ಸಾರಾಂಶ
ದೇಶದ ಬಗ್ಗೆ ಬಿಜೆಪಿ ಪ್ರಮುಖ ವಿಚಾರ ಮಾತನಾಡದೆ ಸುಮ್ಮನೆ ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಒಂದೇ ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಮುಂದೆ ಬಂದಿಲ್ಲ.
ಕುಂದಗೋಳ:
ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬೆನ್ನು ತೋರಿಸಿ ಹೋಗುವುದಿಲ್ಲ. ಆ ಕೆಲಸ ಮಾಡುವುದು ಬಿಜೆಪಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಬಗ್ಗೆ ಬಿಜೆಪಿ ಪ್ರಮುಖ ವಿಚಾರ ಮಾತನಾಡದೆ ಸುಮ್ಮನೆ ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಒಂದೇ ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಮುಂದೆ ಬಂದಿಲ್ಲ ಎಂದರು.
ಪಕ್ಷದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಇಂದಿಗೂ ಪ್ರತಿಯೊಬ್ಬರ ಮನೆಗೂ ತಿಂಗಳಿಗೆ ₹ 8ರಿಂದ ₹ 10 ಸಾವಿರ ತಲುಪುತ್ತಿದೆ. ಆದರೆ ಹತ್ತು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದಿಂದ ಕನಿಷ್ಠ ₹ 100 ನೇರವಾಗಿ ಪ್ರತಿಯೊಬ್ಬರಿಗೂ ಮುಟ್ಟಿಲ್ಲ ಎಂದು ಆರೋಪಿಸಿದರು.ಪಕ್ಷದ ಯುವ ಅಭ್ಯರ್ಥಿ ವಿನೋದ ಅಸೋಟಿ ಮರಿ ಟಗರು. ಪ್ರಹ್ಲಾದ ಜೋಶಿ ಅವರಿಗೆ ಈ ಚುನಾವಣೆಯಲ್ಲಿ ಹೇಗೆ ಸೋಲಿಸುತ್ತಾರೆ ನೋಡಿ ಎಂದು ಭವಿಷ್ಯ ನುಡಿದರು.
ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಸದಾ ಇದ್ದೇನೆ. ಮತದಾರರ ಆಶೀರ್ವಾದದಿಂದಲೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಶಿವಾನಂದ ಬೆಂತೂರ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ರಮೇಶ ಕೊಪ್ಪದ, ದೃತಿ ಸಾಲ್ಮನಿ, ಅರವಿಂದ ಕಟಗಿ, ಸುರೇಶ ಸವಣೂರ ಸೇರಿದಂತೆ ಹಲವು ಮುಖಂಡರು ಇದ್ದರು.