ್ತಿ ಮೇಲೆ ಹಲ್ಲೆ ನಡೆಯುತ್ತಿದೆ. ನಿಜ ಹೇಳದೇ ಸುಖಾಸುಮ್ಮನೆ ಹೇಳಿದ್ದನ್ನು ಒಪ್ಪಿಕೊಳ್ಳುವ ಕಾಲ ಬಂದಿದೆ. ಜೊತೆಗೆ ಸಾಹಿತ್ಯ ಕ್ಷೇತ್ರ ಖರೀದಿಗೆ ಒಳಗಾಗಿದ್ದು, ಸಾಹಿತ್ಯದ ಶ್ರಮಕ್ಕಾಗಿ ಪ್ರಶಸ್ತಿ ತೆಗೆದುಕೊಂಡವರು ಭಯ ಪಡುವ ಸ್ಥಿತಿ ಬಂದಿದೆ. ಕವಿ, ಕಲಾವಿದರು ಹಾಗೂ ಪ್ರತಿಭೆಗಳು ಸಹ ಮಾರಾಟಗೊಳ್ಳುತ್ತಿದ್ದು, ನಮ್ಮನ್ನು ಸುತ್ತಿಕೊಂಡಿರುವ ಸೂತಕಗಳಿಂದ ಹೊರ ಬರಬೇಕಾಗಿದೆ ಎಂದು ಎಚ್ಚರಿಸಿದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಸಂತೋಷ ಹಾನಗಲ್ಲ, ಕನ್ನಡವನ್ನು ನಾವು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬ ಚಿಂತನೆ ಆಗಬೇಕಾಗಿದೆ. ನಾಡಿನ ಸಂಸ್ಕೃತಿ ಬಗ್ಗೆ ಮುಂದಿನ ಪೀಳಿಗೆಗೆ ಏನು ಹೇಳುತ್ತಿದ್ದೇವೆ ಎಂಬ ಆಲೋಚನೆ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮಾತೃ ಭಾಷೆಯನ್ನೂ ಸರ್ಕಾರದ ಆದೇಶದಿಂದ ಕಲಿಯಬೇಕಾದ ಸ್ಥಿತಿ ಬಂದಿದ್ದು ನಿಜಕ್ಕೂ ಖೇದಕರ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಆಶಯ ನುಡಿಗಳನ್ನಾಡಿದರು. ಶಂಕರ ಹಲಗತ್ತಿ, ಪ್ರಕಾಶ ಉಡಕೇರಿ, ಶರಣಬಸವ ಜೋಳಿನ ಮಾತನಾಡಿದರು. ಡಾ. ಪ್ರಭಾ ಗುಡ್ಡದಾನ್ವೇರಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಸಾಹಿತಿ ಡಾ. ನಿತಿನ್‌ಚಂದ್ರ ಹತ್ತಿಕಾಳ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು.

ರಾಜೇಶ್ವರಿ ಹತ್ತಿಕಾಳ, ಪ್ರೊ. ಕೆ.ಎಸ್. ಕೌಜಲಗಿ, ಡಾ. ಜಿನದತ್ತ ಹಡಗಲಿ, ಡಾ. ಎಸ್.ಎಸ್. ದೊಡಮನಿ, ಎಸ್.ಎಫ್. ಸಿದ್ಧನಗೌಡರ, ಶಾಂತವೀರ ಬೆಟಗೇರಿ, ಎಸ್.ಎಚ್. ಪ್ರತಾಪ ಇದ್ದರು.

ತಾಲೂಕಾಧ್ಯಕ್ಷ ಡಾ. ಮಹಾಂತೇಶ ನರೇಗಲ್ಲ ಸ್ವಾಗತಿಸಿದರು. ಉಮಾದೇವಿ ಬಾಗಲಕೋಟೆ ನಿರೂಪಿಸಿದರು. ಮಾರ್ತಾಂಡಪ್ಪ ಕತ್ತಿ ವಂದಿಸಿದರು.

ಮೆರವಣಿಗೆ

ಧಾರವಾಡ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆ ಮಂಗಳವಾರ ಸಾಂಸ್ಕೃತಿಕ ನಗರಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರದ ಕಡಪಾ ಮೈದಾನದಿಂದ ಪ್ರಾರಂಭವಾದ ಮೆರವಣಿಗೆಯು ಕರ್ನಾಟಕ ವಿದ್ಯಾರ್ವಕ ಸಂಘ, ಅಂಜುಮನ್ ವೃತ್ತ, ಹಳೇ ಬಸ್ ನಿಲ್ದಾಣ, ವಿವೇಕಾನಂದ ಸರ್ಕಲ್, ಮಾರುಕಟ್ಟೆ ಮಾರ್ಗವಾಗಿ ಆಝಾದ ಪಾರ್ಕ್‌, ಜುಬ್ಲಿ ಸರ್ಕಲ್, ಎಲ್‌ಐಸಿ, ಡಯಟ್ ಮಾರ್ಗವಾಗಿ ಮುಖ್ಯ ವೇದಿಕೆ ಆಲೂರ್ ವೆಂಕಟರಾವ್ ಸಭಾಭವನಕ್ಕೆ ಬಂದು ತಲುಪಿತು.